ಕೇಂದ್ರ ಸರಕಾರ ಕರ್ನಾಟಕದಲ್ಲಿ 1.16 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಿದೆ: ನಿತಿನ್ ಗಡ್ಕರಿ

Update: 2020-12-19 14:27 GMT

ಬೆಂಗಳೂರು, ಡಿ.19: ರಾಜ್ಯದ 33 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಉದ್ಘಾಟನೆ, ಶಿಲಾನ್ಯಾಸವನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶನಿವಾರ ಹೊಸದಿಲ್ಲಿಯಿಂದ ಆನ್‍ಲೈನ್ ಮೂಲಕ ನೆರವೇರಿಸಿದರು. ಈ ಯೋಜನೆಗಳಲ್ಲಿ 10,904 ಕೋಟಿ ರೂ.ವೆಚ್ಚದ 1,197 ಕಿ.ಮೀ ರಸ್ತೆಗಳು ಸೇರಿವೆ.

ಈ ಸಂದರ್ಭದಲ್ಲಿ ಮಾತನಾಡಿದ ನಿತಿನ್ ಗಡ್ಕರಿ, ಕಳೆದ ಆರು ವರ್ಷಗಳಲ್ಲಿ ಕರ್ನಾಟಕದಲ್ಲಿ 900 ಕಿ.ಮೀ.ಗಿಂತ ಹೆಚ್ಚಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಗಳಿಗೆ ಸೇರಿಸಲಾಗಿದೆ. ಈಗ ರಾಜ್ಯದಲ್ಲಿ ಒಟ್ಟು 7,652 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಇದೆ. 2,384 ಕಿ.ಮೀ ಉದ್ದದ 37,311 ಕೋಟಿ ರೂ.ವೆಚ್ಚದ ಒಟ್ಟು 71 ಕಾಮಗಾರಿಗಳು ನಡೆಯುತ್ತಿವೆ. ಇವುಗಳಲ್ಲಿ, 12,286 ಕೋಟಿ ರೂ.ವೆಚ್ಚದ 1,127 ಕಿ.ಮೀ ಉದ್ದ ಹೊಂದಿರುವ 26 ಕಾಮಗಾರಿಗಳಲ್ಲಿ ಶೇ.70ಕ್ಕಿಂತ ಹೆಚ್ಚಿನ ಕೆಲಸ ಮುಗಿದಿದೆ. 1257 ಕಿ.ಮೀ ಉದ್ದದ 25,025 ಕೋಟಿ ರೂ. ವೆಚ್ಚದ 45 ಕಾಮಗಾರಿಗಳಲ್ಲಿ ಶೇ.70ರವರೆಗೆ ಪ್ರಗತಿಯನ್ನು ಸಾಧಿಸಲಾಗಿದೆ ಎಂದರು.

ವ್ಯಾಪಾರ ಮತ್ತು ಆರ್ಥಿಕತೆಯ ಅನುಕೂಲಕ್ಕಾಗಿ ಬಂದರುಗಳಿಗೆ ಸುಗಮ ಸಂಪರ್ಕವನ್ನು ಕಲ್ಪಿಸಲು, ಗೋವಾ ಗಡಿಯಿಂದ ಕೇರಳ ಗಡಿಯವರೆಗಿನ ನಾಲ್ಕು ಪಥಗಳ ರಸ್ತೆಯು, ಬಂದರು ನಗರವಾದ ಬೇಲೇಕೇರಿ, ಕಾರವಾರ ಮತ್ತು ಮಂಗಳೂರನ್ನು ಸಂಪರ್ಕಿಸಲಿದ್ದು, 278 ಕಿ.ಮೀ. ಉದ್ದದ ಈ ರಸ್ತೆ ಕಾಮಗಾರಿಯನ್ನು 3,443 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇದಲ್ಲದೆ, ರಸ್ತೆ ಬಳಕೆದಾರರ ಸುರಕ್ಷತೆಯ ದೃಷ್ಟಿಯಿಂದ, ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಶಿರಾಡಿಘಾಟ್, ಎನ್‍ಎಚ್-73 ರಲ್ಲಿ ಚಾರ್ಮಾಡಿ ಘಾಟ್ ಮತ್ತು ಎನ್‍ಎಚ್-275 ರಲ್ಲಿ ಸಂಪಾಜೆ ಘಾಟ್ ನಲ್ಲಿ ಬೆಟ್ಟದ ಇಳಿಜಾರುಗಳಲ್ಲಿ ರಕ್ಷಣಾತ್ಮಕ ಕ್ರಮಗಳನ್ನು ಒದಗಿಸುವ ಮೂಲಕ ಸುರಕ್ಷತೆಯನ್ನು ಸುಧಾರಿಸುವ 115 ಕೋಟಿ ರೂ.ವೆಚ್ಚದ 3 ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದೆ ಎಂದು ಅವರು ತಿಳಿಸಿದರು.

