40ನೇ ದಿನಕ್ಕೆ ಕಾಲಿಟ್ಟ ಟೊಯೋಟಾ ಕಿರ್ಲೋಸ್ಕರ್ ಕಾರ್ಮಿಕರ ಪ್ರತಿಭಟನೆ: ಡಿಸಿ ಕಚೇರಿಗೆ ಮುತ್ತಿಗೆ

Update: 2020-12-18 14:07 GMT

ಬೆಂಗಳೂರು, ಡಿ. 18: ರಾಮನಗರ ಜಿಲ್ಲೆ ಬಿಡದಿಯ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಾರ್ಖಾನೆ ಕಾರ್ಮಿಕರ ಅಮಾನತ್ತು ರದ್ದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಹಾಗೂ ಸಮಸ್ಯೆ ಇತ್ಯರ್ಥಕ್ಕೆ ಜಿಲ್ಲಾಧಿಕಾರಿ ಕೂಡಲೇ ಮಧ್ಯಪ್ರವೇಶ ಮಾಡಬೇಕು ಎಂದು ಆಗ್ರಹಿಸಿ ಟಿಕೆಎಂ ಕಾರ್ಮಿಕರ ಯೂನಿಯನ್ ನೇತೃತ್ವದಲ್ಲಿ ದಲಿತ, ರೈತ ಸಂಘಟನೆಗಳ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಾರ್ಖಾನೆ ಕಾರ್ಮಿಕರು ಸೇರಿದಂತೆ ದಲಿತ-ರೈತ ಸಂಘಟನೆಗಳು ಸುಮಾರು 4 ಸಾವಿರಕ್ಕೂ ಅಧಿಕ ಸಂಖ್ಯೆಯ ಕಾರ್ಯಕರ್ತರು, ಟೊಯೋಟಾ ಕಂಪೆನಿಯ ಆಡಳಿತ ಮಂಡಳಿ, ಕಾರ್ಮಿಕರ ಸಮಸ್ಯೆ ಇತ್ಯರ್ಥಕ್ಕೆ ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

40ನೆ ದಿನಕ್ಕೆ ಕಾಲಿಟ್ಟ ಕಾರ್ಮಿಕರ ಹೋರಾಟ: ಟೊಯೊಟಾ ಕಿರ್ಲೋಸ್ಕರ್ ಕಂಪೆನಿ ಮತ್ತು ಕಾರ್ಮಿಕರ ನಡುವಿನ 40ನೆ ದಿನಕ್ಕೆ ಕಾಲಿಟ್ಟಿದೆ. ಆದರೂ, ಜಿಲ್ಲಾಡಳಿತ, ಕಂಪೆನಿಯ ಆಡಳಿತ ಮಂಡಳಿ ಮತ್ತು ಕಾರ್ಮಿಕರೊಂದಿಗೆ ಚರ್ಚಿಸಿ ಬಿಕ್ಕಟ್ಟು ಇತ್ಯರ್ಥಕ್ಕೆ ಮುಂದಾಗದಿರುವುದು ಸಂಶಯ ಸೃಷ್ಟಿಸಿದೆ ಎಂದು ಮುಖಂಡರು ಆರೋಪಿಸಿದರು.

