×
Ad

ಪ್ರತಿಭಟನಾನಿರತ ರೈತರು, ಕಾರ್ಮಿಕರನ್ನು ಮಾತುಕತೆಗೆ ಆಹ್ವಾನಿಸಿ ಸಮಸ್ಯೆ ಬಗೆಹರಿಸಿ: ಸಿದ್ದರಾಮಯ್ಯ ಆಗ್ರಹ

Update: 2020-12-20 17:46 IST

ಬೆಂಗಳೂರು, ಡಿ. 20: ರಾಜ್ಯದಲ್ಲಿ ಕೆಲ ತಿಂಗಳುಗಳಿಂದ ರೈತರು ಮತ್ತು ಕಾರ್ಮಿಕರು ಪ್ರತಿಭಟನೆ ಹಾಗೂ ಸತ್ಯಾಗ್ರಹಗಳಲ್ಲಿ ತೊಡಗಿದ್ದಾರೆ. ಪ್ರತಿಭಟನೆಯಲ್ಲಿ ನಿರತರಾಗಿರುವ ರೈತರು, ಕಾರ್ಮಿಕರನ್ನು ಮಾತುಕತೆಗೆ ಕರೆದು ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ. 

ರವಿವಾರ ಈ ಕುರಿತು ಸಿಎಂ ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಅವರು, ಬಿಡದಿಯ ಟೊಯೋಟಾ ಕಂಪೆನಿ ರಾಜ್ಯದಲ್ಲಿ ಹಲವು ಘಟಕಗಳನ್ನು ಹೊಂದಿದೆ. ಕಂಪೆನಿ ಹೆಚ್ಚು ಲಾಭಗಳಿಸುವ ಉದ್ದೇಶದಿಂದ ವಿಪರೀತ ಕಿರುಕುಳ ನೀಡುತ್ತಿವೆ ಎನ್ನುವುದು ಕಾರ್ಮಿಕರ ಆರೋಪ. ಶೋಷಣೆಯನ್ನು ಪ್ರಶ್ನಿಸಿದ ನೌಕರರನ್ನು ಕಂಪೆನಿ ಅಮಾನತ್ತು ಮಾಡಿದೆ. ಪ್ರತಿಭಟನೆಗೆ ಕೂತರೆ ಕಂಪೆನಿ ಕ್ಯಾರೆ ಎನ್ನುತ್ತಿಲ್ಲ. ಬದಲಾಗಿ ಲಾಕ್‍ಔಟ್ ಮಾಡಿವೆ ಎಂದು ಹೇಳಿದ್ದಾರೆ.

ಕಂಪೆನಿಯ ಮುಂದೆ ಖಾಲಿ ಇದ್ದ ಜಾಗದಲ್ಲಿ ಪ್ರತಿಭಟನೆ ಮಾಡುವುದಕ್ಕಾಗಿ ಹಾಕಿದ್ದ ಶಾಮಿಯಾನವನ್ನು ತೆರವುಗೊಳಿಸಲು ಸರಕಾರ ಕೆಐಎಡಿಬಿ ಮೇಲೆ ಒತ್ತಡ ತಂದಿದೆ. ಕೆಐಡಿಬಿಯು ಆ ಜಾಗದ ಮಾಲಕರಿಗೆ ನೋಟಿಸ್ ನೀಡಿ ಶಾಮಿಯಾನವನ್ನು ತೆರವುಗೊಳಿಸಿದೆ. ಕಾರ್ಮಿಕರ ಪ್ರತಿಭಟನೆ 40ನೆ ದಿನಕ್ಕೆ ಕಾಲಿಟ್ಟರೂ ಇದುವರೆಗೂ ಕಂಪೆನಿಯು ಲಾಕ್‍ಔಟ್ ತೆರವುಗೊಳಿಸಿ ಮಾತುಕತೆಗೆ ಮುಂದಾಗಿಲ್ಲ ಎಂದು ಅವರು ಹೇಳಿದ್ದಾರೆ.

ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿ ಇರುವ ವಿಸ್ಟ್ರಾನ್ ಕಂಪೆನಿಯಲ್ಲಿ 9,833 ಕಾರ್ಮಿಕರು ಕೆಲಸ ಮಾಡುತ್ತಿದ್ದು, ಅವರಲ್ಲಿ 8,490 ಸಾವಿರ ಜನ ಗುತ್ತಿಗೆ ಕಾರ್ಮಿಕರು. 1,343 ಖಾಯಂ ಕಾರ್ಮಿಕರಿದ್ದಾರೆ. ಈ ಕಂಪೆನಿಯು ಅಮೆರಿಕದ ಪ್ರತಿಷ್ಟಿತ ಮತ್ತು ಜಾಗತಿಕ ಮಟ್ಟದಲ್ಲಿ ಅತ್ಯಂತ ಶ್ರೀಮಂತ ಕಂಪೆನಿ. ಆ್ಯಪಲ್(ಐ-ಫೋನ್) ಈ ಕಂಪೆನಿಗೆ ಉಪಕರಣಗಳನ್ನು ತಯಾರಿಸಿ ಕೊಡುತ್ತಿದೆ. ಇಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮಾಸಿಕ 22 ಸಾವಿರ ರೂ.ವೇತನ ನೀಡುತ್ತೇವೆಂದು ಹೇಳಿ ಕೆಲಸಕ್ಕೆ ಸೇರಿಸಿಕೊಂಡು ಬಹುಪಾಲು ಜನರಿಗೆ ಕೇವಲ 8ಸಾವಿರ ರೂ.ಮಾತ್ರ ನೀಡಲಾಗುತ್ತಿದೆಯೆಂಬ ಆರೋಪವಿದೆ. ಕಂಪೆನಿಯು 8 ಗಂಟೆಗೆ ಬದಲಾಗಿ 12 ಗಂಟೆ ದುಡಿಸಿಕೊಳ್ಳುತ್ತಿದೆ. ಗುತ್ತಿಗೆ ಕಾರ್ಮಿಕರಿಗೆ ಮೂರು ನಾಲ್ಕು ತಿಂಗಳಿನಿಂದ ಸಂಬಳವನ್ನೇ ನೀಡಿಲ್ಲ ಎಂಬ ಮಾಹಿತಿಯನ್ನು ಕಾರ್ಮಿಕ ಸಚಿವರು ಇತ್ತೀಚೆಗೆ ನೀಡಿರುವ ಹೇಳಿಕೆಗಳೂ ಸಮರ್ಥಿಸುತ್ತಿವೆ. ಕಾರ್ಮಿಕರು ಶೌಚಾಲಯಕ್ಕೆ ಹೋದ ಅವಧಿಯನ್ನು ಕೆಲಸ ಮಾಡದ ಅವಧಿ ಎಂದು ಪರಿಗಣಿಸಿ ತಿಂಗಳಲ್ಲಿ ಎರಡು ಮೂರು ದಿನಗಳ ಸಂಬಳವನ್ನು ಕಡಿತಗೊಳಿಸಲಾಗಿದೆ. ಈ ರೀತಿಯ ಅಮಾನವೀಯ ಸಂಗತಿಗಳು ಕಾರ್ಮಿಕ ವಲಯವನ್ನು ರೊಚ್ಚಿಗೇಳುವಂತೆ ಮಾಡಿವೆ. ಕೋಲಾರದ ಈ ಕಂಪೆನಿಯ 7 ಸಾವಿರ ಮಂದಿ ಕಾರ್ಮಿಕರ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ. ಇವರಲ್ಲಿ ಬಹುಪಾಲು ಮಂದಿ ವಿದ್ಯಾರ್ಥಿಗಳು ಸೇರಿದ್ದಾರೆಂಬುದು ಆತಂಕದ ವಿಚಾರ ಎಂದು  ಸಿದ್ದರಾಮಯ್ಯ ಹೇಳಿದ್ದಾರೆ.  

ರಾಮನಗರ ಜಿಲ್ಲೆಯಲ್ಲಿರುವ ಅರವಿಂದ್ ಫ್ಯಾಷನ್ಸ್ ಎಂಬ ಸಿದ್ದ ಉಡುಪು ಕಾರ್ಖಾನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಕುಸಿದಿದೆ ಎನ್ನುವ ನೆಪ ಹೇಳಿ ಏಕಾಏಕಿ ಬಂದ್ ಮಾಡಿದೆ. 12 ವರ್ಷದಿಂದ ಕೆಲಸ ಮಾಡಿಕೊಂಡಿದ್ದ ಕಾರ್ಮಿಕರು ಬೆಳಗಾಗುವುದರೊಳಗೆ ಬೀದಿಗೆ ಬಿದ್ದಿದ್ದಾರೆ.
ಆಡಳಿತದ ಸಮಸ್ಯೆಗಳನ್ನು ನಿಭಾಯಿಸುವುದಕ್ಕೋಸ್ಕರವೇ ಸಂವಿಧಾನದಡಿ ಕಾರ್ಮಿಕ ಕಾಯ್ದೆಗಳನ್ನು ರೂಪಿಸಲಾಗಿದೆ. ದುಡಿಯುವ ವರ್ಗಗಳ ಸಮಸ್ಯೆಗಳನ್ನು ಬಗೆಹರಿಸಲು ಬೇಕಾದ ಮುತ್ಸದ್ಧಿತನ ಮತ್ತು ಪ್ರಬುದ್ಧತೆ, ಮಾನವೀಯತೆ, ಅಂತಃಕರಣಗಳ ಅಗತ್ಯವಿದೆ ಎಂದು ಸಿದ್ದರಾಮಯ್ಯ ಸರಕಾರಕ್ಕೆ ಸಲಹೆ ಮಾಡಿದ್ದಾರೆ.

ಬಿಕ್ಕಟ್ಟಿನ ಸಂದರ್ಭದಲ್ಲಿ ಸರಕಾರ ನಿಷ್ಕ್ರಿಯವಾಗದೆ, ನಿರ್ಲಕ್ಷ್ಯ ಮನೋಭಾವವನ್ನು ತೊರೆದು ಕಂಪೆನಿಗಳ ಆಡಳಿತ ಮಂಡಳಿಗಳನ್ನು ಮತ್ತು ಕಾರ್ಮಿಕರನ್ನು ಕರೆದು ಸೌಹಾರ್ದಯುತವಾಗಿ ಸಮಸ್ಯೆಯನ್ನು ಇತ್ಯರ್ಥಪಡಿಸಿ ವ್ಯವಸ್ಥೆಯನ್ನು ಸುಗಮಗೊಳಿಸಬೇಕು ಹಾಗೂ ಜಾರಿಗೆ ತಂದಿರುವ ಎಲ್ಲ ಜನವಿರೋಧಿ ಕಾಯ್ದೆಗಳನ್ನು ರದ್ದು ಮಾಡಬೇಕೆಂದು ಸಿದ್ದರಾಮಯ್ಯ ಪತ್ರದಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News