ಸರಕಾರಿ ಗೌರವದೊಂದಿಗೆ ವಿಧಾನಪರಿಷತ್ ಉಪಸಭಾಪತಿ ಧರ್ಮೇಗೌಡ ಅಂತ್ಯ ಸಂಸ್ಕಾರ
ಚಿಕ್ಕಮಗಳೂರು, ಡಿ.29: ಸೋಮವಾರ ರಾತ್ರಿ ಆತ್ಮಹತ್ಯೆಗೆ ಶರಣಾದ ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಸಕಲ ಸರಕಾರಿ ಗೌರವಗಳೊಂದಿಗೆ ಸಖರಾಯಪಟ್ಟಣದ ಅವರ ತೋಟದಲ್ಲಿ ಮಂಗಳವಾರ ಸಂಜೆ 6.30ರ ಸಮಯದಲ್ಲಿ ಜರುಗಿತು.
ಎಸ್.ಎಲ್.ಧರ್ಮೇಗೌಡ ಅವರ ಪಾರ್ಥಿವ ಶರೀರವಿದ್ದ ಚಿತೆಗೆ ಅವರ ತೋಟದಲ್ಲಿ ಪುತ್ರ ಸೋನಾಲ್ ಅಗ್ನಿಸ್ಪರ್ಶ ಮಾಡಿದರು. ಒಕ್ಕಲಿಗ ಸಮುದಾಯದ ವಿಧಿವಿಧಾನದಂತೆ ಶವಸಂಸ್ಕಾರವನ್ನು ಕುಟುಂಬಸ್ಥರು, ರಾಜಕೀಯ ಪಕ್ಷಗಳ ಹಿರಿಯ ನಾಯಕರ ಸಮ್ಮುಖದಲ್ಲಿ ನೆರವೇರಿಸಲಾಯಿತು.
ಧರ್ಮೇಗೌಡ ಅವರು ಸೋಮವಾರ ರಾತ್ರಿ ಕಡೂರು ತಾಲೂಕಿನ ಗುಣಸಾಗರದ ಗ್ರಾಮದ ವ್ಯಾಪ್ತಿಯ ರೈಲ್ವೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವಿಚಾರ ತಡರಾತ್ರಿ 2.30ರ ಸಮಯದಲ್ಲಿ ವೇಳೆಗೆ ತಿಳಿಯುತ್ತಿದ್ದಂತೆ ಪೋಲೀಸ್ ವರಿಷ್ಠಾಧಿಕಾರಿ ಎಚ್.ಎಂ.ಅಕ್ಷಯ್, ಜಿಲ್ಲಾಧಿಕಾರಿ ಬಗಾದಿ ಗೌತಮ್, ಸಿ.ಟಿ.ರವಿ ಸೇರಿದಂತೆ ಹಲವರು ಸ್ಥಳಕ್ಕೆ ದೌಡಾಯಿಸಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು.
ಧರ್ಮೇಗೌಡರ ದೇಹ ರೈಲಿನ ಸಿಲುಕಿ ಛಿದ್ರ ಛಿದ್ರವಾಗಿತ್ತು. ಅದನ್ನೆಲ್ಲಾ ಒಗ್ಗೂಡಿಸಿ ಮರಣೋತ್ತರ ಪರೀಕ್ಷೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಯಿತು. 4 ಮಂದಿ ತಜ್ಞ ವೈದ್ಯರ ಸಮಕ್ಷಮದಲ್ಲಿ ಮರಣೋತ್ತರ ಪರೀಕ್ಷೆ ಜರುಗಿ ಅವರ ಪಾರ್ಥೀವ ಶರೀರವನ್ನು ಸಖರಾಯಪಟ್ಟಣದ ಸರಕಾರ ಜೂನಿಯರ್ ಕಾಲೇಜು ಆವರಣಕ್ಕೆ ಮಂಗಳವಾರ ಸಂಜೆ ತರಲಾಗಿತ್ತು. ಮೃತರ ಗೌರವಾರ್ಥ ಅವರ ಪಾರ್ಥೀವ ಶರೀರಕ್ಕೆ ತ್ರಿವರ್ಣ ಧ್ವಜವನ್ನು ಹೊದಿಸಿ ಅಂತಿಮ ದರ್ಶನಕ್ಕಾಗಿ ಜಿಲ್ಲಾಡಳಿತ ಅಗತ್ಯ ಕ್ರಮಕೈಗೊಂಡು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿತ್ತು. ಸುತ್ತಮುತ್ತಲ ಗ್ರಾಮದ ಸಾವಿರಾರು ಅಭಿಮಾನಿಗಳು, ಜೆಡಿಎಸ್ ಪಕ್ಷ ಕಾರ್ಯಕರ್ತರು ಸ್ಥಳೀಯ ಮುಖಂಡರು ತಂಡೋಪತಂಡವಾಗಿ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಅಂತಿಮ ದರ್ಶನ ಪಡೆದು ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಸಮರ್ಪಿಸಿದರು.
