ಕಾಂಗ್ರೆಸ್ ಕಾರ್ಯಕರ್ತರಿಗೆ 2021 ಹೋರಾಟದ ವರ್ಷ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಬೆಂಗಳೂರು, ಡಿ. 31: ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ 2021ರ ನೂತನ ವರ್ಷ ಹೋರಾಟದ ವರ್ಷ. ಹೀಗಾಗಿ ರಾಜ್ಯದ ಪ್ರತಿ ಕ್ಷೇತ್ರದಲ್ಲೂ ಸ್ಥಳೀಯವಾಗಿರುವ ಸಮಸ್ಯೆಗಳನ್ನು ಗುರುತಿಸಿ ಪಟ್ಟಿ ಮಾಡಿ ಹೋರಾಟ ನಡೆಸಬೇಕು ಮತ್ತು ಪಕ್ಷ ಸಂಘಟನೆಗೆ ಆದ್ಯತೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದಿಲ್ಲಿ ಕರೆ ನೀಡಿದ್ದಾರೆ.
ಗುರುವಾರ ಇಲ್ಲಿನ ಸದಾಶಿವನಗರದಲ್ಲಿನ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ. ಇದು ಕೆಪಿಸಿಸಿ ಅಧ್ಯಕ್ಷನಾಗಿ ನನಗೆ ಸಮಾಧಾನ ತಂದಿದೆ ಎಂದು ಇದೇ ವೇಳೆ ತಿಳಿಸಿದರು.
ಗ್ರಾಮ ಪಂಚಾಯತ್ ಚುನಾವಣೆ ಪಕ್ಷರಹಿತವಾದರೂ, ಕೆಲವು ಕಡೆ ಪಕ್ಷದ ಕಾರ್ಯಕರ್ತರೆಂದು ಹೇಳುತ್ತಿರುವುದು ಕಂಡುಬರುತ್ತಿದೆ. ನಾನು ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ವರದಿ ಪಡೆದುಕೊಳ್ಳುತ್ತಿದ್ದೇನೆ. ಎಲ್ಲ ಕಡೆ ಉತ್ತಮ ಫಲಿತಾಂಶ ಬಂದಿದೆ. ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಚುನಾಯಿತರಾಗಿದ್ದಾರೆ. ಬಿಜೆಪಿಯವರು ತಾವು ಹೆಚ್ಚು ಸ್ಥಾನ ಗೆದ್ದಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಯಾವ ಆಧಾರದ ಮೇಲೆ ಚುನಾಯಿತ ಸದಸ್ಯರನ್ನು ಪಕ್ಷದ ಕಾರ್ಯಕರ್ತರೆಂದು ಹೇಳಲು ಸಾಧ್ಯ ಎಂದು ಶಿವಕುಮಾರ್ ಪ್ರಶ್ನಿಸಿದರು.
ಗ್ರಾಮ ಪಂಚಾಯತ್ ಗಳಲ್ಲಿ ಯಾರು ಅಧ್ಯಕ್ಷರಾಗುತ್ತಾರೋ ಎಂಬುದನ್ನು ಆಧರಿಸಿ ಪಕ್ಷದ ಬಲಾಬಲ ನಿರ್ಧರಿಸಬಹುದು. ಪ್ರಸ್ತುತ ಸಂದರ್ಭದಲ್ಲಿ ಬಿಜೆಪಿ ಮೀಸಲಾತಿಯನ್ನು ತಿರುಚುವ ಮೂಲಕ ಗ್ರಾ.ಪಂ.ಗಳಲ್ಲೂ ಅಧಿಕಾರ ಹಿಡಿಯುವ ಪ್ರಯತ್ನ ನಡೆಸುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಇದೇ ವೇಳೆ ದೂರಿದರು.
ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಗೆದ್ದಿದ್ದೇವೆ. ಗ್ರಾ.ಪಂ.ಗಳಲ್ಲೂ ಹೆಚ್ಚಿನ ಸ್ಥಾನಗಳನ್ನು ಗೆದ್ದಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಪಕ್ಷ ಅಧಿಕಾರದಲ್ಲಿದ್ದಾಗ ಉಪಚುನಾವಣೆಯಲ್ಲಿ ಗೆಲ್ಲುವುದು ಸಾಮಾನ್ಯ. ಈ ಮೊದಲು ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದ ವೇಳೆ ನಂಜನಗೂಡು, ಬಳ್ಳಾರಿ ಉಪಚುನಾವಣೆ ಸೇರಿದಂತೆ ಹಲವು ಕಡೆ ನಾವು ಗೆದ್ದಿದ್ದೆವು. ನಂತರ ಫಲಿತಾಂಶ ಏನಾಯಿತು ಎಂದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.
ಕನಕಪುರ ಕ್ಷೇತ್ರದಲ್ಲಿ ಬೇರೆ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದಾರೆಂದು ದೊಡ್ಡದಾಗಿ ವರದಿಯಾಗುತ್ತಿದೆ. ಇಡೀ ಕ್ಷೇತ್ರದಲ್ಲಿ ಅವಿರೋಧವಾಗಿ ಸದಸ್ಯರನ್ನು ಆಯ್ಕೆ ಮಾಡುವ ಸಾಮರ್ಥ್ಯ ನನಗಿದೆ. ಆದರೆ, ವಿರೋಧ ಪಕ್ಷವೂ ಇರಬೇಕೆಂಬ ಕಾರಣಕ್ಕಾಗಿ ನಾವೇ ಸುಮ್ಮನಾಗಿದ್ದೆವು. ಒಂದಿಬ್ಬರು ಗೆದ್ದಾಕ್ಷಣ ಅದನ್ನು ಹಿನ್ನಡೆ ಎಂದು ಹೇಳಲಾಗುತ್ತಿದೆ. ಬೇಕಿದ್ದರೆ ಯಾರಾದರೂ ಬಂದು ಕ್ಷೇತ್ರದಲ್ಲಿ ಸಮೀಕ್ಷೆ ಮಾಡಲಿ. ನಾವೇ ಹೆಚ್ಚು ಸ್ಥಾನ ಗೆದ್ದಿದ್ದೇವೆ ಎಂದು ಶಿವಕುಮಾರ್ ತಿಳಿಸಿದರು.
ಸರಕಾರ ವೈಫಲ್ಯ: ಬಿಜೆಪಿ ಸರಕಾರ ಎಲ್ಲ ರಂಗಗಳಲ್ಲೂ ವೈಫಲ್ಯ ಅನುಭವಿಸಿದೆ. ಕೊರೋನ ಸಂದರ್ಭದಲ್ಲಿ ಯಾರಿಗೂ ಸಹಾಯ ಮಾಡಿಲ್ಲ. ಕೈಗಾರಿಕೋದ್ಯಮಿಗಳು, ರೈತರು, ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಸಹಾಯ ಮಾಡಿದ್ದೇವೆಂದು ಹೇಳುತ್ತಿದ್ದಾರೆ. ಆದರೆ, ಯಾರೂ ಸರಕಾರದಿಂದ ನಮಗೆ ಸಹಾಯ ಆಗಿದೆ ಎಂದು ಹೇಳಿಲ್ಲ ಎಂದು ಟೀಕಿಸಿದರು.
2020ನೇ ವರ್ಷವೂ ದೇಶಕ್ಕಷ್ಟೇ ಮಾತ್ರವಲ್ಲ, ಜಗತ್ತಿಗೆ ನರಕ ತೋರಿಸಿದೆ. 2021ರಲ್ಲಿ ಒಳ್ಳೆಯ ದಿನಗಳು ಬರಲಿ. ಕೊರೋನದಿಂದಾಗಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗಿಲ್ಲ. ಆನ್ಲೈನ್ ಶಿಕ್ಷಣ ಸಮಾಧಾನಕರವಾಗಿಲ್ಲ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಭಾರೀ ತೊಂದರೆಯಾಗಿದೆ. ಮುಂದಿನ ದಿನಗಳಲ್ಲಾದರೂ ಭವಿಷ್ಯದ ಪ್ರಜೆಗಳಿಗೆ ಉತ್ತಮ ಶಿಕ್ಷಣ ಸಿಗಲಿ ಎಂದು ಅವರು ಹಾರೈಸಿದರು.