ಮುಂಬರುವ ವರ್ಷಗಳಲ್ಲಿ ಕೇಂದ್ರ ಸರಕಾರವು ಕರ್ನಾಟಕದಲ್ಲಿ ಸುಮಾರು 1,16,144 ಕೋಟಿ ರೂ.ಗಳನ್ನು ಹೂಡಿಕೆ ಮಾಡಲಿದೆ. 2019-21ನೇ ಆರ್ಥಿಕ ವರ್ಷದಲ್ಲಿ ರಾಜ್ಯದಲ್ಲಿ 5083 ಕೋಟಿ ರೂ.ವೆಚ್ಚದ 275 ಕಿ.ಮೀ.ನ 11 ರಸ್ತೆ ಯೋಜನೆಗಳಿಗೆ ಟೆಂಡರ್ ನೀಡಲಾಗಿದೆ. ರಾಜ್ಯಕ್ಕೆ ಈವರೆಗೆ 8,330 ಕೋಟಿ ರೂ.ಗಳ ಸಿಆರ್‍ಎಫ್ ಕಾಮಗಾರಿಗಳನ್ನು ಮಂಜೂರು ಮಾಡಲಾಗಿದೆ. ಸಿಆರ್‍ಎಫ್ ಅಡಿಯಲ್ಲಿ ಈ ವರ್ಷದ ಒಟ್ಟು 435 ಕೋಟಿ ರೂ.ಗಳಲ್ಲಿ 217 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಈ ವರ್ಷದ ಉಳಿದ 218 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ನಿತಿನ್ ಗಡ್ಕರಿ ಘೋಷಿಸಿದರು.

ದೇಶದ ಅತಿದೊಡ್ಡ ಕಬ್ಬು ಉತ್ಪಾದಕ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕ ಎಥೆನಾಲ್ ಉತ್ಪಾದನೆಯನ್ನು ದೊಡ್ಡ ಪ್ರಮಾಣದಲ್ಲಿ ಕೈಗೊಳ್ಳಬೇಕು. ದೇಶವು ಈಗಾಗಲೇ ಸಕ್ಕರೆ ಮತ್ತು ಅಕ್ಕಿಯನ್ನು ಹೆಚ್ಚುವರಿಯಾಗಿ ಉತ್ಪಾದಿಸುತ್ತಿದೆ ಮತ್ತು ಸರಕಾರದಲ್ಲಿ ಸಾಕಷ್ಟು ಸಂಗ್ರಹವಿದೆ. ಹೆಚ್ಚುವರಿ ಸಂಗ್ರಹವನ್ನು ಎಥೆನಾಲ್ ಆಗಿ ಪರಿವರ್ತಿಸಬಹುದು, ಇದನ್ನು ವಾಹನಗಳಿಗೆ ಪರ್ಯಾಯ ಇಂಧನವಾಗಿ ಬಳಸಬಹುದು. ಇದು ರೈತರ ಆದಾಯವನ್ನು ಸುಧಾರಿಸುವುದಲ್ಲದೆ, ದೇಶಕ್ಕೆ ಸ್ಥಳೀಯ ಇಂಧನಗಳ ಮೂಲವಾಗಲಿದೆ ಎಂದು ಅವರು ತಿಳಿಸಿದರು.

