×
Ad

ನಾಳೆಯಿಂದ ವಿಧಾನಮಂಡಲ ಚಳಿಗಾಲದ ಅಧಿವೇಶನ: ಬಿಸಿ ಬಿಸಿ ಚರ್ಚೆಗೆ ವೇದಿಕೆ ಸಜ್ಜು

Update: 2020-12-06 17:37 IST

ಬೆಂಗಳೂರು, ಡಿ. 6: ರಾಜ್ಯ ವಿಧಾನ ಮಂಡಲದ ಚಳಿಗಾಲದ ಅಧಿವೇಶನವು ನಾಳೆಯಿಂದ(ಡಿ.7) ಆರಂಭವಾಗುತ್ತಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಆಡಳಿತಾರೂಢ ಬಿಜೆಪಿ ಸರಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಸಿಎಂ ಸೇರಿ ಸಚಿವರ ವಿರುದ್ಧ ವಾಗ್ವಾದಕ್ಕೆ  ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಸನ್ನದ್ಧವಾಗಿದೆ.

ಕೋವಿಡ್-19 ಹಿನ್ನೆಲೆಯಲ್ಲಿ ಈ ಬಾರಿ ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣವಿಧಾನಸೌಧದ ಬದಲು, ಬೆಂಗಳೂರಿನ ವಿಧಾನಸೌಧದಲ್ಲೆ ನಡೆಯುತ್ತಿರುವುದು ವಿಶೇಷ. ರಾಜರಾಜೇಶ್ವರಿ ನಗರ (ಆರ್.ಆರ್.ನಗರ) ಹಾಗೂ ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರಗಳ ಉಪಚುನಾವಣೆಯ ಗೆಲುವಿನ ಹುಮ್ಮಸ್ಸಿನಲ್ಲಿರುವ ಬಿಜೆಪಿಯು ಪ್ರತಿಪಕ್ಷಗಳನ್ನು ಎದುರಿಸಲು ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆ ನಡೆಸಿದೆ.

ಈ ನಡುವೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ನಿವಾಸದಲ್ಲಿ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಸದಸ್ಯರ ಸಭೆ ಕರೆದು ಸದನದಲ್ಲಿ ಸರಕಾರದ ವಿರುದ್ಧ ಹೋರಾಟ ಮಾಡುವ ಬಗ್ಗೆ ರೂಪುರೇಷೆ ಸಿದ್ಧತೆ ಮಾಡಿದ್ದಾರೆ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಸೋಮವಾರ ಪಕ್ಷದ ಶಾಸಕರ ಸಭೆ ಕರೆದಿದ್ದು, ಅಧಿವೇಶನದಲ್ಲಿ ಸರಕಾರದ ವಿರುದ್ಧ ಯಾವ ಕ್ರಮಗಳನ್ನು ಕೈಗೊಳ್ಳಬೇಕೆಂದು ಚರ್ಚಿಸಲಿದ್ದಾರೆ.

ಈ ಮಧ್ಯೆ ಬಿಜೆಪಿಯಲ್ಲಿನ ನಾಯಕತ್ವ ಬದಲಾವಣೆ, ಸಚಿವ ಸಂಪುಟ ವಿಸ್ತರಣೆ ವಿಳಂಬದ ಸುತ್ತಲಿನ ಚರ್ಚೆ, ಆಡಳಿತದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅವರ ಪುತ್ರ ವಿಜಯೇಂದ್ರ ಹಸ್ತಕ್ಷೇಪದ ಕುರಿತು ಸ್ವಪಕ್ಷದ ಶಾಸಕರಿಂದಲೇ ಕೇಳಿಬಂದಿರುವ ಆರೋಪಗಳು, ಇದರ ಜೊತೆಗೆ ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಬಿಎಸ್‍ವೈ ಅವರ ಆಪ್ತ ಸಂತೋಷ್ ಆತ್ಮಹತ್ಯೆ ಪ್ರಕರಣವೂ ವಿಧಾನ ಮಂಡಲ ಅಧಿವೇಶನದಲ್ಲಿ ಪ್ರತಿಧ್ವನಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಹೈಕೋರ್ಟ್ ಬಿಬಿಎಂಪಿಗೆ ಚುನಾವಣೆ ನಡೆಸುವಂತೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ, ಚುನಾವಣೆಯನ್ನು ಮುಂದೂಡುವ ಸಂಬಂಧ ಜಂಟಿ ಪರಿಶೀಲನಾ ಸಮಿತಿ ಬಳಿಯಿರುವ 2020ನೆ ಸಾಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಧೇಯಕವನ್ನು ಮಂಡಿಸಲು ಸರಕಾರ ಮುಂದಾಗಿದೆ. ಅಲ್ಲದೆ, ವಿವಾದಾತ್ಮಕ 'ಲವ್ ಜಿಹಾದ್, ಗೋಹತ್ಯೆ ನಿಷೇಧ ವಿಧೇಯಕ'ಗಳು ಈ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆಗಳಿವೆ. ಈ ವಿಧೇಯಕಗಳು ಮಂಡನೆಯಾದಲ್ಲಿ ಆಡಳಿತ ಹಾಗೂ ಪ್ರತಿಪಕ್ಷದ ನಡುವೆ ವಾಗ್ವಾದಕ್ಕೆ ಎಡೆ ಮಾಡಿಕೊಡಲಿದೆ.

