ಗುತ್ತಿಗೆದಾರರಿಂದ ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಪುರಸಭೆ ಮುಖ್ಯಾಧಿಕಾರಿ

Update: 2020-12-23 16:41 GMT

ಮೈಸೂರು,ಡಿ.23: ಲಂಚ ಪಡೆಯುತ್ತಿದ್ದ ವೇಳೆ ಜಿಲ್ಲೆಯ ಟಿ.ನರಸೀಪುರ ತಾಲೂಕು ಬನ್ನೂರು ಪುರಸಭೆ ಮುಖ್ಯಾಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಬನ್ನೂರು ಪುರಸಭೆ ಮುಖ್ಯಾಧಿಕಾರಿ ಪುಷ್ಪಲತಾ 25 ಸಾವಿರ ರೂ. ಲಂಚ ಪಡೆಯುವ ವೇಳೆ ಮೈಸೂರಿನ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.

ಬನ್ನೂರು ಪಟ್ಟಣದ ಕಾಮಗಾರಿ ಸಂಬಂಧ ಬಿಲ್ ಮಾಡಿಕೊಡಲು ಗುತ್ತಿಗೆದಾರರೊಬ್ಬರಿಗೆ 25 ಸಾವಿರ ರೂ. ಲಂಚ ಬೇಡಿಕೆಯಿಟ್ಟಿದ್ದರು. ಈ ಸಂಬಂಧ ಗುತ್ತಿಗೆದಾರರು ಮೈಸೂರಿನ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಬುಧವಾರ 25 ಸಾವಿರ ರೂ. ಹಣ ನೀಡುವ ವೇಳೆ ಎಸಿಬಿ ಅಧಿಕಾರಿಗಳು ಮುಖ್ಯಾಧಿಕಾರಿ ಪುಷ್ಪಲತಾ ಅವರನ್ನು ಬಂಧಿಸಿ ತನಿಖೆಗೊಳಪಡಿಸಿದ್ದಾರೆ.

ಎಸಿಬಿ ಎಸ್ಪಿ ಸುಮನ್ ಪನ್ನೇಕರ್ ಸೂಚನೆ ಮೇರೆಗೆ ಡಿವೈಎಸ್ಪಿ ಪರಶುರಾಮಪ್ಪ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಕರೀಂ ರಾವತರ್ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಸಂದರ್ಭ ಎಸಿಬಿ ಅಧಿಕಾರಿ ಕೆ.ನಿರಂಜನ್, ಸಿಬ್ಬಂದಿಗಳಾದ ಕುಮಾರ್ ಆರಾಧ್ಯ, ಗುರು ಪ್ರಸಾದ್, ಮಂಜುನಾಥ್, ಯೋಗೀಶ್, ನೇತ್ರಾವತಿ, ಪುಷ್ಪಲತಾ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News