×
Ad

ಪ್ರಾದೇಶಿಕ ಪಕ್ಷ ಕಟ್ಟಿ ಗೆದ್ದು ತೋರಿಸಲಿ ಎಂಬ ಕುಮಾರಸ್ವಾಮಿ ಸವಾಲಿಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು ಹೀಗೆ...

Update: 2020-12-21 18:04 IST

ಬೆಂಗಳೂರು, ಡಿ. 21: ಜಾತ್ಯತೀತ ಜನತಾ ದಳ(ಜೆಡಿಎಸ್) ಪಕ್ಷ ಬಿಜೆಪಿಯ ‘ಬಿ' ಟೀಮ್ ಎಂಬುದು ಸಾಬೀತಾಗಿದ್ದು, ಜೆಡಿಎಸ್ ಹಾಗೂ ಬಿಜೆಪಿ ಈಗಾಗಲೇ ಹೊಂದಾಣಿಕೆ ಮಾಡಿಕೊಂಡಾಗಿದೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಹಾಗೂ ಬಿಜೆಪಿ ಹೊಂದಾಣಿಕೆ ಮಾಡಿಕೊಂಡೇ ರೈತ ವಿರೋಧಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ, ವಿಧಾನ ಪರಿಷತ್ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಬೆಂಬಲ ನೀಡಿದೆ. ಆ ಮೂಲಕ ಜೆಡಿಎಸ್, ಬಿಜೆಪಿಯ ‘ಬಿ' ಟೀಮ್ ಎಂಬುದಕ್ಕೆ ರುಜುವಾತು ಮಾಡಿದೆ. ಇಷ್ಟಾದರೂ ಮಾಜಿ ಸಿಎಂ ಕುಮಾರಸ್ವಾಮಿ ಮಾತ್ರ ತಮ್ಮದು ಜಾತ್ಯತೀತ ಪಕ್ಷ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ನಾನೇಕೆ ಪ್ರಾದೇಶಿಕ ಪಕ್ಷ ಕಟ್ಟಲಿ: 'ಸಿದ್ದರಾಮಯ್ಯನವರಿಗೆ ತಾಕತ್ತಿದ್ದರೆ ಪ್ರಾದೇಶಿಕ ಪಕ್ಷ ಕಟ್ಟಿ ಹತ್ತು ಸ್ಥಾನ ಗೆದ್ದು ತೋರಿಸಲಿ' ಎಂಬ ಕುಮಾರಸ್ವಾಮಿ ಅವರ ಸವಾಲಿಗೆ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಅವರು ಹೇಳಿದಂತೆ ನಾನೇಕೆ ಕೇಳಬೇಕು. ಹೊಸ ಪಕ್ಷ ಕಟ್ಟಲು ನನಗೇನು ಹುಚ್ಚು ಹಿಡಿದಿದೆಯೇ? ಎಂದು ಪ್ರಶ್ನಿಸಿದರು.

ನಾನು ಕಾಂಗ್ರೆಸ್ ಪಕ್ಷದಲ್ಲಿ ಮುಂಚೂಣಿ ನಾಯಕ ಆರಾಮಾಗಿದ್ದೇನೆ. ನಾನೇಕೆ ಹೊಸ ಪ್ರಾದೇಶಿಕ ಪಕ್ಷವನ್ನು ಕಟ್ಟಲಿ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ನಾಳೆ ಕುಮಾರಸ್ವಾಮಿ ‘ಬಾವಿಗೆ ಬೀಳು ಅಂದರೆ ಬೀಳಬೇಕೇ? ಅವರ ಯಾವುದೇ ಸವಾಲುಗಳನ್ನು ನಾನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದರು.
ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟುಕೊಂಡಿರುವವರೆಲ್ಲಾ ಜೆಡಿಎಸ್‍ನಿಂದ ದೂರ ಆಗುತ್ತಿದ್ದಾರೆ. ಈ ಹಿಂದೆ ಜೆಡಿಎಸ್ ಬಿಜೆಪಿಯ ಬಿ ಟೀಮ್ ಎಂದಾಗ ಎಲ್ಲರೂ ನನ್ನ ಮೇಲೆ ಮುರುಕೊಂಡು ಬಿದ್ದಿದ್ದರು. ಹಿಂದೆ ನಾನು ಹೇಳಿದ್ದು ಸರಿಯಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಜನ ನನ್ನ ಗೆಲ್ಲಿಸಿದ್ದು: ಬಾದಾಮಿ ಕ್ಷೇತ್ರಲ್ಲಿ ನನ್ನನ್ನು ಗೆಲ್ಲಿಸಿದ್ದು ಕುಮಾರಸ್ವಾಮಿ ಅಲ್ಲ. ಆ ಕ್ಷೇತ್ರದ ಜನತೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಿದ್ದು ಸ್ಥಳೀಯ ಕಾಂಗ್ರೆಸ್ ಮುಖಂಡರು ಎಂದು ನಾನು ಈ ಹಿಂದೆಯೇ ಹೇಳಿದ್ದೇನೆ. ಈ ಬಗ್ಗೆ ಪಕ್ಷದ ಸಭೆಯಲ್ಲೂ ಪ್ರಸ್ತಾಪಿಸಿದ್ದೇನೆ. ಬಿಜೆಪಿಯ ಸಿ.ಟಿ.ರವಿ ಹೇಳಿದ್ದಕ್ಕೆಲ್ಲಾ ಉತ್ತರ ಕೊಡಲು ಸಿ.ಟಿ.ರವಿ ಏನು ಪ್ರಶ್ನಾತೀತ ನಾಯಕನೇ? ಎಂದು ಸಿದ್ದರಾಮಯ್ಯ ಟೀಕಿಸಿದರು.