ಅಲ್ಲದೆ, ಇತ್ತೀಚೆಗೆ ಬಾಗಲಕೋಟೆ ಜಿಲ್ಲೆಯ ತೆರದಾಳದಲ್ಲಿ ಬಿಜೆಪಿಯ ಪುರಸಭೆ ಸದಸ್ಯೆಯೊಬ್ಬರನ್ನು ಶಾಸಕ ಸಿದ್ದು ಸವದಿ ಎಳೆದಾಡಿದ್ದರಿಂದ, ಅವರಿಗೆ ಗರ್ಭಪಾತ ಆಗಿರುವ ಆರೋಪವು ಕೇಳಿ ಬಂದಿರುವುದರಿಂದ, ಸದನದಲ್ಲಿ ಶಾಸಕ ಸಿದ್ದು ಸವದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್ ಹೋರಾಟ ಮಾಡಲಿದೆ. ಅತಿವೃಷ್ಠಿಗೆ ಗುರಿಯಾಗಿರುವ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ಬಹುತೇಕ ಪ್ರದೇಶಗಳಿಗೆ ಸರಕಾರದಿಂದ ಇನ್ನೂ ಪರಿಹಾರ ಬಿಡುಗಡೆಯಾಗಿಲ್ಲ ಎಂದು ಆರೋಪಿಸಿ ಸರಕಾರವನ್ನು ಸದನದಲ್ಲಿ ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಮುಂದಾಗಲಿದೆ.

ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ(ನಿಯಂತ್ರಣ ಮತ್ತು ಅಭಿವೃದ್ಧಿ)(ಎರಡನೆ ತಿದ್ದುಪಡಿ) ಆಧ್ಯಾದೇಶ, ರಾಜ್ಯ ವಿಶ್ವವಿದ್ಯಾಲಯಗಳು ಮತ್ತು ಇತರ ಕಾನೂನು(ಎರಡನೆ ತಿದ್ದುಪಡಿ)ಆಧ್ಯಾದೇಶ, ಕರ್ನಾಟಕ ಭೂ ಸುಧಾರಣೆಗಳ(ಎರಡನೆ ತಿದ್ದುಪಡಿ)ಆಧ್ಯಾದೇಶ ಮತ್ತು ಕರ್ನಾಟಕ ಸ್ಟಾಂಪು(ತಿದ್ದುಪಡಿ)ಆಧ್ಯಾದೇಶಗಳು ಈ ಅಧಿವೇಶನದಲ್ಲಿ ಮಂಡನೆಯಾಗಲಿವೆ. ಈ ಮೇಲ್ಕಂಡ ವಿಧೇಯಕಗಳ ಕುರಿತು ಚರ್ಚೆ ನಡೆಸುವ ಸಾಧ್ಯತೆಗಳಿವೆ.

