ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ವಿರುದ್ಧ ಎಫ್ಐಆರ್ ದಾಖಲು
Update: 2021-01-03 12:59 GMT
ಬೆಂಗಳೂರು, ಜ.3: ಹಿಂದೂ ದೇವತೆಗಳ ಕುರಿತು ಅವಹೇಳನಕಾರಿ ಸಂದೇಶ ಹಂಚಿಕೆ ಆರೋಪ ಸಂಬಂಧ ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ವಿರುದ್ಧ ಇಲ್ಲಿನ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.
ಇಲ್ಲಿನ ಸಿಸಿಎಚ್ 82 ನ್ಯಾಯಾಲಯದ ಆದೇಶದಂತೆ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153ಎ, 294ಎ, 295ರಡಿ ಪ್ರಕರಣ ದಾಖಲಾಗಿದೆ.
ಕಳೆದ ಜುಲೈ ತಿಂಗಳಲ್ಲಿ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿ ಸಂದೇಶವೊಂದನ್ನು ವಾಟ್ಸಾಪ್ ಗ್ರೂಪ್ನಲ್ಲಿ ಮುರುಗೇಶ್ ನಿರಾಣಿ ಹರಿಬಿಟ್ಟಿರುವ ಆರೋಪ ಕೇಳಿಬಂದಿತ್ತು. ಆನಂತರ ರಾಜ್ ಕುಮಾರ್ ಕಟುಬ ಎಂಬುವವರು ಶಾಸಕರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ನ್ಯಾಯಾಲಯದ ಮೊರೆಹೋಗಿದ್ದರು.
ಪ್ರಕರಣ ಆಲಿಸಿದ ಸಿಸಿಎಚ್ 82 ನ್ಯಾಯಾಲಯವು ಡಿಸಂಬರ್ 26 ರಂದು ಎಫ್ಐಆರ್ ದಾಖಲಿಸುವಂತೆ ಕೊಡಿಗೇಹಳ್ಳಿ ಪೊಲೀಸರಿಗೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.