ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 140 ಶಾಸಕರ ಗುರಿ: ಸಿಎಂ ಯಡಿಯೂರಪ್ಪ
ಶಿವಮೊಗ್ಗ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 140ರಿಂದ 150 ಶಾಸಕರನ್ನು ಗೆಲ್ಲಿಸುವ ಗುರಿ ಇಟ್ಟುಕೊಳ್ಳಲಾಗುವುದು. ಇದಕ್ಕಾಗಿ ಪಕ್ಷ ಸಂಘಟಿಸಲು ಶೀಘ್ರವೇ ರಾಜ್ಯದಾದ್ಯಂತ ಪ್ರವಾಸ ಮಾಡಲಿದ್ದೇನೆ ಎಂದು ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.
ಶಿವಮೊಗ್ಗದ ಪೆಸಿಟ್ ಕಾಲೇಜಿನ ಆವರಣದ ಪ್ರೇರಣಾ ಸಭಾಂಗಣದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿಯ ವಿಶೇಷ ಸಭೆಯನ್ನು ರವಿವಾರ ಉದ್ಘಾಟಿಸಿ ಮಾತನಾಡಿದ ಅವರು, ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವಿಗೆ ಗರಿಷ್ಠ ಶ್ರಮ ಅಗತ್ಯ ಎಂದು ಅಭಿಪ್ರಾಯಪಟ್ಟರು.
ಕೃಷಿಕರಿಗೆ ತೊಂದರೆಯಾಗುವ ಕಸ್ತೂರಿರಂಗನ್ ವರದಿ ಜಾರಿ ಬರಲು ಬಿಡುವುದಿಲ್ಲ. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ ಅವರು, ಕಾನೂನು ಪ್ರಕಾರವೇ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಯ್ಕೆ ನಡೆಯಲಿದೆ ಎಂದು ಹೇಳಿದರು.
ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರನ್ನು ವಿಶ್ವದ ಅಗ್ರಗಣ್ಯ ನಾಯಕ ಎಂದು ಜಗತ್ತು ಒಪ್ಪಿಕೊಂಡಿದೆ. ದೇಶವನ್ನು ಮಾದರಿ ರಾಷ್ಟ್ರವನ್ನಾಗಿ ಮಾಡಲು ಶ್ರಮ ವಹಿಸಿರುವ ಅಗ್ರಗಣ್ಯ ನಾಯಕ ಶ್ರೀ ಮೋದಿ ಅವರು ಮತ್ತೊಂದು ಬಾರಿ ಪ್ರಧಾನಿಯಾಗಿ ದೇಶವನ್ನು ಅಗ್ರಗಣ್ಯ ರಾಷ್ಟವನ್ನಾಗಿ ಮಾಡಲಿ ಎಂದು ಆಶಿಸಿದರು.
370ನೇ ವಿಧಿ ರದ್ದು, ಕೃಷಿ ಸುಧಾರಣಾ ಮಸೂದೆ ಜಾರಿ, ನಾಗರಿಕ ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನದಂಥ ಮಹತ್ವದ ಯೋಜನೆಗಳನ್ನು ಕೇಂದ್ರ ಸರಕಾರ ಜಾರಿಗೊಳಿಸಿದೆ ಎಂದು ವಿವರಿಸಿದರು.
ಇಬ್ಬರೇ ಶಾಸಕರಿದ್ದ ನಮ್ಮ ಪಕ್ಷ ಇವತ್ತು ಅಧಿಕಾರದಲ್ಲಿರಲು ಸಾವಿರಾರು ಜನ ಕಾರ್ಯಕರ್ತರ ತ್ಯಾಗ, ಬಲಿದಾನವೇ ಕಾರಣ. ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆ ಯಶಸ್ಸಿಗೆ ಸಾಮೂಹಿಕ ನೇತೃತ್ವ ಹಾಗೂ ಪರಿಶ್ರಮವೇ ಕಾರಣವಾಗಿದೆ. ತಾಲ್ಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಯಶಸ್ಸಿನ ಮೇಲೆ ಮುಂದಿನ ವಿಧಾನಸಭಾ ಚುನಾವಣೆಯ ಫಲಿತಾಂಶ ನಿಂತಿದೆ. ಆದ್ದರಿಂದ ಅಲ್ಲಿ ನಾವು ಹೆಚ್ಚಿನ ಶ್ರಮ ವಹಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕರ್ತರು ಮತ್ತು ಮುಖಂಡರು ಪಕ್ಷದ ಸಂಘಟನೆಗೆ ಕೆಲವು ವರ್ಷಗಳನ್ನಾದರೂ ನೀಡಬೇಕು. ಎರಡರಿಂದ ಮೂರು ಡಿಗ್ರಿ ಪಡೆದ ಆರೆಸ್ಸೆಸ್ ಪೂರ್ಣಾವಧಿ ಕಾರ್ಯಕರ್ತರ ಪ್ರೇರಣಾದಾಯಕ ಕಾರ್ಯವನ್ನು ನಾವು ಅನುಸರಿಸಬೇಕು ಎಂದು ಅವರು ಆಶಿಸಿದರು.
