ರೈತರ ಹೋರಾಟ ಎರಡನೇ ಸ್ವಾತಂತ್ರ್ಯ ಚಳವಳಿ: ವೈ.ಎಸ್.ವಿ.ದತ್ತ
ಕೊಪ್ಪಳ, ಡಿ.24: ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ದಿಲ್ಲಿಯಲ್ಲಿ ಕಳೆದ ಒಂದುವರೆ ತಿಂಗಳಿಂದ ರೈತರು ನಡೆಸುತ್ತಿರುವ ಹೋರಾಟ ಎರಡನೇ ಸ್ವಾತಂತ್ರ್ಯ ಚಳವಳಿಯಾಗಿದೆ ಎಂದು ಜೆಡಿಎಸ್ ಪಕ್ಷದ ಮುಖಂಡ ಹಾಗೂ ಚಿಂತಕ ವೈ.ಎಸ್.ವಿ.ದತ್ತ ಅಭಿಪ್ರಾಯಪಟ್ಟಿದ್ದಾರೆ.
ಗುರುವಾರ ಗಂಗಾವತಿಯಲ್ಲಿ ಮಾಧ್ಯಮವರೊಂದಿಗೆ ಮಾತನಾಡಿರುವ ಅವರು, ರೈತರು ಎಚ್ಚತ್ತುಕೊಳ್ಳದಿದ್ದರೆ ದೇಶದ ಕೃಷಿ ವ್ಯವಸ್ಥೆಗೆ ಭಾರೀ ಪೆಟ್ಟು ಬೀಳಲಿದ್ದು, ಆಹಾರ ಸ್ವಾವಲಂಬನೆ ಆಹಾರ ಭದ್ರತೆ ಇಲ್ಲವಾಗುತ್ತದೆ. ಐಟಿಬಿಟಿಯವರು ಭೂಮಿ ಖರೀದಿಸಲು ಆಂಧ್ರಪ್ರದೇಶ, ತಮಿಳುನಾಡಿಗೆ ಹೋಗುವುದನ್ನು ತಪ್ಪಿಸಲು ಭೂಸುಧಾರಣಾ ಕಾಯ್ದೆಯ 79 ಎ, ಬಿ, ಸಿ ಮತ್ತು 108 ಕಾಯ್ದೆಗೆ ತಿದ್ದುಪಡಿಯನ್ನು ರಾಜ್ಯ ಸರಕಾರ ಮಾಡಿದ್ದು ಅವೈಜ್ಞಾನಿಕವಾಗಿದೆ ಎಂದರು.
ಸರಕಾರದ ತೀರ್ಮಾನದಿಂದ ಸಣ್ಣ ಹಿಡುವಳಿದಾರರು ಬೀದಿಗೆ ಬರುವುದು ಖಚಿತ. ಇರುವ ಭೂಮಿ ಎಲ್ಲಾ ಶ್ರೀಮಂತರು ಮತ್ತು ದೊಡ್ಡ ದೊಡ್ಡ ಕಾರ್ಪೋರೆಟ್ ಕಂಪನಿಗಳ ಪಾಲಾಗಲಿದ್ದು ರಾಜ್ಯ ಸರಕಾರ ಭೂಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ಖಾಸಗೀಕರಣವನ್ನು ಮಾಡುವ ಕೇಂದ್ರ ಸರಕಾರ ನೀತಿ ವಿರೋಧಿಸಬೇಕು ಎಂದು ಹೇಳಿದರು.
ಗೌಡರ ವಿರೋಧವಿದೆ: ಬಿಜೆಪಿ ಸರಕಾರದ ಕೆಲ ನಿರ್ಧಾರಗಳನ್ನು ಮಾಜಿ ಸಿಎಂ ಕುಮಾರಸ್ವಾಮಿ ಬೆಂಬಲಿಸಿದ್ದು ಖಂಡನೀಯ. ದೇವೇಗೌಡರು ಬಿಜೆಪಿ ಪಕ್ಷವನ್ನು ಬೆಂಬಲಿಸುವ ಅಥವಾ ಪಕ್ಷವನ್ನು ಅದರಲ್ಲಿ ವಿಲೀನ ಮಾಡುವುದಕ್ಕೆ ವಿರೋಧಿಸಿದ್ದಾರೆ. ಗೌಡರ ನಿರ್ಧಾರ ಅವರ ಜೀವನ ಸೆಕ್ಯೂಲರ್ ಎನ್ನುವುದನ್ನು ಹೇಳುತ್ತದೆ. ಗೌಡರ ನಿಲುವು ತಮ್ಮ ನಿಲುವಾಗಿದೆ ಎಂದು ದತ್ತ ಹೇಳಿದರು.