ದರ್ಶನಕ್ಕೆ ಆಗಮಿಸಿದ ಗಣ್ಯರು: ಅಕಾಲಿಕ ಸಾವಿಗೀಡಾದ ಉಪಸಭಾಪತಿ ಎಸ್.ಎಲ್.ಧರ್ಮೇಗೌಡರ ಅಂತಿಮ ದರ್ಶನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಮಾಜಿ ಸಚಿವ ಎಚ್.ಡಿ.ರೇವಣ್ಣ, ಕಾನೂನು ಸಚಿವ ಮಾಧುಸ್ವಾಮಿ, ತಿಪಟೂರು ಶಾಸಕ ಶಿವಲಿಂಗೇಗೌಡ, ಸಂಸದೆ ಶೋಭಾ ಕರಂದ್ಲಾಜೆ, ವೈಎಸ್ವಿ ದತ್ತ, ಶಾಸಕರಾದ ಬೆಳ್ಳಿಪ್ರಕಾಶ್, ಟಿ.ಡಿ.ರಾಜೇಗೌಡ, ಎಂ.ಪಿ.ಕುಮಾರಸ್ವಾಮಿ, ಡಿ.ಎಸ್.ಸುರೇಶ್, ಮಾಜಿ ಶಾಸಕ ಶ್ರೀನಿವಾಸ್, ಡಿ.ಎನ್.ಜೀವರಾಜ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಜೆಡಿಎಸ್ನ ಮುಖಂಡ ಎಚ್.ಎಚ್.ದೇವರಾಜ್, ಆದಿಚುಂಚನಗಿರಿ ಹಾಸನ ಶಾಖಾಮಠದ ಗುಣನಾಥ ಸ್ವಾಮೀಜಿ, ಹುಲಿಕೆರೆ ಮಠದ ವಿರೂಪಾಕ್ಷಲಿಂಗ ಸ್ವಾಮೀಜಿ ಸೇರಿದಂತೆ ಹಲವು ಸ್ವಾಮೀಜಿಗಳು ಆಗಮಿಸಿದ್ದರು. ಮಾಜಿ ಪ್ರಧಾನಿ ದೇವೇಗೌಡ ಸ್ಥಳದಲ್ಲಿ ಕಣ್ಣೀರಿಡುತ್ತಲೇ ಧರ್ಮೇಗೌಡ ಅವರ ಅಂತಿಮ ದರ್ಶನ ಪಡೆದರು.
ಪಾರ್ಥೀವ ಶರೀರವನ್ನು ಸಖರಾಯಪಟ್ಟಣದ ಜೂನಿಯರ್ ಕಾಲೇಜಿನ ಆವರಣದಲ್ಲಿ ಸಿದ್ದಗೊಳಿಸಿದ್ದ ವೇದಿಕೆಗೆ ತರುತ್ತಿದ್ದಂತೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಅವರು ಧರ್ಮೇಗೌಡರ ಪುತ್ರ ಸೋನಾಲ್, ಪುತ್ರಿ ಸಲೋನಿಯನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯ ಸುತ್ತಮುತ್ತಲು ಇದ್ದ ಜನರ ಕಣ್ಣಾಲಿಗಳನ್ನು ತೇವಗೊಳಿಸಿತ್ತು.
ಮೃತರ ಗೌರವಾರ್ಥ ಸಖರಾಯಪಟ್ಟಣ ಬಂದ್: ಅಕಾಲಿಕ ಮರಣಕ್ಕೀಡಾದ ಎಸ್.ಎಲ್.ಧರ್ಮೇಗೌಡರ ಗೌರವಾರ್ಥ ಸಖರಾಯಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಶ್ರದ್ಧಾಂಜಲಿ ಸೂಚಿಸಿದ್ದರು. ಅದರೊಂದಿಗೆ ಸಖರಾಯಪಟ್ಟಣ ಗ್ರಾಮದಲ್ಲಿ ಸ್ವಯಂಪ್ರೇರಿತವಾಗಿ ಬಂದ್ ಆಚರಿಸಲಾಯಿತು.