ಪ್ರಸ್ತಾಪಿತ ಜಾನುವಾರು ಹತ್ಯಾ ನಿಷೇಧ ಕಾಯ್ದೆಗೆ ಒಕ್ಕೊರಲ ವಿರೋಧ

Update: 2020-12-03 17:47 GMT

ಬಸವಕಲ್ಯಾಣ, ಡಿ.3: ರಾಜ್ಯ ಸರಕಾರವು ಜಾರಿಗೊಳಿಸಲು ಹೊರಟಿರುವ ಜಾನುವಾರು ಹತ್ಯಾ ನಿಷೇಧ ಕಾನೂನಿಗೆ ದಲಿತರು, ರೈತರು, ಕೂಲಿಕಾರರು ಹಾಗೂ ಮುಸ್ಲಿಮರನ್ನೂ ಒಳಗೊಂಡಂತೆ ವಿವಿಧ ಸಮುದಾಯಗಳ ನಾಯಕರು ಬಲವಾದ ವಿರೋಧ ವ್ಯಕ್ತಪಡಿಸಿದರು.

ಅಲ್-ಜಮೀಯತುಲ್ ಖುರೇಷ್ ಸಂಘಟನೆಯು ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿಂದು ಸಂಘಟಿಸಿದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ವಿವಿಧ ಸಮುದಾಯಗಳ ನಾಯಕರು ಯಾವುದೇ ಕಾರಣಕ್ಕೂ ಸರಕಾರ ಇಂತಹ ಜನವಿರೋಧಿ ಕಾನೂನನ್ನು ಜಾರಿಗೊಳಿಸಬಾರದು ಎಂದು ಆಗ್ರಹಿಸಿದರು.

ಸಮಾವೇಶದಲ್ಲಿ ಮಾತನಾಡಿದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಖಾಸಿಂ ಅಲಿ, ಈ ಪ್ರಸ್ತಾಪಿತ ಕಾನೂನಿನಿಂದ ಕೇವಲ ಮುಸ್ಲಿಮರು ಮಾತ್ರವಲ್ಲದೆ ಎಲ್ಲ ಸಮುದಾಯಗಳ ಬಡವರು ಬಾಧಿತರಾಗಲಿದ್ದಾರೆ. ಮೇಲ್ನೋಟಕ್ಕೆ ಇದು ಮುಸ್ಲಿಮರ ವಿರೋಧಿ ಕಾನೂನು ಎಂಬಂತೆ ಕಾಣುತ್ತದೆ. ಆದರೆ, ವಾಸ್ತವದಲ್ಲಿ ಇದು ಎಲ್ಲ ಸಮುದಾಯಗಳ ಬಡವರಿಗೆ ವಿರುದ್ಧವಾಗಿರುವ ಕಾನೂನಾಗಿದೆ ಎಂದರು.

ಪ್ರವಾಹ, ಬರಗಾಲಗಳಂತಹ ಪ್ರಾಕೃತಿಕ ವಿಕೋಪಗಳ ಕಾರಣಕ್ಕಾಗಿ ನಮ್ಮ ರೈತರಿಗೆ ಕೃಷಿಯಿಂದ ಬರುವ ಆದಾಯ ಯಾವಾಗಲೂ ಅನಿಶ್ಚಿತವಾಗಿರುತ್ತದೆ. ಆದುದರಿಂದಲೆ, ಅವರು ಆಕಳು, ಎಮ್ಮೆಗಳಂತಹ ಪ್ರಾಣಿಗಳನ್ನೂ ಸಾಕುತ್ತಾರೆ ಹಾಗೂ ಕಷ್ಟ ಕಾಲದಲ್ಲಿ ಅವುಗಳನ್ನು ಮಾರಿ ಬದುಕುತ್ತಾರೆ. ಈ ಕಾನೂನು ಪ್ರಮುಖ ಜಾನುವಾರುಗಳ ಹತ್ಯೆಯನ್ನು ನಿಷೇಧಿಸಿದರೆ ಅವುಗಳನ್ನು ಕೊಂಡುಕೊಳ್ಳುವುದಕ್ಕೆ ಯಾರೂ ಮುಂದೆ ಬರುವುದಿಲ್ಲ. ಹಾಗಾಗಿ, ರೈತರಿಗೆ ಅದರಿಂದ ಬರುವ ಆದಾಯವೂ ತಪ್ಪುತ್ತದೆ ಎಂದು ಅವರು ನುಡಿದರು.