ಹೋರಾಟದ ನೇತೃತ್ವ ವಹಿಸಿದ್ದ ಟೊಯೋಟಾ ಮೋಟಾರ್ಸ್ ಕಾರ್ಮಿಕ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್ ಚಕ್ಕೆರೆ ಮಾತನಾಡಿ, ಸಹೋದ್ಯೊಗಿಗಳ ಅಮಾನತ್ತು ರದ್ದು, ಎಲ್ಲ ಕಾರ್ಮಿಕರನ್ನು ಮರಳಿ ಕರ್ತವ್ಯಕ್ಕೆ ತೆಗೆದುಕೊಳ್ಳುವುದು ಹಾಗೂ ಕಾರ್ಮಿಕರಿಗೆ ಆಡಳಿತ ಮಂಡಳಿ ನೀಡುತ್ತಿರುವ ಎಲ್ಲ ರೀತಿಯ ಕಿರುಕುಳ ನಿಲ್ಲಿಸುವ ಮೂಲಕ ಎಲ್ಲ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಾರ್ಖಾನೆಯಲ್ಲಿನ ಸಮಸ್ಯೆ ಕೇವಲ ಕಾರ್ಮಿಕರ ಸಮಸ್ಯೆ ಮಾತ್ರವಲ್ಲ, ದೇಶದ ಎಲ್ಲ ಬಹುರಾಷ್ಟ್ರೀಯ ಕಂಪೆನಿಗಳ ಸಮಸ್ಯೆ ಇದಾಗಿದೆ. ಕಾರ್ಮಿಕರನ್ನು ಯಂತ್ರಗಳಂತೆ ದುಡಿಸಿಕೊಳ್ಳುವುದು, ಅವರ ರಕ್ತವನ್ನು (ಶ್ರಮ) ಹೀರಿದ ಬಳಿಕ ಮನೆಗೆ ಕಳುಹಿಸುತ್ತಿದ್ದಾರೆ. ಈ ಶೋಷಣೆ ಸಹಿಸಲು ಸಾಧ್ಯವಿಲ್ಲ, ಇದು ಮೊದಲು ನಿಲ್ಲಬೇಕಿದೆ ಎಂದು ಪ್ರಸನ್ನಕುಮಾರ್ ಚೆಕ್ಕೆರೆ ಆಗ್ರಹಿಸಿದರು.

ಕಾರ್ಮಿಕರ ಹಿತರಕ್ಷಣೆಗಿರುವ ಕಾನೂನುಗಳನ್ನು ಗಾಳಿಗೆ ತೂರಿ ಶ್ರಮವನ್ನು ದೋಚುವ ಕಂಪೆನಿಯ ಆಡಳಿತ ವರ್ಗ, ಯಾವುದೇ ಕಾನೂನುಗಳಿಗೆ ಕನಿಷ್ಠ ಬೆಲೆ ಕೊಡುತ್ತಿಲ್ಲ. ಅಲ್ಲದೆ, ಸರಕಾರದ ಮಾತಿಗೂ ಕಿಮ್ಮತ್ತು ನೀಡುತ್ತಿಲ್ಲ. ಇಂತಹ ಶೋಷಣೆ ನಡೆಯುತ್ತಿದ್ದರೂ ಈ ವಿಚಾರವಾಗಿ ಸರಕಾರ ಮತ್ತು ಜಿಲ್ಲಾಧಿಕಾರಿಗಳು ಮೌನ ವಹಿಸಿರುವುದು ಸರಿಯಲ್ಲ. ಹೀಗಾಗಿ ಕೂಡಲೇ ಜಿಲ್ಲಾಧಿಕಾರಿ ಮತ್ತು ಸರಕಾರ ಮಧ್ಯೆಪ್ರವೇಶಿಸಿ ಬಿಕ್ಕಟ್ಟು ಬಗೆಹರಿಸಬೇಕು ಎಂದು ಅವರು ಒತ್ತಾಯ ಮಾಡಿದರು.

