ರಾಷ್ಟ್ರವಿರೋಧಿ ಚಟುವಟಿಕೆ ನಡೆಸುವ ಸಂಘಟನೆಗಳ ನಿಷೇಧಕ್ಕೆ ಚಿಂತನೆ: ಸಚಿವ ಈಶ್ವರಪ್ಪ
ಶಿವಮೊಗ್ಗ, ಡಿ.31: ಎಸ್ಡಿಪಿಐ ಸೇರಿದಂತೆ ಕೆಲವು ಮುಸ್ಲಿಂ ಸಂಘಟನೆಗಳು ಪಾಕಿಸ್ತಾನಕ್ಕೆ ಝಿಂದಾಬಾದ್ ಎಂದು ಕೂಗಿ ರಾಷ್ಟ್ರವಿರೋಧಿ ಚಟುವಟಿಕೆ ನಡೆಸುತ್ತಿವೆ. ಇವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಮತ್ತು ಇಂತಹ ಸಂಘಟನೆಗಳ ನಿಷೇಧಕ್ಕೂ ಕೂಡ ಚಿಂತನೆ ನಡೆಸಲಾಗಿದೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋ ಮಾಂಸ ತಿನ್ನುವವರನ್ನು, ಪಾಕಿಸ್ತಾನಕ್ಕೆ ಝಿಂದಾಬಾದ್ ಹೇಳುವವರನ್ನು, ಹನುಮ ಜಯಂತಿ ದಿನ ಕೋಳಿ ಮಾಂಸ ತಿನ್ನುತ್ತೇನೆ ಎಂದು ಉದ್ದಟತನದಿಂದ ಮಾತನಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಗ್ರಾ.ಪಂ. ಚುನಾವಣೆಯಲ್ಲಿ ಜನರು ತಕ್ಕಪಾಠ ಕಲಿಸಿದ್ದಾರೆ ಎಂದು.
ಭಾರತೀಯ ಸಂಸ್ಕೃತಿ ನಮ್ಮದು, ಗೋವುಗಳಿಗೆ ಪೂಜೆ ಮಾಡುತ್ತೇವೆ. ಹನುಮ ಜಯಂತಿ ಮಾಡುತ್ತೇವೆ. ಇಂತಹ ಸಂಸ್ಕೃತಿಗೆ ವಿರುದ್ಧವಾಗಿ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರು ಮಾತನಾಡುತ್ತಿದ್ದಾರೆ. ಅವರು ಏನು ಬೇಕಾದರೂ ತಿನ್ನಲಿ. ಆದರೆ ಸಾರ್ವಜನಿಕವಾಗಿ ಹನುಮ ಜಯಂತಿ ದಿನ ನಾನು ನಾಟಿ ಕೋಳಿ ತಿನ್ನುತ್ತೇನೆ, ನನ್ನನ್ಯಾರು ಕೇಳುತ್ತಾರೆ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದರು.
ಗ್ರಾ.ಪಂ. ಚುನಾವಣೆಯ ಫಲಿತಾಂಶ ಬಿಜೆಪಿಗೆ ಆತ್ಮಸ್ಥೈರ್ಯ ತಂದಿದೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ನೇತೃತ್ವದಲ್ಲಿ ಈ ಬಾರಿ ವ್ಯವಸ್ಥಿತವಾಗಿ ಚುನಾವಣೆ ನಡೆಸಿ ಶೇ.60ಕ್ಕಿಂತಲೂ ಹೆಚ್ಚು ಗ್ರಾ.ಪಂ. ಸದಸ್ಯರನ್ನು ನಾವು ಹೊಂದಿದ್ದೇವೆ. ಮುಂದಿನ ವಿಧಾನಸಭಾ ಚುನಾವಣೆಗೆ ಇದು ಗಟ್ಟಿ ಬೇರು ಆಗುತ್ತದೆ ಎಂದರು.
ಶಿವಮೊಗ್ಗದಲ್ಲಿ ರೂಪಾಂತರಿತ ಕೊರೋನ 4 ಜನರಿಗೆ ಬಂದಿರುವುದು ಖಚಿತವಾಗಿದೆ. ಆದರೆ ಅದು ಈಗ ನಿಯಂತ್ರಣದಲ್ಲಿದೆ. ಬ್ರಿಟನ್ನಿಂದ 23 ಜನ ಬಂದಿದ್ದರು. ಅವರೆಲ್ಲರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಜನರು ಗಾಬರಿಯಾಗುವ ಅವಶ್ಯಕತೆ ಇಲ್ಲ. ರೂಪಾಂತರಿತ ಕೊರೋನಾದಿಂದ ಸಾವು ಹೆಚ್ಚಾಗಿ ಕಾಡುವುದಿಲ್ಲ. ಆದರೆ ಎಚ್ಚರಿಕೆ ಅಗತ್ಯ ಎಂದರು.
ಹಿಂದುಗಳಿಗೆ ಯುಗಾದಿ ಹೊಸ ವರ್ಷ. ಆದರೆ ಹೊಸ ವರ್ಷವನ್ನು ಯುವ ಜನಾಂಗ ಅತ್ಯಂತ ಎಚ್ಚರಿಕೆಯಿಂದ ಆಚರಿಸಲಿ. ಜವಾಬ್ದಾರಿ ಅರಿಯದೇ ಹುಚ್ಚುಚ್ಚಾಗಿ ಮಾಡಿದರೆ ಪೊಲೀಸ್ ಠಾಣೆ ಸೇರುವುದು ಖಚಿತ ಎಂದರು.
ಜನವರಿ 1 ರಿಂದ 10 ಮತ್ತು 12 ನೇ ತರಗತಿಗಳು ಆರಂಭವಾಗುವುದು ಖಚಿತವಾಗಿದೆ. ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಶಿಕ್ಷಣ ಸಚಿವರು ಒಳ್ಳೆಯ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ ಮತ್ತು ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣ ನೀಡುವ ಕಾರ್ಯಕ್ರಮಕ್ಕೂ ಕೂಡ ಯೋಜನೆ ರೂಪಿಸಲಾಗಿದೆ ಎಂದರು.
ಗ್ರಾ.ಪಂ. ಚುನಾವಣೆಯಲ್ಲಿ ಅನೇಕ ಗ್ರಾಮ ಪಂಚಾಯತ್ ಗಳಲ್ಲಿ ಸಮಬಲವಿದೆ. ಬಿಜೆಪಿ ಇಂತಹ ಸಮಬಲದ ಪಂಚಾಯತ್ ಗಳಲ್ಲೂ ಅವರ ಮನವೊಲಿಸಿ ಬಿಜೆಪಿ ಬೆಂಬಲಿತ ಗ್ರಾ.ಪಂ.ಗಳನ್ನಾಗಿ ಮಾಡಲಾಗುವುದು ಎಂದರು.
ಶಿವಮೊಗ್ಗದಲ್ಲಿ ಜ.2 ಮತ್ತು 3ರಂದು ರಾಜ್ಯ ಬಿಜೆಪಿ ವಿಶೇಷ ಸಭೆ ನಡೆಯಲಿದೆ. ಇದು ರಾಜಕೀಯ ಮಹತ್ವ ಪಡೆದುಕೊಳ್ಳಲಿದೆ ಎಂದರು.