ಜೆಡಿಎಸ್, ಬಿಜೆಪಿ ಜತೆ ವಿಲೀನದಿಂದ ರಾಜ್ಯದಲ್ಲಿ ಏನೂ ಆಗುವುದಿಲ್ಲ. ಜೆಡಿಎಸ್ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ. ಜಾತ್ಯತೀತ ತತ್ವದ ಮೇಲೆ ನಂಬಿಕೆ ಇಟ್ಟವರು ವಿಲೀನದಿಂದ ದೂರವಾಗಲಿದ್ದಾರೆ. ಜೆಡಿಎಸ್, ಬಿಜೆಪಿಯ ಒಳ ಒಪ್ಪಂದಕ್ಕೆ ಸಂಬಂಧಿಸಿದಂತೆ ನಾನು ಮಾತನಾಡುವುದಿಲ್ಲ. ಭವಿಷ್ಯದಲ್ಲಿ ಜೆಡಿಎಸ್ ಪಕ್ಷವೇ ಇರುವುದಿಲ್ಲ ಎಂದು ಸಿದ್ದರಾಮಯ್ಯ ಗುಡುಗಿದರು.

ಸ್ಪಷ್ಟನೆ: ಮುಂದಿನ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರವನ್ನು ಬಿಟ್ಟು ಚಾಮರಾಜಪೇಟೆ ಕ್ಷೇತ್ರದಿಂದ ಸ್ಪರ್ಧೆ ಮಾಡುವ ವಿಚಾರ ಇಲ್ಲ. ಈಗ ಅದು ಅಪ್ರಸ್ತುತ ಎಂದ ಅವರು, ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಹೀಂ ಅವರು ಜೆಡಿಎಸ್ ಸೇರುವುದಿಲ್ಲ. ಅವರು ಕಾಂಗ್ರೆಸ್ ಪಕ್ಷವನ್ನು ಬಿಡುವುದಿಲ್ಲ. ಇಬ್ರಾಹೀಂ ಮತ್ತು ನನ್ನದು ಹಳೆಯ ಸ್ನೇಹ. ಹೀಗಾಗಿ ಅವರು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮುಸ್ಲಿಂ ಸಮುದಾಯದವರನ್ನು ಸಮಯ ಬಂದಾಗ ನೇಮಕ ಮಾಡುತ್ತೇವೆ. ಗುಲಾಬ್ ನಬಿ ಅಝಾದ್, ಅಹಮದ್ ಪಟೇಲ್ ಕಾಂಗ್ರೆಸ್‍ನಲ್ಲಿ ಉನ್ನತ ಸ್ಥಾನದಲ್ಲಿ ಇರಲಿಲ್ಲವೇ ಎಂದ ಸಿದ್ದರಾಮಯ್ಯ, ರಾಜಕಾರಣ ನಿಂತ ನೀರಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಸರಕಾರ ಶಾಮೀಲಾಗಿದೆ: ಖಾಸಗಿ ಶಾಲೆಗಳು ಮತ್ತು ಪೋಷಕರ ಸಮಸ್ಯೆ ಬಗ್ಗೆ ಸರಕಾರಕ್ಕೆ ಪತ್ರ ಬರೆದಿದ್ದೆ. ಒಂದು ವರ್ಷ ಪರೀಕ್ಷೆ ಇಲ್ಲದೆ ಮಕ್ಕಳನ್ನು ಉತ್ತೀರ್ಣ ಮಾಡಿ ಎಂದು ಒತ್ತಾಯ ಮಾಡಿದ್ದೆ. ನಿನ್ನೆ ಪೋಷಕರು ಖಾಸಗಿ ಶಾಲೆಗಳ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಆದರೆ, ಖಾಸಗಿ ಶಾಲೆಗಳ ಜತೆ ಸರಕಾರ ಶಾಮೀಲಾಗಿದೆ ಎಂದು ಅವರು ಪುನರುಚ್ಚರಿಸಿದರು.

‘ಕೊಡವ ಸಮುದಾಯದವರು ದನದ ಮಾಂಸ(ಬೀಫ್) ತಿನ್ನುತ್ತಾರೆ ಎಂದು ನಾನು ಅಗೌರವವಾಗಿ ಮಾತನಾಡಿಲ್ಲ. ಆದರೂ, ಆ ಸಮುದಾಯಕ್ಕೆ ಬೇಸರವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಮತ್ತೆ ಮತ್ತೆ ಈ ವಿಚಾರವನ್ನು ಕೆದಕುವುದು ಸರಿಯಲ್ಲ. ಬಿಜೆಪಿಯವರು ಭಾವನಾತ್ಮಕ ವಿಚಾರಗಳನ್ನು ಕೆದಕುವುದನ್ನೇ ಚಾಳಿ ಮಾಡಿಕೊಂಡಿದ್ದಾರೆ.’
-ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News