ಪಕ್ಷದ ಸಂಘಟನೆಯ ದೃಷ್ಟಿಯಿಂದ ಶಿವಮೊಗ್ಗ- ಬೆಂಗಳೂರಿಗೆ ನಡೆಸಿದ ಪಾದಯಾತ್ರೆಗಳು ಹಾಗೂ ಬಗರ್ ಹುಕುಂ ಹೋರಾಟ ಮುಂತಾದ ಜನಪರ ಕಾರ್ಯಕ್ರಮಗಳನ್ನು ಜನಸಂಘದ ಕಾಲದಿಂದಲೇ ನಿರಂತರವಾಗಿ ನಡೆಸಿಕೊಂಡು ಬಂದಿರುವುದನ್ನು ಅವರು ನೆನಪಿಸಿದರು.
ಅಂಡಮಾನ್ ಸೆಲ್ಯುಲರ್ ಜೈಲಿನಲ್ಲಿರುವ ವೀರ ದಾಮೋದರ್ ಸಾವರ್ಕರ್ ಅವರ ಜೀವನದರ್ಶನ, ಅವರ ತ್ಯಾಗ, ಅವರು ಅನುಭವಿಸಿದ ಅತ್ಯಂತ ಕಷ್ಟದ ಕರಿನೀರಿನ ಶಿಕ್ಷೆ ನಮ್ಮೆಲ್ಲರಿಗೂ ರಾಷ್ಟ್ರ ನಿರ್ಮಾಣದ ಈ ಪುಣ್ಯ ಕಾರ್ಯಕ್ಕೆ ನಿರಂತ ಪ್ರೇರಣೆ. ನಾವೆಲ್ಲರೂ ಒಂದು ಬಾರಿಯಾದರೂ ಈ ದೃಷ್ಟಿಯಿಂದ ಅಂಡಮಾನ್ ಸೆಲ್ಯುಲರ್ ಜೈಲಿಗೆ ಭೇಟಿ ನೀಡಬೇಕು ಎಂದು ಹೇಳಿದರು.
ಮುಂದಿನ ನಾಲ್ಕು ತಿಂಗಳುಗಳ ಬಳಿಕ ತಾಲ್ಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ಪಕ್ಷದ ಚಿಹ್ನೆಯಡಿ ನಡೆಯಲಿದ್ದು, ಬಿಜೆಪಿ ಶೇ. 80ರಷ್ಟು ಸ್ಥಾನಗಳನ್ನು ಗೆಲ್ಲಬೇಕಿದೆ. ಜನಸೇವಕ್ ಸಮಾವೇಶಗಳನ್ನು ಜನವರಿ 11, 12, 13ರಂದು ನಡೆಸಲಾಗುವುದು. ಮೈಸೂರಿನಲ್ಲಿ ಮುಖ್ಯಮಂತ್ರಿಗಳಿಂದ ಸಮಾವೇಶದ ಉದ್ಘಾಟನೆ ನೆರವೇರಿಸಲಾಗುವುದು ಎಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕುಮಾರ್ ಕಟೀಲ್ ತಿಳಿಸಿದರು.
ರಾಷ್ಟಿಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಉಸ್ತುವಾರಿ ಅರುಣ್ ಸಿಂಗ್, ರಾಷ್ಟಿಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕೇಂದ್ರ ಗಣಿ ಮತ್ತು ಸಂಸದೀಯ ವ್ಯವಹಾರ ಸಚಿವ ಶ್ರೀ ಪ್ರಲ್ಹಾದ ಜೋಷಿ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ಕುಮಾರ್,ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಹಾಗೂ ಲಕ್ಷ್ಮಣ ಸವದಿ, ರಾಜ್ಯ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಕಂದಾಯ ಸಚಿವ ಆರ್.ಅಶೋಕ್, ಶಾಸಕ ಅರವಿಂದ ಲಿಂಬಾವಳಿ, ಪಕ್ಷದ ಹಿರಿಯ ಮುಖಂಡ ಡಿ.ಎಚ್.ಶಂಕರಮೂರ್ತಿ ಭಾಗವಹಿಸಿದ್ದರು.