ಈಡಿಯಿಂದ ಆ್ಯಮ್ನೆಸ್ಟಿ ಬ್ಯಾಂಕ್ ಖಾತೆಗಳ ಸ್ಥಗಿತ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Update: 2020-12-13 11:48 GMT

ಬೆಂಗಳೂರು, ಡಿ.13: ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಯಾದ ಆ್ಯಮ್ನೆಸ್ಟಿ ಇಂಟರ್ ನ್ಯಾಷನಲ್ ಭಾರತೀಯ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿರುವ ಜಾರಿ ನಿರ್ದೇಶನಾಲಯ(ಈಡಿ)ದ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪುನ್ನು ಕಾಯ್ದಿರಿಸಿದೆ.

ತನ್ನ ಭಾರತೀಯ ಬ್ಯಾಂಕ್ ಖಾತೆಗಳನ್ನು ಇಡಿ ಸ್ಥಗಿತಗೊಳಿಸಿರುವ ಕ್ರಮ ನಿಯಮಬಾಹಿರವಾಗಿದೆ. ಸಂಸ್ಥೆಯ ಖಾತೆ ವಿವರಗಳನ್ನು ಇಡಿಯೊಂದಿಗೆ ಹಂಚಿಕೊಂಡ ಖಾಸಗಿ ಬ್ಯಾಂಕ್‍ಗಳ ನಡೆ ಕೂಡ ಕಾನೂನು ಬಾಹಿರ ಎಂದು ಆರೋಪಿಸಿ ಇಂಡಿಯನ್ಸ್ ಫಾರ್ ಆ್ಯಮ್ನೆಸ್ಟಿ ಇಂಟರ್‍ನ್ಯಾಷನಲ್ ಟ್ರಸ್ಟ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್, ವಿಚಾರಣೆ ಪೂರ್ಣಗೊಳಿಸಿ, ತೀರ್ಪು ಕಾಯ್ದಿರಿಸಿದೆ.

ಈಡಿಗೆ ಪ್ರಶ್ನಿಸಿರುವ ಪೀಠ, ಆ್ಯಮ್ನೆಸ್ಟಿ ತನ್ನ ಸಿಬ್ಬಂದಿಗೆ ವೇತನ ಹಾಗೂ ತೆರಿಗೆ ಪಾವತಿಸಲು 40 ಲಕ್ಷ ರೂ.ವರೆಗೆ ಹಣಕಾಸು ಚಟುವಟಿಕೆ ನಡೆಸಲು ಅನುಮತಿ ನೀಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸುವಂತೆ ಸೂಚಿಸಿದೆ.

ಅರ್ಜಿದಾರರ ಪರ ವಾದಿಸಿದ ಹಿರಿಯ ನ್ಯಾಯವಾದಿ, ಮಾಜಿ ಅಡ್ವಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಅವರು, ಮಾನವ ಹಕ್ಕುಗಳ ರಕ್ಷಣೆಗೆ ಆ್ಯಮ್ನೆಸ್ಟಿ ಕೆಲಸ ಮಾಡುತ್ತಿದೆ. ಇಂಥ ಸಂಸ್ಥೆಯ ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ ಯಾವುದೇ ಕಾರಣ ನೀಡದೆ ಏಕಾಏಕಿ ಸ್ಥಗಿತಗೊಳಿಸುವಂತೆ ಬ್ಯಾಂಕ್‍ಗಳಿಗೆ ನಿರ್ದೇಶಿಸಿದ್ದಾರೆ. ಸೂಕ್ತ ಪ್ರಾಧಿಕಾರದ ಮುಂದೆಯೂ ಮಂಡಿಸಿಲ್ಲ. ಇಡಿಯ ಈ ನಡೆ ಪಿಎಂಎಲ್‍ಎ ಹಾಗೂ ಎಫ್ ಸಿಆರ್‍ಎ ಕಾಯ್ದೆಯ ನಿಯಮಗಳಿಗೆ ವಿರುದ್ಧವಾಗಿದೆ ಎಂದು ವಾದಿಸಿದರು.

ಇಡಿ ಪರ ವಾದಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಂ.ಬಿ.ನರಗುಂದ ಅವರು, ಅರ್ಜಿದಾರರು ಹೈಕೋರ್ಟ್‍ನಲ್ಲಿ ಪ್ರಕರಣ ದಾಖಲಿಸುವ ಮುನ್ನ ಸಂಬಂಧಪಟ್ಟ ಪ್ರಾಧಿಕಾರದ ಮುಂದೆ ಹಾಗೂ ಮೇಲ್ಮನವಿ ಪ್ರಾಧಿಕಾರದ ಮುಂದೆ ಮನವಿ ಸಲ್ಲಿಸಬೇಕಿತ್ತು. ನೇರವಾಗಿ ಹೈಕೋರ್ಟ್ ಮುಂದೆ ದಾಖಲಿಸಿರುವ ಅರ್ಜಿ ವಿಚಾರಣೆಗೆ ಯೋಗ್ಯವಿಲ್ಲ ಎಂದು ವಾದಿಸಿದರು.

ವಿದೇಶಿ ಕೊಡುಗೆಗಳ ನಿಯಂತ್ರಣ ಕಾಯ್ದೆ(ಎಫ್‍ಸಿಆರ್‍ಎ) ಉಲ್ಲಂಘಿಸಿ ಭಾರೀ ಮೊತ್ತದ ದೇಣಿಗೆ ಸಂಗ್ರಹಿಸಿದೆ ಎಂಬ ಆರೋಪದಡಿ 2019ರ ಅ.25ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆ್ಯಮ್ನೆಸ್ಟಿ ಕಚೇರಿ ಮೇಲೆ ದಾಳಿ ನಡೆಸಿದ್ದರು. ಆ್ಯಮ್ನೆಸ್ಟಿ ಸಂಸ್ಥೆಗೆ ಅಕ್ರಮವಾಗಿ ವಿದೇಶದಿಂದ 36 ಕೋಟಿ ಹಣ ವರ್ಗಾವಣೆಯಾಗಿದೆ. ಇದರಲ್ಲಿ 10 ಕೋಟಿ ರೂ. ಅನ್ನು ದೀರ್ಘಾವಧಿ ಸಾಲವಾಗಿ ಪಡೆಯಲಾಗಿದೆ. ಸಂಸ್ಥೆ ಪಿಎಂಎಲ್‍ಎ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಇಡಿ ಆರೋಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News