ವಿಧಾನಪರಿಷತ್ ನಲ್ಲಿ ಜಟಾಪಟಿ: ಪರಿಶೀಲನೆಗೆ ಮರಿತಿಬ್ಬೇಗೌಡ ಅಧ್ಯಕ್ಷತೆಯಲ್ಲಿ ಸದನ ಸಮಿತಿ ರಚನೆ
Update: 2021-01-04 16:26 GMT
ಬೆಂಗಳೂರು, ಜ.4: ವಿಧಾನಪರಿಷತ್ ನಲ್ಲಿ ಡಿಸೆಂಬರ್ 15 ರಂದು ಕರೆದಿದ್ದ ವಿಶೇಷ ಅಧಿವೇಶನದಲ್ಲಿ ನಡೆದ ಅಹಿತಕರ ಘಟನೆ ಸಂಬಂಧ ಪರಿಶೀಲನೆಗೆ ಹಿರಿಯ ಸದಸ್ಯ ಮರಿತಿಬ್ಬೇಗೌಡ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ.
ವಿಧಾನ ಪರಿಷತ್ತಿನ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಎಚ್.ವಿಶ್ವನಾಥ್, ಆರ್.ಬಿ.ತಿಮ್ಮಾಪುರ, ಎಸ್.ವಿ.ಸಂಕನೂರ ಅವರು ಸಮಿತಿ ಸದಸ್ಯರಾಗಿದ್ದಾರೆ.
ಡಿ.15ರಂದು ಪರಿಷತ್ತಿನಲ್ಲಿ ನಡೆದ 'ಅಹಿತಕರ ಘಟನೆ'ಗಳ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಬೇಕು. ಅಲ್ಲದೆ, ಘಟನೆಗಳಿಗೆ ಕಾರಣರಾದ ಸಚಿವಾಲಯದ ಅಧಿಕಾರಿಗಳು/ ಸಿಬ್ಬಂದಿ, ಸದಸ್ಯರು ಮತ್ತು ಸಚಿವರು ಸೇರಿದಂತೆ ಸಭಾಪತಿ ಸ್ಥಾನಕ್ಕೆ ಚ್ಯುತಿಯಾದ ಕುರಿತು ಪರಿಶೀಲನೆ ನಡೆಸಬೇಕು ಎಂದು ಸೂಚಿಸಲಾಗಿದೆ.
ಸಮಿತಿಯು ಇನ್ನು ಇಪ್ಪತ್ತು ದಿನಗಳ ಒಳಗಾಗಿ ವರದಿಯನ್ನು ನೀಡಬೇಕು ಎಂದು ವಿಧಾನ ಪರಿಷತ್ತಿನ ಕಾರ್ಯದರ್ಶಿ ಮಹಾಲಕ್ಷ್ಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.