ಡಿ.25ರಂದು ವಾಜಪೇಯಿ ಜನ್ಮದಿನದ ನಿಮಿತ್ತ ಸುಶಾಸನ ದಿನಾಚರಣೆ: ಪ್ರಧಾನಿ ಮೋದಿ ಭಾಷಣ
ಬೆಂಗಳೂರು, ಡಿ.24: ಅತ್ಯುತ್ತಮ ಆಡಳಿತದಿಂದ ಅಚ್ಚಳಿಯದ ಛಾಪು ಮೂಡಿಸಿದ್ದ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ(ಡಿ.25)ವನ್ನು ಗುಡ್ ಗವರ್ನೆನ್ಸ್ ಡೇ(ಸುಶಾಸನ ದಿನ)ಯನ್ನಾಗಿ ಆಚರಿಸಲಾಗುತ್ತಿದ್ದು, ಶುಕ್ರವಾರ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಅಟಲ್ ಜೀ ಅವರ ಗೌರವಾರ್ಥ ಸುಶಾಸನ ದಿನವನ್ನು ಆಯೋಜಿಸಲಾಗಿದ್ದು, ಆಡಳಿತದಲ್ಲಿ ವಾಜಪೇಯಿ ಅವರ ಕನಸುಗಳನ್ನು ಸಾಕಾರ ಮಾಡಲು ಈ ಮೂಲಕ ಹೆಜ್ಜೆ ಇರಿಸಲಾಗಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಸುರೇಶ್ ಕುಮಾರ್ ಸೇರಿದಂತೆ ಇತರ ಪ್ರಮುಖರು ಇದರಲ್ಲಿ ಭಾಗಿಯಾಗುತ್ತಾರೆ. ಇದೇ ವೇಳೆ ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಗೆ ಸಂಬಂಧಿಸಿದ ಪ್ರಾತ್ಯಾಕ್ಷಿಕೆಯನ್ನು ಪ್ರದರ್ಶಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಬೆಳಗ್ಗೆ 11 ಗಂಟೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರ್ಯಕ್ರಮವನ್ನು ಉದ್ದೇಶಿಸಿ ವರ್ಚುಯಲ್ ಮೂಲಕ ಮಾತನಾಡಲಿದ್ದಾರೆ. ಬಳಿಕ ಚರ್ಚಾಗೋಷ್ಠಿಗಳು ನಡೆಯಲಿವೆ. 11.30ರಿಂದ ಉನ್ನತ ಶಿಕ್ಷಣ-ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ- ಜೈವಿಕ ತಂತ್ರಜ್ಞಾನ, ವಿಜ್ಞಾನ-ತಂತ್ರಜ್ಞಾನ, ನವೋದ್ಯಮಗಳು, ಬಿಯಾಂಡ್ ಬೆಂಗಳೂರು ವಿಷಯದ ಬಗ್ಗೆ ಚರ್ಚೆ, ಉನ್ನತ ಶಿಕ್ಷಣದಲ್ಲಿ ಆಡಳಿತ ಮತ್ತು ನಾಯಕತ್ವದ ಗುಣ, ಕೈಗಾರಿಕೆಗೆ ಪೂರಕವಾದ ಕುಶಲತೆಯುಳ್ಳ ಶಿಕ್ಷಣ ಸೇರಿದಂತೆ ಹಲವಾರು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನು ಮುಖ್ಯವಾಗಿ ಉನ್ನತ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಕಲಿಕಾ ನಿರ್ವಹಣಾ ವ್ಯವಸ್ಥೆ (ಎಲ್ಎಂಎಸ್), ಏಕೀಕೃತ ವಿಶ್ವವಿದ್ಯಾಲಯ ನಿರ್ವಹಣಾ ವ್ಯವಸ್ಥೆ, ಆನ್ಲೈನ್ ಅಪ್ಲಿಯೇಷನ್, ಡಿಪ್ಲೋಮೊ ಪಠ್ಯ ಪರಿಷ್ಕರಣೆ, ರಾಷ್ಟ್ರೀಯ ಶಿಕ್ಷಣ ನೀತಿ ಮುಂತಾದ ವಿಷಯಗಳ ಬಗ್ಗೆ ಪ್ರಾತ್ಯಾಕ್ಷಿಕೆ ಇರಲಿದೆ. ಇಡೀ ಕಾರ್ಯಕ್ರಮವು ಆನ್ಲೈನ್ ಮೂಲಕ ನೇರ ಪ್ರಸಾರವಾಗಲಿದೆ ಎಂದು ಅಶ್ವತ್ಥ ನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.