ನೂತನ ವಿಜಯನಗರ ಜಿಲ್ಲೆ ರಚನೆ: ರಾಜೀನಾಮೆ ನೀಡಲು ಸಿದ್ಧ ಎಂದ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ
ಬಳ್ಳಾರಿ, ಡಿ. 3: ನೂತನ ವಿಜಯನಗರ ಜಿಲ್ಲೆ ರಚನೆಯನ್ನು ವಿರೋಧಿಸಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅಖಂಡ ಬಳ್ಳಾರಿಯ ಜನತೆ ಬಯಸಿದರೆ ನಾನು ರಾಜೀನಾಮೆ ನೀಡಲು ಸಿದ್ಧ ಎಂದು ಶಾಸಕ ಸೋಮಶೇಖರ ರೆಡ್ಡಿ ಆಕ್ರೋಶ ಹೊರಹಾಕಿದ್ದಾರೆ.
ಗುರುವಾರ ಕನಕದಾಸ ಜಯಂತಿ ಕಾರ್ಯಕ್ರಮದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನಗೆ ಮತ ಹಾಕಿ ಗೆಲ್ಲಿಸಿದ ಮತದಾರರು ಸೂಚಿಸಿದರೆ, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ. ಜನತೆ ನನಗೆ ಪ್ರಶ್ನಿಸುತ್ತಿದ್ದಾರೆಂದು ಜಿಲ್ಲೆ ವಿಭಜನೆಗೆ ಆಕ್ಷೇಪ ವ್ಯಕ್ತಪಡಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿನ ಜಿಲ್ಲಾ ಕೇಂದ್ರದ ಕಚೇರಿಗಳನ್ನು ಅಗತ್ಯವಿದ್ದರೆ ಹೊಸಪೇಟೆಗೆ ಶಿಫ್ಟ್ ಮಾಡಲಿ. ಆದರೆ, ಯಾವುದೇ ಕಾರಣಕ್ಕೂ ಜಿಲ್ಲೆ ಒಡೆಯುವುದು ಸರಿಯಲ್ಲ. ಈ ಸಂಬಂಧ ಸಚಿವ ಆನಂದ್ ಸಿಂಗ್ ಅವರ ಮನವೋಲಿಸುವೆ ಎಂದ ಅವರು, ಇಂದು ಬಳ್ಳಾರಿ, ವಿಜಯನಗರ ಪ್ರತ್ಯೇಕ ಆಗುತ್ತಿದ್ದರೂ ನಾಳೆ ಪುನಃ ಒಂದಾಗಬಹುದು ಎಂದರು.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕನ್ನು ಬಳ್ಳಾರಿ ಜಿಲ್ಲೆಗೆ ಸೇರಿಸುವುದು ಬೇಡ. ಈ ಬಗ್ಗೆ ನಾನು ಸಚಿವ ಬಿ.ಶ್ರೀರಾಮುಲು ಅವರ ಮನವೊಲಿಸುತ್ತೇನೆ. ಹೊಸ ತಾಲೂಕುಗಳಿಗೆ ಸೌಲಭ್ಯಗಳನ್ನು ಕಲ್ಪಿಸುತ್ತಾ ಹೋದರೆ ನಾಳೆ ನೆರೆಯ ಆಂಧ್ರಪ್ರದೇಶದ ನಾನಾ ತಾಲೂಕುಗಳು ಇವೆ. ಚಳ್ಳಕೆರೆ ತಾಲೂಕಿನ ಜನರು ಕೇಳುತ್ತಾರೆ ಎಂದರು.