×
Ad

ಪರಿಷತ್ ಘಟನೆ ಬಗ್ಗೆ ರಾಜ್ಯದ ಜನತೆಯಲ್ಲಿ ಕ್ಷಮೆ ಕೇಳುತ್ತೇನೆ: ಬಸವರಾಜ ಹೊರಟ್ಟಿ

Update: 2020-12-16 22:05 IST

ಬೆಂಗಳೂರು, ಡಿ.16: ಮೈಸೂರು ಮಹಾರಾಜರ ಕಾಲದಿಂದ ಪ್ರಾರಂಭಗೊಂಡು 113 ವರ್ಷಗಳ ಇತಿಹಾಸ ಹೊಂದಿರುವ ಹಾಗೂ ತನ್ನದೇ ಆದ ಘನತೆ ಗೌರವ, ಪರಂಪರೆಯನ್ನು ಉಳಿಸಿಕೊಂಡಿರುವ ಸದನ ನಮ್ಮ ಕರ್ನಾಟಕ ವಿಧಾನಪರಿಷತ್ತು. ಭಾರತ ದೇಶದಲ್ಲಿಯೆ ಅತ್ಯಂತ ಉತ್ತಮವಾದ ಸದನವೆಂಬ ಹೆಗ್ಗಳಿಕೆ ನಮ್ಮ ಕರ್ನಾಟಕ ವಿಧಾನ ಪರಿಷತ್‍ಗೆ ಇದೆ ಎಂದು ವಿಧಾನಪರಿಷತ್ತಿನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ಡಿ.12ರಂದು ಚಿಂತಕರ ಚಾವಡಿ, ಹಿರಿಯರ ಮನೆ ಎಂದು ಕರೆಯುವ ವಿಧಾನಪರಿಷತ್ತಿನಲ್ಲಿ ನಡೆದ ಗದ್ದಲ ಹಾಗೂ ಬಡಿದಾಟ ಒಂದು ಕಪ್ಪುಚುಕ್ಕೆ ಎಂದರೆ ತಪ್ಪಾಗಲಾರದು. ಇದನ್ನು ರಾಜ್ಯದ ಜನತೆ ಅಷ್ಟೆ ಅಲ್ಲದೆ ಬೇರೆ ಬೇರೆ ದೇಶದಲ್ಲಿಯೂ ಜನ ವೀಕ್ಷಿಸಿದ್ದಾರೆ. ಇದರಿಂದ ನಮ್ಮ ಘನತೆವೆತ್ತ ವಿಧಾನಪರಿಷತ್ತಿನ ಘನತೆ ಗೌರವ ಕಡಿಮೆಯಾಗಿದೆ ಅನ್ನುವುದು ಇಡೀ ರಾಜ್ಯದ ಜನರ ಅನಿಸಿಕೆ ಎಂದು ಅವರು ಹೇಳಿದ್ದಾರೆ.

ಮಾಧ್ಯಮಗಳಲ್ಲಿ ಬರುವಂತಹ ವಿಚಾರಗಳನ್ನು ನೋಡಿದರೆ ರಾಜ್ಯದ ಜನತೆ ನಮ್ಮನ್ನು ಎಂದೂ ಕ್ಷಮಿಸಲಾರದೆಂಬ ಭಾವನೆ ಬರುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಜನರು ನಮ್ಮ ಮೇಲೆ ಇಟ್ಟ ಭರವಸೆ ನಂಬಿಕೆಯನ್ನು ಕಳೆದುಕೊಳ್ಳದಂತೆ ನಮ್ಮ ಅನೇಕ ವಿಧಾನಪರಿಷತ್ ಸದಸ್ಯರು ಈ ಘಟನೆಯಿಂದ ನೊಂದಿದ್ದೇವೆ. ಇನ್ನು ಮುಂದೆ ಈ ಸದನದ ಗೌರವಕ್ಕೆ ಧಕ್ಕೆ ಬರದಂತೆ ನಾವೆಲ್ಲರೂ ಪ್ರಯತ್ನ ಪಡುತ್ತೇವೆ ಎಂದು ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ಈ ಸದನದಲ್ಲಿ ಸತತವಾಗಿ 7 ಬಾರಿ ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದಿಂದ ಆಯ್ಕೆಯಾಗುತ್ತಾ ಕಳೆದ 41 ವರ್ಷದಿಂದ ನಾನು ಎಲ್ಲ ರೀತಿಯಿಂದ ಸಚಿವನಾಗಿ, ಸಭಾಪತಿಯಾಗಿ ಸದನದಲ್ಲಿ ಘನತೆ ಗೌರವ ಇಟ್ಟುಕೊಂಡು ಬಂದಿರುವೆ. ಬಹಳಷ್ಟು ಸದಸ್ಯರು ಇದೇ ರೀತಿ ಸಹಮತ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ನಿನ್ನೆಯ ಘಟನೆಯ ಬಗ್ಗೆ ಇಡೀ ಸದಸ್ಯರ ಪರವಾಗಿ ರಾಜ್ಯದ ಜನತೆಯಲ್ಲಿ ಕ್ಷಮೆ ಕೇಳುತ್ತೇನೆ, ದಯಮಾಡಿ ನಿನ್ನೆಯ ಘಟನೆಯನ್ನು ಕ್ಷಮಿಸಬೇಕೆಂದು ಬಸವರಾಜ ಹೊರಟ್ಟಿ ಪತ್ರದಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News