ಕೊರೋನ ನಿಯಂತ್ರಣಕ್ಕೆ ಸಂಬಂಧಿಸಿದ ವೈದ್ಯಕೀಯ ಉಪಕರಣ ಖರೀದಿ ಹಗರಣ ಆರೋಪ, ಅಧಿಕಾರಿಗಳ ಮನಸೋ ಇಚ್ಛೆ ವರ್ಗಾವಣೆ ದೂರು, ಕ್ಷೇತ್ರಗಳಿಗೆ ಅನುದಾನ ಕಡಿತ, ಅಭಿವೃದ್ಧಿ ಕಾರ್ಯಗಳಲ್ಲಿನ ಸರಕಾರದ ವೈಫಲ್ಯಗಳು, ವಿಪಕ್ಷಗಳ ಮುಖಂಡರ ಮೇಲಿನ ಸಿಬಿಐ ದಾಳಿಯೂ ಸೇರಿದಂತೆ ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಪ್ರಸ್ತಾಪಿಸಿ ಆಡಳಿತಾರೂಢ ಬಿಜೆಪಿಯನ್ನು ಅಡ್ಡ ಕತ್ತರಿಯಲ್ಲಿ ಸಿಲುಕಿಸಲು ವಿಪಕ್ಷ ಕಾಂಗ್ರೆಸ್-ಜೆಡಿಎಸ್ ಸಜ್ಜಾಗಿವೆ. ಇದಕ್ಕೆ ತಮ್ಮ ಕಾರ್ಯ ಚಟುವಟಿಕೆಗಳ ಮೂಲಕ ಉತ್ತರ ನೀಡಲು ರಾಜ್ಯ ಸರಕಾರ, ಸಂಪುಟ ಸಚಿವರು ಸರ್ವಸನ್ನದ್ಧವಾಗಿದ್ದು, ಎಲ್ಲರ ಚಿತ್ತ ವಿಧಾನಮಂಡಲ ಅಧಿವೇಶನದತ್ತ ನೆಟ್ಟಿದ್ದು ತೀವ್ರ ಕುತೂಹಲ ಸೃಷ್ಟಿಸಿದೆ.

ಏಳು ದಿನಗಳ ಅಧಿವೇಶನ: ಡಿ.7ರಿಂದ ಆರಂಭಗೊಳ್ಳಲಿರುವ ವಿಧಾನ ಮಂಡಲ ಚಳಿಗಾಲದ ಅಧಿವೇಶನ ಡಿ.15ರ ವರೆಗೆ ಶನಿವಾರ ಮತ್ತು ರವಿವಾರ ಹೊರತುಪಡಿಸಿ ಒಟ್ಟು ಏಳು ದಿನಗಳ ಕಾಲ ನಡೆಯಲಿದ್ದು, ಜಂಟಿ ಪರಿಶೀಲನಾ ಸಮಿತಿಗೆ ವಹಿಸಿದ್ದ ಬಿಬಿಎಂಪಿ ವಿಧೇಯಕವೂ ಸೇರಿದಂತೆ ಹಲವು ಮಹತ್ವದ ವಿಧೇಯಕಗಳ ಮಂಡನೆ ಮಾಡಲಾಗುವುದು. ಡಿ.14 ಮತ್ತು 15ರಂದು ಸದನದಲ್ಲಿ 'ಒಂದು ದೇಶ, ಒಂದು ಚುನಾವಣೆ' ಕುರಿತು ವಿಶೇಷ ಚರ್ಚೆ ನಡೆಯಲಿದೆ

-ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಸಭೆ ಸ್ಪೀಕರ್

'ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಮತ್ತು ಲವ್ ಜಿಹಾದ್ ನಿಯಂತ್ರಣ ಕಾನೂನು ಜಾರಿ ಸುಲಭವಲ್ಲ, ಇದಕ್ಕೆ ಹಲವು ಅಡೆ-ತಡೆಗಳಿವೆ. ಈ ಕಾಯ್ದೆಗಳಿಗೆ ಕಾಂಗ್ರೆಸ್ ಪಕ್ಷದ ಸ್ಪಷ್ಟ ವಿರೋಧವಿದೆ. ಬಿಜೆಪಿ ಮತ್ತೆ ಅಧಿಕಾರ ಹಿಡಿಯುವ ಉದ್ದೇಶದಿಂದ ಸಮುದಾಯಗಳನ್ನು ಛಿದ್ರ ಮಾಡಲು ಹೊರಟಿದೆ ಇದು ಸರಿಯಲ್ಲ. ಈ ಬಗ್ಗೆ ವಿಧಾನಸಭೆಯ ಒಳಗೆ ಮತ್ತು ಕೋರ್ಟ್‍ನಲ್ಲಿಯೂ ನಾವು ಹೋರಾಟ ನಡೆಸುತ್ತೇವೆ'

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News