ಈ ಜಾನುವಾರು ಹತ್ಯೆಯ ನಿಷೇಧದಿಂದ ಒಕ್ಕಲಿಗರು ಮತ್ತು ಮರಾಠರನ್ನೂ ಒಳಗೊಂಡಂತೆ ಎಲ್ಲ ಮಾಂಸಾಹಾರಿ ಸಮುದಾಯಗಳ ಜನರೂ ತೊಂದರೆ ಅನುಭವಿಸಬೇಕಾಗುತ್ತದೆ. ಜಾನುವಾರು ಹತ್ಯೆಯ ನಿಷೇಧದ ಮೂಲಕ ಸರಕಾರ ಬಹಳಷ್ಟು ಮಾಂಸಾಹಾರವನ್ನೇ ನಿಷೇಧಿಸಲು ಹೊರಟಿದೆ. ದನ, ಎಮ್ಮೆ, ಕೋಣಗಳ ಮಾಂಸಾಹಾರ ನಿಷೇಧವಾದರೆ ಪ್ರೋಟೀನ್ ಆಹಾರಕ್ಕೆ ಕೊರತೆ ಉಂಟಾಗುತ್ತದೆ ಎಂದು ಖಾಸಿಂ ಅಲಿ ಆತಂಕ ವ್ಯಕ್ತಪಡಿಸಿದರು.

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ನಾಯಕ ಮುಜಾಹಿದ್ ಪಾಶಾ ಖುರೇಷಿ ಮಾತನಾಡಿ, ಭಾರತವು ವಿಭಿನ್ನ ಸಂಸ್ಕೃತಿ ಮತ್ತು ಪರಂಪರೆಗಳನ್ನು ಪರಿಪಾಲಿಸುವ ಹಲವು ಜಾತಿ, ಧರ್ಮ, ಪಂಗಡಗಳ ನೆಲೆವೀಡಾಗಿದ್ದು ಯಾವುದೇ ಒಂದು ಜನಸಮುದಾಯವು ತನ್ನ ಆಚಾರ ವಿಚಾರಗಳೇ ಶ್ರೇಷ್ಠವೆಂದು ಪ್ರತಿಪಾದಿಸುತ್ತಾ ಅವುಗಳನ್ನು ಇತರ ಸಮುದಾಯಗಳ ಮೇಲೆ ಹೇರುವುದು ಬಹುತ್ವ ಪರಂಪರೆಯ ಭಾರತದ ಭವಿಷ್ಯಕ್ಕೆ ಮಾರಕವಾಗಿದೆ ಎಂದರು.

ಸಮಾಜವಿರೋಧಿ ಪುಂಡರು, ಗೂಂಡಾಗಳು ಗೋರಕ್ಷಣೆಯ ಹೆಸರಿನಲ್ಲಿ ಅಮಾಯಕ ಬಡವರ ಮೇಲೆ ದಾಳಿ ಮಾಡುವುದಕ್ಕೆ, ಅವರ ಜಾನುವಾರುಗಳನ್ನು ವಶಪಡಿಸಿಕೊಳ್ಳುವುದಕ್ಕೆ, ಅವರ ಆಸ್ತಿಪಾಸ್ತಿಗಳನ್ನು ಲೂಟಿ ಮಾಡುವುದಕ್ಕೆ ಹಾಗೂ ಅವರಿಗೆ ನಿರಂತರವಾಗಿ ಕಿರುಕುಳ ನೀಡುವುದಕ್ಕೆ ಪ್ರಚೋದನೆ ನೀಡಿದಂತಾಗುತ್ತದೆ. ಅಮಾಯಕರನ್ನು ಶೋಷಿಸಲು, ದಮನಿಸಲು ನೆರವಾಗುವಂತೆ ಈ ಕಾನೂನಿನಲ್ಲಿ ಅಪರಾಧಿಗಳಿಗೆ ಐದು ವರ್ಷಗಳ ಕಾರಾಗೃಹ ಶಿಕ್ಷೆ, ಒಂದು ಲಕ್ಷ ರೂಪಾಯಿತನಕ ದಂಡ ಹಾಗೂ ಪ್ರಾಣಿಗಳನ್ನು ಸಾಗಿಸುವ ವಾಹನದ ಜಪ್ತಿ ಮುಂತಾದ ಕಠಿಣ ಕ್ರಮಗಳನ್ನು ಸೇರಿಸಲಾಗಿದೆ ಎಂದು ಅವರು ಹೇಳಿದರು.

