ರೇಣುಕಾಚಾರ್ಯ ವಿರುದ್ಧ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ಕೋರ್ಟ್ ಅಂಗೀಕಾರ
Update: 2020-12-17 14:48 GMT
ಬೆಂಗಳೂರು, ಡಿ.17: ಮತಾಂಧ, ದೇಶದ್ರೋಹಿ ಎಂಬ ಹೇಳಿಕೆಗಳ ಹಿನ್ನೆಲೆ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ವಿರುದ್ಧ ಹಾಲಿ ಶಾಸಕ ಝಮೀರ್ ಅಹ್ಮದ್ ಖಾನ್ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಂಗೀಕರಿಸಿದೆ.
ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರು ಶಾಸಕ ಝಮೀರ್ ಅಹ್ಮದ್ಖಾನ್ ವಿರುದ್ಧ ಬಹಿರಂಗವಾಗಿ ಝಮೀರ್ ಒಬ್ಬ ಮತಾಂಧ, ದೇಶದ್ರೋಹಿ ಮತ್ತು ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಾಟೆಗೂ ಕಾರಣ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದರು.
ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರಿಂದ ಮಾನನಷ್ಟವಾಗಿದೆ ಎಂದು ಆರೋಪಿಸಿ ಝಮೀರ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ರೇಣುಕಾಚಾರ್ಯ ವಿರುದ್ಧ ಮಾನನಷ್ಟ ಮೊಕದ್ದಮೆ ವಿಚಾರಣೆ ನಡೆಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಂಗೀಕರಿಸಿದೆ. ಐಪಿಸಿ ಸೆಕ್ಷನ್ 153-ಎ, 500, 504 ಮತ್ತು 506 ಅಡಿ ಪ್ರಕರಣ ದಾಖಲಿಸಲು ಶಾಸಕ ಝಮೀರ್ ಗೆ ನ್ಯಾಯಾಲಯ ಸೂಚನೆ ನೀಡಿದೆ.