ಭಾರತ್ ಬಂದ್‍ಗೆ ಬಿಎಸ್ಪಿ ಬೆಂಬಲ: ಪಕ್ಷದ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ

Update: 2020-12-06 17:31 GMT

ಮಂಡ್ಯ, ಡಿ.6: ಕೇಂದ್ರ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರಕಾರ ರೈತರೊಡನೆ, ಕೃಷಿ ತಜ್ಞರೊಡನೆ ಚರ್ಚಿಸದೆ ಸರ್ವಾಧಿಕಾರಿ ಧೋರಣೆಯಿಂದ ಜಾರಿ ಮಾಡಿರುವ ಮೂರು ಕಾಯಿದೆಗಳ ವಿರುದ್ಧ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್‍ಗೆ ಬಹುಜನ ಸಮಾಜ ಪಕ್ಷ ಬೆಂಬಲ ನೀಡುತ್ತದೆ ಎಂದು ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ತಿಳಿಸಿದ್ದಾರೆ.

ಕಳೆದ 10 ದಿನಗಳಿಂದ ಕೋಟ್ಯಂತರ ರೈತರು ಕೊರೆಯುವ ಚಳಿಯನ್ನು ಲೆಕ್ಕಿಸದೆ ತಮ್ಮ ಜೀವವನ್ನು ಪಣಕ್ಕಿಟ್ಟು ದೆಹಲಿಯ ಸುತ್ತಮುತ್ತ ಪ್ರತಿಭಟನೆ ನಡೆಸುತ್ತಿದ್ದರೂ ತುಘಲಕ್ ಧೋರಣೆಯಿಂದ ನಡೆದುಕೊಳ್ಳುತ್ತಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ವರ್ತನೆ ಖಂಡನೀಯ. ಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇರುವ ಯಾವುದೇ ಸರಕಾರ ಇಂತಹ ಸರ್ವಾಧಿಕಾರಿ ಧೋರಣೆಯನ್ನು ಹೊಂದಲು ಸಾಧ್ಯವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ವತಃ ರೈತರೇ ಈ ಕಾಯ್ದೆಯನ್ನು ವಿರೋಧಿಸುತ್ತಿದ್ದರೂ ಕಾಯ್ದೆ ಹಿಂಪಡೆಯಲು ಸರಕಾರ ಸಿದ್ಧವಿಲ್ಲ ಎಂದರೆ ಖಂಡಿತವಾಗಿಯೂ ಇದು ದೊಡ್ಡ ದೊಡ್ಡ ಶ್ರೀಮಂತರು ಮತ್ತು ಉದ್ಯಮಿಗಳ ಹಿತಾಸಕ್ತಿಗಾಗಿ ರೂಪಿಸಿರುವ ಕಾಯ್ದೆಗಳು ಆಗಿವೆ. ರೈತರ ಆದಾಯವನ್ನು ದ್ವಿಗುಣಗೊಳಿಸುವ ಹಾಗೂ ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುವ ಭರವಸೆಯನ್ನು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ನೀಡಿತ್ತು. ಆದರೆ, ತನ್ನ ಪ್ರಣಾಳಿಕೆಯಲ್ಲಿ ಇಲ್ಲದಿದ್ದ ಈ ಕಾಯ್ದೆಗಳನ್ನು ಯಾರ ಒತ್ತಡಕ್ಕೆ ಮತ್ತು ಲಾಬಿಗೆ ಮಣಿದು ಜಾರಿ ಮಾಡಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಅನ್ನದಾತನ ಭೂಮಿಯನ್ನು ಅಗ್ಗದ ಬೆಲೆಗೆ ಕಸಿದುಕೊಳ್ಳುವ, ರೈತ ಬೆಳೆದ ಬೆಳೆಯ ಮೇಲೆ ಉದ್ಯಮಿಗಳು ಹಿಡಿತ ಸಾಧಿಸುವ ಈ ಕಾಯ್ದೆಗಳು ಖಂಡಿತ ದೇಶದ ರೈತರನ್ನು ಬೀದಿಗೆ ತಳ್ಳುತ್ತವೆ. ಹಾಗಾಗಿ ಯಾವುದೇ ಬೆಲೆ ತೆತ್ತಾದರೂ ತನ್ನ ಭೂಮಿಯನ್ನು ಮತ್ತು ಸ್ವಾಭಿಮಾನವನ್ನು ಉಳಿಸಿಕೊಳ್ಳುವ ರೈತರ ಹೋರಾಟಕ್ಕೆ ಪಕ್ಷಾತೀತವಾಗಿ ಬೆಂಬಲಿಸಿ ಅನ್ನದಾತನೊಂದಿಗೆ ದೇಶದ ಜನ ನಿಲ್ಲಬೇಕು ಎಂದು ಅವರು ಮನವಿ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News