ಸಮಾವೇಶದಲ್ಲಿ ಸಾಮಾಜಿಕ ಕಾರ್ಯಕರ್ತ ಅಸ್ಲಂ, ಕ್ರೈಸ್ತ ಮುಖಂಡ ಅರ್ಜುನ್ ಕನಕ್, ಅಲ್-ಜಮೀಯತುಲ್ ಖುರೇಷ್ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಅಬ್ದುಲ್ ಸತ್ತಾರ್, ರೈತ ನಾಯಕರಾದ ಚಂದ್ರಕಾಂತ್ ಮತ್ತು ಸುಭಾಷ್ ರಕ್ಟೆ, ದಲಿತ ನಾಯಕ ಮನೋಹರ್ ಮೈಸೆ, ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಕಾರ್ಯದರ್ಶಿ ಮೆರಾಜುದ್ದೀನ್, ಬಹುಜನ ಮುಕ್ತಿ ಮೋರ್ಚಾದ ಮಿಲಿಂದ್ ಹುಬಾರೆ, ಮಾದಿಗ ಸಮುದಾಯದ ನಾಯಕ ಯುವರಾಜ್ ಭೆಂಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಈ ಕಾನೂನು ಕೇವಲ ಬಡವರನ್ನಷ್ಟೇ ಗುರಿಯಾಗಿಸಿಕೊಂಡಿದೆಯೇ ಹೊರತು ಗುಲಾಬಿ ಕ್ರಾಂತಿಯ ಹೆಸರಿನಲ್ಲಿ ಗೋಮಾಂಸವನ್ನು ದೊಡ್ಡ ಪ್ರಮಾಣದಲ್ಲಿ ವಿದೇಶಗಳಿಗೆ ರಫ್ತು ಮಾಡುತ್ತಿರುವ ದೊಡ್ಡ ದೊಡ್ಡ ಕಂಪನಿಗಳಿಗೆ ನಿರ್ಬಂಧ ಹೇರುವುದಿಲ್ಲ. ವಾಸ್ತವದಲ್ಲಿ, ಗೋರಕ್ಷಣೆ ಅವರ ಉದ್ದೇಶವಲ್ಲ, ಬದಲಿಗೆ ಗೋವಿನ ಹೆಸರಿನಲ್ಲಿ ತಮ್ಮ ರಾಜಕೀಯ ಅಜೆಂಡಾವನ್ನು ಜಾರಿ ಮಾಡಿ, ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟು ಜನರಲ್ಲಿ ಒಡಕು ಮೂಡಿಸಿ ತಮ್ಮ ಹಿಂದೂ ಮತಬ್ಯಾಂಕನ್ನು ಗಟ್ಟಿಗೊಳಸಿಕೊಂಡು ಅಧಿಕಾರಕ್ಕೇರುವುದು ಅವರ ಉದ್ದೇಶವಾಗಿದೆ.

-ಮುಜಾಹಿದ್ ಪಾಶಾ ಖುರೇಷಿ, ಡಬ್ಲ್ಯುಪಿಐ ರಾಜ್ಯ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News