ಶಿವಮೊಗ್ಗದಲ್ಲಿ ಗಲಭೆ ಪ್ರಕರಣ; 62 ಮಂದಿ ಸೆರೆ : ಐಜಿಪಿ ಎಸ್ .ರವಿ

Update: 2020-12-04 12:33 GMT

ಶಿವಮೊಗ್ಗ: ನಿನ್ನೆ ನಗರದಲ್ಲಿ ನಡೆದ ಗಲಭೆ  ಪ್ರಕರಣಕ್ಕೆ ಸಂಬಂಧಿಸಿದಂತೆ  62 ಮಂದಿಯನ್ನು ಬಂಧಿಸಲಾಗಿದೆ ಎಂದು ಪೂರ್ವ ವಲಯ ಐಜಿಪಿ ಎಸ್ .ರವಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಸಂಪೂರ್ಣ ಹತೋಟಿಗೆ ಬಂದಿದೆ. ಶಾಂತಿ ನೆಲೆಸುತ್ತಿದೆ ಎಂದು ಹೇಳಿದರು. ಘಟನೆಯಲ್ಲಿ 19 ಮಂದಿ ಗಾಯಗೊಂಡಿದ್ದಾರೆ. ದೊಡ್ಡಪೇಟೆ ಮತ್ತು ಕೋಟೆ‌ಠಾಣೆ ವ್ಯಾಪ್ತಿಯಲ್ಲಿ 10 ಪ್ರಕರಣಗಳು ದಾಖಲಾಗಿವೆ. ನಾಗೇಶ್ ಹಲ್ಲೆ ಪ್ರಕರಣದ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದರು.

ಈಗಾಗಲೇ 148 ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ. ಬೇರೆ ಜಿಲ್ಲೆಗಳಿಂದ ಬರುವ ದುಷ್ಕರ್ಮಿಗಳನ್ನು ತಡೆಯಲು 9 ಕಡೆ ಚೆಕ್ ಪೋಸ್ಟ್ ಹಾಕಲಾಗಿದೆ.19 ಮೊಬೈಲ್ ಗಸ್ತು ವಾಹನ ಹಾಗೂ 22 ಚಿತಾ ವಾಹನಗಳು ನಗರದಾದ್ಯಂತ ಗಸ್ತು ತಿರುಗುತ್ತಿವೆ ಎಂದ ಅವರು 3 ಪ್ಯಾಟ್ರೋಲ್ ವಾಹನ  ಗಸ್ತು ತಿರುಗುತ್ತಿವೆ. ನಗರದಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ದಾವಣಗೆರೆ ವಲಯದ 1 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ ಎಂದರು.

ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬೇಡಿ ಎಂದ ಅವರು, ಪರಿಸ್ಥಿತಿ ಬಿಗಡಾಯಿಸದಂತೆ ಪೊಲೀಸ್ ಇಲಾಖೆ ನೋಡಿಕೊಳ್ಳುತ್ತದೆ. ನಗರದಲ್ಲಿ ಶಾಂತಿ‌ ನೆಲೆಸಲು ಸಾರ್ವಜನಿಕರು ಪೊಲೀಸ್ ರೊಂದಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಮಾತನಾಡಿ, ಡಿ.5 ರವರೆಗೆ ಕರ್ಪ್ಯೂ ಜಾರಿಯಲ್ಲಿರಲಿದೆ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬೇಡಿ. ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ ಎಂದರು. ಪತ್ರಿಕಾಗೋಷ್ಠಿಯಲ್ಲಿ ಎಸ್ ಪಿ ಕೆ.ಎಂ ಶಾಂತರಾಜು ಇದ್ದರು.

ಬಂಧಿತರು ನಿರ್ದಿಷ್ಟ ಕೋಮಿಗೆ ಸೇರಿದವರು ಎಂಬುದರ ಬಗ್ಗೆ ತನಿಖೆಯಲ್ಲಿ ಕಂಡು ಬಂದಿಲ್ಲ ಎಂದು ಐಜಿಪಿ ಎಸ್.ರವಿ ಸ್ಪಷ್ಟಪಡಿಸಿದ್ದಾರೆ.

ಹಲ್ಲೆಯಿಂದ ಗಾಯಗೊಂಡಿರುವ ನಾಗೇಶನನ್ನು ನಾನು ಭೇಟಿ ಮಾಡಿ ಮಾತನಾಡಿದ್ದೇನೆ. ಆತ ಪ್ರಾಣಾಪಾಯದಿಂದ ಪಾರಾಗಿದ್ದು, ಮುಖಕ್ಕೆ  ಮಾಸ್ಕ್ ಹಾಕಿರುವ ವ್ಯಕ್ತಿಗಳು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾನೆ. ಆದರೆ ಇಂತಹ ಕೋಮಿನವರೇ ಹಲ್ಲೆ ನಡೆಸಿರುವ ಬಗ್ಗೆ ಹೇಳಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News