ಕೋವಿಡ್ ಕೊನೆಗೊಂಡರೆ ಮತ್ತೊಮ್ಮೆ ಚಿತ್ರಸಂತೆ ನಡೆಸಿ: ಸುಧಾಮೂರ್ತಿ

Update: 2021-01-03 16:10 GMT

ಬೆಂಗಳೂರು, ಜ.3:ಕೋವಿಡ್ ತೀವ್ರತೆ ಕಡಿಮೆಯಾದ ನಂತರ ಬೇಸಿಗೆಗೆ ಮುನ್ನ ಮತ್ತೊಮ್ಮೆ ಭೌತಿಕವಾಗಿ ಚಿತ್ರಸಂತೆಯನ್ನು ಪರಿಷತ್ತು ನಡೆಸಬೇಕು ಎಂದು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಸಲಹೆ ನೀಡಿದರು.

ರವಿವಾರ ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತು ಆವರಣದಲ್ಲಿ ಆಯೋಜಿಸಲಾಗಿದ್ದ 18ನೇ ಚಿತ್ರಸಂತೆಗೆ ವಿಡಿಯೋ ಸಂವಾದ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಚಿತ್ರಸಂತೆಯಲ್ಲಿ ನೇರವಾಗಿ ಭಾಗವಹಿಸುವುದಕ್ಕೂ ಆನ್‍ಲೈನ್ ಮೂಲಕ ಪಾಲ್ಗೊಳ್ಳುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಆನ್‍ಲೈನ್‍ನಲ್ಲಿ ನೋಡುವುದು ಸಂತೆಯ ಅನುಭವ ನೀಡುವುದಿಲ್ಲ. ಹಾಗಾಗಿ, ಮತ್ತೊಮ್ಮೆ ಭೌತಿಕವಾಗಿ ನಡೆಸುವಂತೆ ನುಡಿದರು.

ಕೋವಿಡ್‍ನಿಂದ ಚಿತ್ರಕಲಾವಿದರೂ ಸಂಕಷ್ಟದಲ್ಲಿದ್ದಾರೆ. ಅವರಿಗೆ ನೆರವು ನೀಡುವ ಕೆಲಸವಾಗಬೇಕು. ಕಲಾವಿದರಿಗೆ ನನ್ನಿಂದ ಯಾವ ರೀತಿಯ ಸಹಾಯ ಬೇಕಾಗುತ್ತದೆ ಎಂದು ತಿಳಿಸಿದರೆ, ನೆರವು ನೀಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮಾತನಾಡಿ, ರಾಜರಾಜೇಶ್ವರಿ ನಗರದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕಲಾ ಪರಿಷತ್‍ನ ನೂತನ ಸಂಕೀರ್ಣ ಅಭಿವೃದ್ಧಿಯಾಗಲು ದೇಣಿಗೆ ನೀಡುವ ಅಗತ್ಯವಿದೆ. ವೈಯಕ್ತಿಕವಾಗಿ ಸಂಘ ಸಂಸ್ಥೆಗಳು ಅದರ ಬೆಳವಣಿಗೆಗೆ ಸಹಾಯ ನೀಡಬೇಕು ಎಂದು ಮನವಿ ಮಾಡಿದರು.

ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, ಪರಿಷತ್ತು ಅಭಿವೃದ್ಧಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 1 ಕೋಟಿ ರೂ. ಘೋಷಿಸಿದ್ದಾರೆ. ಅದನ್ನು ಬಿಡುಗಡೆಮಾಡಲು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಇದಕ್ಕೂ ಮುನ್ನ ಪರಿಷತ್ತು ಅಧ್ಯಕ್ಷ ಬಿ.ಎಲ್. ಶಂಕರ್, ನೇರವಾಗಿ ಹೆಚ್ಚು ಜನ ಸೇರಲು ಸಾಧ್ಯವಾಗದಿದ್ದರೂ ಆನ್‍ಲೈನ್‍ನಲ್ಲಿ ಹೆಚ್ಚು ಸ್ಪಂದನೆ ವ್ಯಕ್ತವಾಗಿದೆ. ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರತಿ ಸೆಕೆಂಡ್‍ಗೆ 84 ಜನ ವೀಕ್ಷಿಸುತ್ತಿದ್ದು, ಕೆಲವೇ ಗಂಟೆಗಳಲ್ಲಿ 60 ಸಾವಿರಕ್ಕೂ ಹೆಚ್ಚು ಜನ ಕಲಾಕೃತಿಗಳನ್ನು ನೋಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪಿ.ಸಿ.ಮೋಹನ್, ಶಾಸಕ ರಿಝ್ವ್ವಾನ್ ಆರ್ಷದ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News