ರಾಜ್ಯದಲ್ಲಿ ಕೋವಿಡ್ ಸಾವಿನ ಪ್ರಮಾಣ ಗಣನೀಯ ಇಳಿಕೆ: ಇಂದು 6 ಸೋಂಕಿತರು ಮೃತ್ಯು

Update: 2020-12-16 15:57 GMT

ಬೆಂಗಳೂರು ಡಿ.16: ದಿನಕಳೆದಂತೆ ಕೋವಿಡ್ ಮರಣ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗುತ್ತಿದೆ. ಇಂದು ರಾಜ್ಯಾದ್ಯಂತ 6 ಮಂದಿ ಮೃತಪಟ್ಟಿದ್ದು, 1,240 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕಳೆದ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ನಲ್ಲಿ ಸೋಂಕಿನ ಪ್ರಮಾಣ ಪ್ರತಿದಿನ ಹತ್ತು ಸಾವಿರ ಮುಟ್ಟುತ್ತಿತ್ತು ಹಾಗೂ ಸಾವಿನ ಪ್ರಮಾಣವು ನೂರರ ಗಡಿ ದಾಟುತ್ತಿತ್ತು. ಆದರೆ, ನವೆಂಬರ್ ಹಾಗೂ ಡಿಸೆಂಬರ್ ನಲ್ಲಿ ಸಾವಿನ ಪ್ರಮಾಣ ಗಣನೀಯವಾಗಿ ಇಳಿಕೆ ಆಗುತ್ತಿದೆ ಹಾಗೂ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ಏರಿಕೆ ಆಗುತ್ತಿದ್ದು, ಇಂದು 1,403 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಇಲ್ಲಿಯವರೆಗೆ ಒಟ್ಟು 8,77,199 ಕೋವಿಡ್ ಸೋಂಕಿತರು ಚೇತರಿಸಿಕೊಂಡಿದ್ದಾರೆ. ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 15,476 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 9,04,665ಕ್ಕೆ ಏರಿಕೆಯಾಗಿದೆ. ಹಾಗೂ ಸೋಂಕಿನಿಂದ ಈವರೆಗೆ 11,971 ಮಂದಿ ಸಾವಿಗೀಡಾಗಿದ್ದಾರೆ. 248 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಜಿಲ್ಲಾವಾರು ಸೊಂಕಿತರ ವಿವರ: ಬಾಗಲಕೋಟೆ 5, ಬಳ್ಳಾರಿ 17,  ಬೆಳಗಾವಿ 5, ಬೆಂಗಳೂರು ಗ್ರಾಮಾಂತರ 28, ಬೀದರ್ 10, ಚಾಮರಾಜನಗರ 17, ಚಿಕ್ಕಬಳ್ಳಾಪುರ 14, ಚಿಕ್ಕಮಗಳೂರು 8, ಚಿತ್ರದುರ್ಗ 51, ದಕ್ಷಿಣ ಕನ್ನಡ 23, ದಾವಣಗೆರೆ 26, ಧಾರವಾಡ 15, ಗದಗ 7, ಹಾಸನ 34, ಹಾವೇರಿ 5, ಕಲಬುರಗಿ 30, ಕೊಡಗು 46, ಕೋಲಾರ 16, ಕೊಪ್ಪಳ 8, ಮಂಡ್ಯ 32, ಮೈಸೂರು 47, ರಾಯಚೂರು 11, ರಾಮನಗರ 4, ಶಿವಮೊಗ್ಗ 13, ತುಮಕೂರು 57, ಉಡುಪಿ 16, ಉತ್ತರ ಕನ್ನಡ 8, ವಿಜಯಪುರ 6, ಯಾದಗಿರಿ 5 ಪ್ರಕರಣಗಳು ಪತ್ತೆಯಾಗಿವೆ.

ನಗರದಲ್ಲಿ 4 ಮಂದಿ ಸಾವು

ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 676 ಮಂದಿಗೆ ಕೊರೋನ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿನ ಸಂಖ್ಯೆ 3,80,247ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಇಂದು ಸೋಂಕಿಗೆ 4 ಮಂದಿ ಬಲಿಯಾಗಿದ್ದು, ಒಟ್ಟಾರೆ ಸಾವಿನ ಸಂಖ್ಯೆ 4,245ಕ್ಕೆ ಏರಿಕೆಯಾಗಿದೆ. ಇಂದು ಆಸ್ಪತ್ರೆಗಳಿಂದ 792 ಮಂದಿ ಬಿಡುಗಡೆಯಾಗಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು 10,422 ಸಕ್ರಿಯ ಪ್ರಕರಣಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News