ಕಲಬುರಗಿ: ಬಾಲಕಿ ಸಾವು ಪ್ರಕರಣ; ರಸ್ತೆಯಲ್ಲಿ ಮೃತದೇಹ ಇಟ್ಟು ಪ್ರತಿಭಟನೆ

Update: 2021-01-03 17:36 GMT

ಕಲಬುರಗಿ: ಜಿಲ್ಲೆಯ ಕಾರಾಗೃಹದಲ್ಲಿದ್ದ ನಾಲ್ಕು ವರ್ಷದ ಬಾಲಕಿ ಸಾವು ಪ್ರಕರಣ ಖಂಡಿಸಿ ಬಾಲಕಿ ಸಂಬಂಧಿಕರು ಮತ್ತು ಗ್ರಾಮಸ್ಥರು ನಗರದ ಜಿಮ್ಸ್ ಆಸ್ಪತ್ರೆ ಎದುರು ಬಾಲಕಿಯ ಮೃತದೇಹ ರಸ್ತೆಯಲ್ಲಿಟ್ಟು ಪ್ರತಿಭಟನೆ ನಡೆಸಿದರು.

ಪೊಲೀಸ್ ಇನ್ಸ್ಪೆಕ್ಟರ್ ಮಹಿಳೆಯರು ಮತ್ತು ಮಕ್ಕಳನ್ನು ಬಂಧಿಸಿ, ಠಾಣೆಯಲ್ಲಿ ಮಹಿಳೆಯನ್ನು ಥಳಿಸುವ ವೇಳೆ ಮಗುವಿಗೂ ಪೆಟ್ಟಾಗಿದೆ. ಪೊಲೀಸರು ಹೊಡೆದ ಪೆಟ್ಟಿನಿಂದಾಗಿಯೇ ಮಗು ಮೃತಪಟ್ಟಿದೆ. ಕೂಡಲೇ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಗ್ರಾಪಂ. ಚುನಾವಣೆಯಲ್ಲಿ ಜೇವರ್ಗಿ ತಾಲ್ಲೂಕಿನ ಜೈನಾಪುರ ಗ್ರಾಮದಲ್ಲಿ ಗೆದ್ದ ಅಭ್ಯರ್ಥಿ ಕಡೆಯವರಿಂದ ಸೋತ ಅಭ್ಯರ್ಥಿ ಕಡೆಯವರ ಮೇಲೆ ಹಲ್ಲೆಯಾಗಿತ್ತು. ಹಲ್ಲೆ ಮಾಡಿದವರೇ ಮೊದಲು ಹೋಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು ಎಂದು ಆರೋಪಿಸಲಾಗಿದೆ. ದೂರನ್ನು ಆಧರಿಸಿ ಸಂತೋಷ್ ಸೇರಿ ಆತನ ಕುಟುಂಬದ ಏಳು ಜನರನ್ನು ಬಂಧಿಸಿ, ಮಕ್ಕಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದರು ಎನ್ನಲಾಗಿದೆ.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಅಜಯಸಿಂಗ್, ಪಿಎಸ್ಐ ಹೂಗಾರ ರನ್ನು ಅಮಾನತು ಮಾಡಬೇಕು. ಘಟನೆಯಲ್ಲಿ ಪೊಲೀಸ್ ಇಲಾಖೆಯ ಬೇಜವಾಬ್ದಾರಿತನ ಎದ್ದು ಕಾಣುತ್ತಿದ್ದು, ಏನೂ ಅರಿಯದ ಮುಗ್ಧ ಬಾಲಕಿಯನ್ನು ಜೈಲಿಗೆ ಕಳುಹಿಸಿರುವುದು ಖಂಡನಾರ್ಹ ಎಂದು ಆಕ್ರೋಶ ವ್ಯಕ್ತಪಡಿಸಿರು. 

ಸ್ಥಳಕ್ಕೆ ಎಸ್ಪಿ ಡಾ.ಸಿಮಿ ಮರಿಯಮ್ ಜಾರ್ಜ್ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ನಂತರ ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಮನವೊಲಿಸಲು ಯತ್ನಿಸಿದರು. ಸದ್ಯ ಪ್ರತಿಭಟನೆ ಮುಂದುವರೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News