ಅಂತರ್ ರಾಜ್ಯ ಸಂಪರ್ಕವು ವೇಗವಾಗಿರುತ್ತದೆ ಮತ್ತು ಅಡಚಣೆರಹಿತವಾಗಿರುತ್ತದೆ. ಇದು ಕೃಷಿ, ಮೀನುಗಾರಿಕೆ ಮತ್ತು ಆರೋಗ್ಯ ಕ್ಷೇತ್ರಗಳ ಮೇಲೆ ಪರಿವರ್ತನೆಯ ಪರಿಣಾಮ ಬೀರುತ್ತದೆ. ಆರ್ಥಿಕ ಕಾರಿಡಾರ್ ಗಳು, ವೆಚ್ಚ ಮತ್ತು ದೂರ ಪ್ರದೇಶಗಳ ತ್ವರಿತ ಬೆಳವಣಿಗೆ ಮತ್ತು ಪ್ರಯಾಣಿಕರು ಹಾಗೂ ಸರಕುಗಳ ಸುರಕ್ಷಿತ ಸಂಚಾರವನ್ನು ಸುಧಾರಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಇದಲ್ಲದೆ, ರಾಷ್ಟ್ರೀಯ ಹೆದ್ದಾರಿ 66 ರ ಅಭಿವೃದ್ಧಿಯು ರಾಜ್ಯದ ಆರ್ಥಿಕತೆಗೆ ಉತ್ತೇಜನ ನೀಡುತ್ತದೆ ಮತ್ತು ಬಂದರುಗಳಿಗೆ ಸಂಪರ್ಕವನ್ನು ಒದಗಿಸುತ್ತದೆ. ಇಂದು ಉದ್ಘಾಟನೆಯಾಗಿರುವ ಯೋಜನೆಗಳು ಕರ್ನಾಟಕದ ಪ್ರಮುಖ ನಗರಗಳ ನಡುವೆ ಉತ್ತಮ ಸಂಪರ್ಕವನ್ನು ಒದಗಿಸುತ್ತವೆ ಎಂದು ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಖಾತೆ ರಾಜ್ಯ ಸಚಿವ ಜನರಲ್ ಡಾ.ವಿ.ಕೆ.ಸಿಂಗ್ ಹೇಳಿದರು.

ರಾಜ್ಯದಲ್ಲಿ ರಸ್ತೆ ಜಾಲವನ್ನು ಅಭಿವೃದ್ಧಿಪಡಿಸಲು ಸರಕಾರ ಕೈಗೊಂಡಿರುವ ಕ್ರಮಗಳನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಶ್ಲಾಘಿಸಿದರು. ಹೊಸ ತಂತ್ರಜ್ಞಾನವು ಅಭಿವೃದ್ಧಿಯ ಸನ್ನಿವೇಶವನ್ನು ಸಂಪೂರ್ಣವಾಗಿ ಬದಲಾಯಿಸಿದೆ. ನಾವು ಇಂದು ನೋಡುತ್ತಿರುವುದನ್ನು ನಂಬಲಾಗುತ್ತಿಲ್ಲ ಎಂದು ಅವರು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಕೇಂದ್ರ ಸಚಿವರು ನೀಡಿದ ಎಲ್ಲ ಸಲಹೆಗಳನ್ನು ಕಾರ್ಯರೂಪಕ್ಕೆ ತರಲಾಗುವುದು. ತಮ್ಮ ಸರಕಾರ ರಾಜ್ಯದ ಅಭಿವೃದ್ಧಿಗೆ ಮತ್ತು ಜನರ ಜೀವನ ಗುಣಮಟ್ಟವನ್ನು ಹೆಚ್ಚಿಸಲು ಬದ್ಧವಾಗಿದೆ. ತಮ್ಮ ಸರಕಾರದ ಗುರಿಗಳನ್ನು ಸಾಧಿಸಲು ಕೇಂದ್ರದ ಸಹಕಾರದೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದರು.

ಕಳೆದ 6 ವರ್ಷಗಳಲ್ಲಿ ಕರ್ನಾಟಕದಲ್ಲಿ ಕೇಂದ್ರ ಸರಕಾರ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸಿದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಗೋವಾದಿಂದ ತಿರುವನಂತಪುರಕ್ಕೆ ಕರಾವಳಿ ರಸ್ತೆ ಜಾಲವನ್ನು ಯೋಜಿಸಿದ್ದಕ್ಕಾಗಿ ಗಡ್ಕರಿ ಅವರನ್ನು ಶ್ಲಾಘಿಸಿದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ ರಾಷ್ಟ್ರೀಯ ಹೆದ್ದಾರಿ ವಲಯದ ಅಭಿವೃದ್ಧಿ ಕೆಲಸಗಳನ್ನು ಶ್ಲಾಘಿಸಿದರು. ರಸ್ತೆ ಸಂಪರ್ಕವು ಈಗ ಆಹಾರ, ಬಟ್ಟೆ ಮತ್ತು ವಸತಿಯಂತೆಯೇ ಮೂಲಭೂತ ಅವಶ್ಯಕತೆಯಾಗಿದೆ ಎಂದು ಅವರು ಹೇಳಿದರು.

ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಸಿಆರ್‍ಎಫ್ ಮೊತ್ತವನ್ನು ರಾಜ್ಯದ ಎಲ್ಲ ಯೋಜನೆಗಳಿಗೆ ಸಮಾನವಾಗಿ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು. ಈ ಕಾರ್ಯಕ್ರಮದಲ್ಲಿ ಆನ್‍ಲೈನ್ ಮೂಲಕ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸೇರಿದಂತೆ ಇನ್ನಿತರ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News