×
Ad

ಮತದಾರರ ಪಟ್ಟಿಯನ್ನು ಸರಕಾರಿ ಮುದ್ರಣಾಲಯಗಳಲ್ಲಿ ಮುದ್ರಿಸುವಂತೆ ಡಿ.ಕೆ.ಶಿವಕುಮಾರ್ ಮನವಿ

Update: 2020-12-17 23:41 IST

ಬೆಂಗಳೂರು, ಡಿ.17: ಚುನಾವಣಾ ಸಂದರ್ಭದಲ್ಲಿ ಕೆಲವೊಂದು ವರ್ಗಗಳ ಮತದಾರರ ಹೆಸರು ಕೊನೆಗಳಿಗೆಯಲ್ಲಿ ಮತದಾರರ ಪಟ್ಟಿಯಿಂದ ಮಾಯವಾಗಿರುವ ಘಟನೆಗಳು ವ್ಯಾಪಕವಾಗಿ ನಡೆದಿರುವುದು ತಮ್ಮ ಗಮನಕ್ಕೆ ಬಂದಿದೆ. ರಾಜಕೀಯ ಪಕ್ಷವೊಂದರ ಅಂಗ ಸಂಸ್ಥೆಗಳು ಮುದ್ರಣ ಸಂಸ್ಥೆಗಳ ಮೂಲಕ ಈ ರೀತಿಯ ಅವ್ಯವಹಾರ ನಡೆಸುತ್ತಿರುವ ಆರೋಪಗಳಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಈ ಸಂಬಂಧ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿರುವ ಅವರು, ಕೊನೆ ಹಂತದಲ್ಲಿ ಮತದಾರರ ಅಂತಿಮ ಪಟ್ಟಿ ಹೊರ ಬರುವ ಕಾರಣದಿಂದಾಗಿ ಇತರ ರಾಜಕೀಯ ಪಕ್ಷಗಳಿಗೆ ಈ ಬಗ್ಗೆ ಕ್ರಮ ಕೈಗೊಳ್ಳಲು ಸಮಯಾವಕಾಶ ಇರುವುದಿಲ್ಲ. ಹಾಗಾಗಿ ಈ ಮಹಾಮೋಸದ ಪಟ್ಟಿಯನ್ವಯವೆ ಚುನಾವಣೆ ನಡೆದು ಹೋಗುತ್ತದೆ. ಇದು ಮಹಾ ಪ್ರಮಾದ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಎಸಗುವ ಘೋರ ಅಪಚಾರ ಎಂದು ಅವರು ಹೇಳಿದ್ದಾರೆ.

ಮತದಾರರ ಪಟ್ಟಿಯನ್ನು ಖಾಸಗಿ ಮುದ್ರಣಾಲಯಗಳ ಮುಖಾಂತರ ಮುದ್ರಿಸುತ್ತಿರುವುದರಿಂದಾಗಿ ಇಂತಹ ಪ್ರಮಾದಗಳಿಗೆ ಅವಕಾಶ ದೊರೆಯುತ್ತಿದೆ. ಹಾಗಾಗಿ ಪಾರದರ್ಶಕತೆ ಇರುವುದಿಲ್ಲ ಮತ್ತು ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ, ಕಾನೂನು ಕ್ರಮ ಕೈಗೊಳ್ಳಲು ಅವಕಾಶ ಕಡಿದು ಕೊನೆಯ ಘಟ್ಟದಲ್ಲಿ ಪರ್ಯಾಯ ಮಾರ್ಗ ಕಂಡುಕೊಳ್ಳಲು ಸಾಧ್ಯತೆಗಳು ಕಡಿಮೆ ಎಂದು ಶಿವಕುಮಾರ್ ತಿಳಿಸಿದ್ದಾರೆ.

ಒಂದು ಅತ್ಯುನ್ನತ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗಕ್ಕೆ ಚುನಾವಣೆಗಳನ್ನು ಯಾವುದೆ ಸಂಶಯಕ್ಕೂ ಅವಕಾಶ ಇಲ್ಲದಂತೆ ಪಾರದರ್ಶಕವಾಗಿ ನಡೆಸಿಕೊಡುವ ಅತ್ಯಂತ ಪ್ರಮುಖ ಜವಾಬ್ದಾರಿ ಇರುವುದರಿಂದ, ಯಾವುದೆ ಕಾರಣಕ್ಕೂ ಮತದಾರರ ಪಟ್ಟಿಯನ್ನು ಮುದ್ರಿಸುವ ಗುತ್ತಿಗೆಯನ್ನು ಖಾಸಗಿ ಸಂಸ್ಥೆಗಳಿಗೆ ನೀಡಬಾರದೆಂದು ಹಾಗೂ ಮತದಾರರ ಪಟ್ಟಿಯನ್ನು ಸರಕಾರಿ ಮುದ್ರಣಾಲಯಗಳಲ್ಲೆ ಮುದ್ರಿಸುವ ವ್ಯವಸ್ಥೆಯನ್ನು ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News