ಇದೇ ವೇಳೆ ಮಾತನಾಡಿದ ಬಿಎಸ್ಪಿ ಮುಖಂಡ ಮಾರಸಂದ್ರ ಮುನಿಯಪ್ಪ, ಕೇಂದ್ರ ಸರಕಾರ ಬಡ ಕಾರ್ಮಿಕರ ಹಿತರಕ್ಷಣೆಗಾಗಿದ್ದ ಎಲ್ಲ ಕಾನೂನುಗಳನ್ನು ತಿದ್ದುಪಡಿ ಮಾಡುವ ಮೂಲಕ ಎಲ್ಲ ಕ್ಷೇತ್ರಗಳ ಖಾಸಗೀಕರಣಕ್ಕೆ ಹುನ್ನಾರ ನಡೆಸಿದ್ದು, ಇದರ ವಿರುದ್ಧ ಕಾರ್ಮಿಕರಿಗೆ ಹೋರಾಟ ಬಿಟ್ಟರೆ ಬೇರೆ ದಾರಿ ಇಲ್ಲ. ಟೊಯೋಟಾ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವಿನ ಬಿಕ್ಕಟ್ಟು ಪರಿಹಾರಕ್ಕೆ ಸರಕಾರ ಮುಂದಾಗಬೇಕು ಎಂದು ತಿಳಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಬೈರೇಗೌಡ ಮಾತನಾಡಿ, ದುಡಿಯುವ ಕೈಗಳು ದೇಶಕ್ಕೆ ಆಧಾರ. ರೈತ-ಕಾರ್ಮಿಕರ ಸಂಯಮದಿಂದ ದೇಶ ನಡೆಯುತ್ತಿದೆ. ಈ ವರ್ಗಕ್ಕೆ ಅನ್ಯಾಯವಾದರೆ ಸಹಿಸಲು ಸಾಧ್ಯವಿಲ್ಲ. ಹೀಗಾಗಿ ಕಾರ್ಮಿಕರ ಹೋರಾಟಕ್ಕೆ ರೈತರ ಬೆಂಬಲ ಸದಾ ಇರಲಿದೆ. ಸರಕಾರ ಕೂಡಲೇ ಮಧ್ಯಪ್ರವೇಶ ಮಾಡಿ ಬಿಕ್ಕಟ್ಟು ಬಗೆಹರಿಸಬೇಕು. ಇಲ್ಲವಾದರೆ, ರೈತ ಸಂಘದ ನೇತೃತ್ವದಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಾರ್ಖಾನೆ ಕಾರ್ಮಿಕರ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಡಿಸಿಎಂ ರಾಜೀನಾಮೆಗೆ ಒತ್ತಾಯ: ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಅವರು, ಜಿಲ್ಲೆಯಲ್ಲಿ ಕಾರ್ಮಿಕರು 40 ದಿನಗಳ ಸುದೀರ್ಘ ಅವಧಿಯಿಂದ ಹೋರಾಟ ನಡೆಸುತ್ತಿದ್ದರೂ, ಇದಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಇರುವುದು ಸರಿಯಲ್ಲ. ಕೂಡಲೇ ಬಿಕ್ಕಟ್ಟು ಬಗೆಹರಿಸಬೇಕು. ಇಲ್ಲವಾದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸೂಕ್ತ ಎಂದು ಸಲಹೆ ಮಾಡಿದರು.

ಇದೇ ವೇಳೆ ರಾಮನಗರ ಅಪರ ಜಿಲ್ಲಾಧಿಕಾರಿ ಜವರೇಗೌಡ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಜವರೇಗೌಡ ಅವರು, ಟೊಯೋಟಾ ಕಾರ್ಖಾನೆ ಕಾರ್ಮಿಕರ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತಂದು ಶೀಘ್ರವೇ ಸೂಕ್ತ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ.

ಸಿಐಟಿಯು ಕಾರ್ಯದರ್ಶಿ ಉಮೇಶ್, ರೈತ ಮುಖಂಡರಾದ ಅನಸೂಯ, ಬಡಗಲಪುರ ನಾಗೇಂದ್ರ, ಮುತ್ತುರಾಜ್ ದೆನ್ಸೋ, ಎಐಸಿಸಿಟಿಯುನ ಅಪ್ಪಣ್ಣ, ಬಿಎಸ್ಪಿಯ ಕೃಷ್ಣಮೂತಿ, ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಾರ್ಖಾನೆ ಕಾರ್ಮಿಕರ ಯುನಿಯನ್‍ನ ಗಂಗಾಧರ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.

'ವಿಧಾನಸೌಧ ಮುತ್ತಿಗೆ' ಎಚ್ಚರಿಕೆ:

'ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಡಾ.ಅಶ್ವತ್ಥ ನಾರಾಯಣ ಅವರು ಅದಷ್ಟು ಶೀಘ್ರವೇ ಟೊಯೋಟಾ ಕಂಪೆನಿ ಕಾರ್ಮಿಕರ ಬಿಕ್ಕಟ್ಟು ಬಗೆಹರಿಸಬೇಕು. ಇಲ್ಲವಾದರೆ ವಿಧಾನಸೌಧ ಮುತ್ತಿಗೆ ಹಾಕಲಾಗುವುದು. ಹೋರಾಟ ಹತ್ತಿಕ್ಕುವ ಪ್ರಯತ್ನ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆಂಬ ಎಚ್ಚರಿಕೆ ಸರಕಾರಕ್ಕೆ ಇರಬೇಕು. ಕಾರ್ಮಿಕರ ತಾಳ್ಮೆ ಪರೀಕ್ಷೆ ಸರಿಯಲ್ಲ'

-ಎಂ.ಕೃಷ್ಣಮೂರ್ತಿ, ಬಿಎಸ್ಪಿ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News