×
Ad

ಮೇಲ್ಮನೆ ಗದ್ದಲದ ಬಳಿಕ ಬಂಗಲೆ ತೊರೆದು, ಕಾರು ವಾಪಸ್ ನೀಡಿದ ಸಭಾಪತಿ ಪ್ರತಾಪಚಂದ್ರ ಶೆಟ್ಟಿ

Update: 2020-12-21 18:46 IST

ಬೆಂಗಳೂರು, ಡಿ.21: ಮೇಲ್ಮನೆಯಲ್ಲಿ ನಡೆದ ಗದ್ದಲದ ಬಳಿಕ ವಿಧಾನಪರಿಷತ್ ಸಭಾಪತಿ ಕೆ.ಪ್ರತಾಪಚಂದ್ರಶೆಟ್ಟಿ ವಿಧಾನ ಮಂಡಲದಿಂದ ತಮಗೆ ಒದಗಿಸಿದ್ದ ಕಾರು ಮತ್ತು ಬಂಗಲೆಯನ್ನು ಮರಳಿಸಿದ್ದಾರೆ.

ಡಿಸೆಂಬರ್ 15ರಂದು ನಡೆದ ವಿಧಾನ ಪರಿಷತ್ ಅಧಿವೇಶನದಲ್ಲಿ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಯತ್ನಿಸಿದ್ದರು. ಅದು ಸದನದಲ್ಲಿ ಕೋಲಾಹಲಕ್ಕೆ ಕಾರಣವಾಗಿತ್ತು. ಬಳಿಕ ಸದನದ ಕಲಾಪವನ್ನು ಅನಿರ್ದಿಷ್ಟಾವಧಿಯವರೆಗೆ ಮುಂದೂಡಲಾಗಿತ್ತು.

ಅಧಿವೇಶನ ಮುಗಿಸಿ ಉಡುಪಿಗೆ ತೆರಳಿದ ಪ್ರತಾಪಚಂದ್ರ ಶೆಟ್ಟಿ ಅವರು ಶನಿವಾರವೇ ಕಾರನ್ನು ವಾಪಸ್ ಕಳುಹಿಸಿದ್ದಾರೆ. ಬಂಗಲೆಯನ್ನೂ ತೆರವು ಮಾಡಿದ್ದು, ಸ್ವಾಧೀನಕ್ಕೆ ಪಡೆಯುವಂತೆ ವಿಧಾನಮಂಡಲ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಈ ಕುರಿತು ಮಾಧ್ಯಮಕ್ಕೆ ಖಚಿತಪಡಿಸಿರುವ ಪ್ರತಾಪಚಂದ್ರ ಶೆಟ್ಟಿ, ಶನಿವಾರವೇ ಕಾರನ್ನು ವಾಪಸ್ ಕಳುಹಿಸಿದ್ದೇನೆ. ಬಂಗಲೆಯಿಂದ ನಾನು ಹೊರ ಬಂದಿದ್ದೇನೆ. ಪರಿಶೀಲಿಸಿ ಸ್ವಾಧೀನಕ್ಕೆ ಪಡೆಯುವಂತೆ ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News