2.10 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಗೆ ಪ್ರಸ್ತಾವನೆ ಸಲ್ಲಿಸಲು ಸಚಿವ ಸಂಪುಟ ಉಪ ಸಮಿತಿ ನಿರ್ಧಾರ
ಬೆಂಗಳೂರು, ಡಿ.7: ಕೇಂದ್ರ ಸರಕಾರವು 2020-21ನೆ ಸಾಲಿನಲ್ಲಿ 1.10 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು ಖರೀದಿ ಮಾಡಲು ಅನುಮತಿ ನೀಡಿದೆ. ಹೆಚ್ಚುವರಿಯಾಗಿ ಇನ್ನೂ 1 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿ ಪ್ರಮಾಣಕ್ಕೆ ಅಂದರೆ ಒಟ್ಟು ಸುಮಾರು 2.10 ಲಕ್ಷ ಮೆಟ್ರಿಕ್ ಟನ್ನಷ್ಟು ಭತ್ತವನ್ನು ಖರೀದಿಸಲು ಪ್ರಸ್ತಾವನೆ ಸಲ್ಲಿಸಲು ಸಚಿವ ಸಂಪುಟ ಉಪ ಸಮಿತಿ ನಿರ್ಧರಿಸಿದೆ.
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಆಹಾರ ಧಾನ್ಯಗಳನ್ನು ಖರೀದಿಸುವ ಸಂಬಂಧವಾಗಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಸಚಿವ ಸಂಪುಟ ಉಪ ಸಮಿತಿಯು ಸೋಮವಾರ ವಿಧಾನಸೌಧದಲ್ಲಿ ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಭತ್ತ ಖರೀದಿಗಾಗಿ ರೈತರ ನೋಂದಣಿ ಈಗಾಗಲೇ ಆರಂಭಿಸಿದ್ದು, ಖರೀದಿ ಕಾರ್ಯವನ್ನು ತಕ್ಷಣದಿಂದಲೇ ಆರಂಭಿಸಬೇಕು. ರೈತರ ನೋಂದಣಿಯನ್ನು ಜನವರಿ ಅಂತ್ಯದವರೆಗೂ ಮುಂದುವರಿಸಬೇಕು. ಭತ್ತ ಖರೀದಿ ಪ್ರಮಾಣದ ಮಿತಿಯನ್ನು ಪ್ರತಿ ಎಕರೆಗೆ 25 ಕ್ವಿಂಟಾಲ್ ನಂತೆ ಗರಿಷ್ಠ ಪ್ರತಿ ರೈತರಿಂದ 75 ಕ್ವಿಂಟಾಲ್ ನಿಗದಿಪಡಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಭತ್ತ ಸಾಮಾನ್ಯ 1868 ರೂ.(ಪ್ರತಿ ಕ್ವಿಂಟಾಲ್ಗೆ), ಭತ್ತ ಗ್ರೇಡ್ ‘ಎ’ 1888 ರೂ.(ಪ್ರತಿ ಕ್ವಿಂಟಾಲ್ಗೆ). ರಾಗಿ ಮತ್ತು ಬಿಳಿಜೋಳ ಖರೀದಿಗಾಗಿ ರೈತರ ನೋಂದಣಿಯನ್ನು ತಕ್ಷಣದಿಂದಲೇ ಆರಂಭಿಸುವುದು ಹಾಗೂ ಖರೀದಿಯನ್ನು ಇದೇ ಡಿಸೆಂಬರ್ 15 ರಿಂದ ಆರಂಭಿಸಲು ನಿರ್ಧರಿಸಲಾಯಿತು. ರಾಗಿ ಖರೀದಿ ಪ್ರಮಾಣದ ಮಿತಿಯನ್ನು ಪ್ರತಿ ಎಕರೆಗೆ 10 ಕ್ವಿಂಟಾಲ್ನಂತೆ ಗರಿಷ್ಠ ಪ್ರತಿ ರೈತರಿಂದ 50 ಮಿತಿ ಕ್ವಿಂಟಾಲ್ ನಿಗದಿಪಡಿಸಿರುವುದನ್ನು ಮುಂದುವರಿಸುವಂತೆ ತಿರ್ಮಾನಿಸಲಾಯಿತು.
ರಾಗಿ ಖರೀದಿ ಪ್ರಮಾಣದ ಒಟ್ಟು ಗುರಿಯನ್ನು ಈಗಿರುವ 3 ಲಕ್ಷ ಮೆಟ್ರಿಕ್ ಟನ್ ಜೊತೆಗೆ ಇನ್ನೂ 1 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ ಪ್ರಮಾಣಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಯಿತು. ಬಿಳಿಜೋಳ ಖರೀದಿಗೆ ಮುಂಗಾರು ಪ್ರಮಾಣ 4000 ಮೆಟ್ರಿಕ್ ಟನ್ ಈಗಾಗಲೇ ನಿಗದಿಯಾಗಿದ್ದು, ಇದನ್ನು 1 ಲಕ್ಷ ಮೆಟ್ರಿಕ್ ಟನ್ಗೆ ನಿಗದಿಪಡಿಸುವಂತೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಯಿತು.
ಬಿಳಿಜೋಳ ಖರೀದಿ ಪ್ರಮಾಣದ ಮಿತಿಯನ್ನು ಪ್ರತಿ ಎಕರೆಗೆ 15 ಕ್ವಿಂಟಾಲ್ ನಂತೆ ಗರಿಷ್ಠ ಪ್ರತಿ ರೈತರಿಂದ 75 ಕ್ವಿಂಟಾಲ್ ಮಿತಿ ನಿಗದಿಪಡಿಸಿರುವುದನ್ನು ಮುಂದುವರಿಸುವಂತೆ ತಿರ್ಮಾನಿಸಲಾಯಿತು. ಈಗಾಗಲೇ ಕನಿಷ್ಠ ಬೆಂಬಲ ಬೆಲೆ ಅಡಿಯಲ್ಲಿ ರಾಗಿ 3295 ರೂ.(ಪ್ರತಿ ಕ್ವಿಂಟಾಲ್ಗೆ), ಬಿಳಿ ಜೋಳ ಹೈಬ್ರಿಡ್ 2620 ರೂ.(ಪ್ರತಿ ಕ್ವಿಂಟಾಲ್ಗೆ), ಬಿಳಿ ಜೋಳ ಮಾಲ್ದಂಡಿ 2640 ರೂ.(ಪ್ರತಿ ಕ್ವಿಂಟಾಲ್ಗೆ) ನಿಗದಿಪಡಿಸಲಾಗಿದೆ.
ಉತ್ತರ ಕರ್ನಾಟಕದ ಪ್ರಮುಖ ಬೆಳೆಯಾದ ತೊಗರಿ ಖರೀದಿಗೆ ರೈತರ ನೊಂದಣೆಯನ್ನು ಡಿ.15ರಿಂದ ಪ್ರಾರಂಭಿಸಲು ಮತ್ತು ಖರೀದಿ ಪ್ರಕ್ರಿಯೆಯನ್ನು 2021ರ ಜ.1 ರಿಂದ ಪ್ರಾರಂಭಿಸಲು ನಿರ್ಧರಿಸಲಾಯಿತು. ಖರೀದಿ ಅವಧಿ 90 ದಿನಗಳು. ಪ್ರತಿ ಎಕರೆಗೆ ಗರಿಷ್ಠ 7.5 ಕ್ವಿಂಟಾಲ್ ಮತ್ತು ಗರಿಷ್ಠ ಒಟ್ಟು 20 ಕ್ವಿಂಟಾಲ್ವರೆಗೆ ಒಬ್ಬ ರೈತರಿಂದ ಖರೀದಿಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಯಿತು. ಈಗಾಗಲೇ ಕನಿಷ್ಠ ಬೆಂಬಲ ಬೆಲೆ ಅಡಿಯಲ್ಲಿ ತೊಗರಿ 6000 ರೂ.(ಪ್ರತಿ ಕ್ವಿಂಟಾಲ್ಗೆ) ದರ ಘೋಷಿಸಲಾಗಿದೆ.
ಪ್ರಸಕ್ತ ಸಾಲಿನ ಸೆ.14ರಿಂದಲೇ ಹೆಸರುಕಾಳು ಖರೀದಿ ಕೇಂದ್ರ ಪ್ರಾರಂಭಿಸಲಾಗಿದ್ದರೂ ಹೆಚ್ಚಿನ ಆವಕಗಳು ಬಂದಿಲ್ಲ. ಆದರೂ ರೈತರಿಗೆ ಮುಂದೆ ಅನುಕೂಲ ಕಲ್ಪಿಸಲು ಪ್ರತಿ ರೈತರಿಂದಲೂ ಗರಿಷ್ಠ 20 ಕ್ವಿಂಟಾಲ್ವರೆಗೆ ಖರೀದಿಸಲು ನಿರ್ಧರಿಸಲಾಗಿದೆ. ಮುಂದಿನ ವರ್ಷದಿಂದ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿಯೆ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಿ ರೈತರಿಗೆ ಅನುಕೂಲ ಕಲ್ಪಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಉದ್ದಿನ ಖರೀದಿ ಪ್ರಕ್ರಿಯೆ ಈಗಾಗಲೇ ಜಾರಿಯಲ್ಲಿದ್ದರೂ ಹೆಚ್ಚಿನ ಆವಕಗಳು ಬಂದಿಲ್ಲ. ಮುಂದಿನ ವರ್ಷದಿಂದ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿಯೆ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಿ ರೈತರಿಗೆ ಅನುಕೂಲ ಕಲ್ಪಿಸಲು ನಿರ್ಧರಿಸಲಾಯಿತು. ಶೇಂಗಾ ಖರೀದಿ ಪ್ರಕ್ರಿಯೆ ಈಗಾಗಲೇ ಜಾರಿಯಲ್ಲಿದ್ದು, 173 ರೈತರು ಮಾತ್ರ ಈವರೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಶೇಂಗಾ 5275 ರೂ.(ಪ್ರತಿ ಕ್ವಿಂಟಾಲ್ಗೆ) ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಈಗಾಗಲೆ ದರ ನಿಗದಿಪಡಿಸಲಾಗಿದೆ.
ಸಭೆಯಲ್ಲಿ ಸಚಿವರಾದ ಜೆ.ಸಿ.ಮಾಧುಸ್ವಾಮಿ, ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್, ಪ್ರಭು ಚೌವಾಣ್, ಗೋಪಾಲಯ್ಯ, ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಭಾಗವಹಿಸಿದ್ದರು.