ಗಣ್ಯರ ಮೇಲಿನ ಹಲ್ಲೆ, ಹತ್ಯೆ ತಡೆಯುವ ಸಂಬಂಧ ಎಸ್‍ಐಟಿ ರಚಿಸಬೇಕು: ಶಾಸಕ ತನ್ವೀರ್ ಸೇಠ್

Update: 2021-01-04 17:59 GMT

ಮೈಸೂರು,ಜ.4: ಗಣ್ಯರ ಮೇಲಿನ ಹಲ್ಲೆ, ಹತ್ಯೆ ತಡೆಯುವ ಸಂಬಂಧ ಎಸ್‍ಐಟಿ ರಚಿಸಬೇಕು. ನನ್ನ ಹತ್ಯೆಗೆ ಯತ್ನಿಸಿದವರು ಯಾರು, ಉದ್ದೇಶ ಏನು ಎಂಬುದನ್ನೇ ಈವರೆಗೂ ತಿಳಿಸಿಲ್ಲ. ಘಟನೆ ನಡೆದು ಒಂದು ವರ್ಷದ ಮೇಲೆ ಎರಡು ತಿಂಗಳಾದರೂ ಬಹಿರಂಗ ಪಡಿಸಿಲ್ಲ ಎಂದು ಶಾಸಕ ತನ್ವೀರ್ ಸೇಠ್ ಅಸಮಾಧಾನ ಹೊರ ಹಾಕಿದರು.

ತಮ್ಮ ನಿವಾಸದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕಾರಣಿಗಳ ಮೇಲೆ ನಡೆಯುವ ಹಲ್ಲೆ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ನನ್ನ ಮೇಲಿನ ಪ್ರಕರಣದ ಆರೋಪಿಗಳೆಲ್ಲರೂ ಜಾಮೀನಿನ ಮೇಲೆ ಹೊರ ಬಂದಿದ್ದಾರೆ ಎಂದು ಹೇಳಿದರು.

ಇಂತಹ ಗಂಭೀರ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ಸಿಗುತ್ತದೆ ಎಂದರೆ ಪೊಲೀಸ್ ತನಿಖೆ ಹೇಗಿತ್ತು?. ಯಾವ ಪ್ರಮಾಣದಲ್ಲಿ ಸಾಕ್ಷಿಗಳನ್ನ ಒದಗಿಸಿದ್ದಾರೆ ಎಂಬುದನ್ನ ಅರ್ಥ ಮಾಡಿಕೊಳ್ಳಬೇಕು ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ಸರ್ಕಾರ ಗನ್ ಮ್ಯಾನ್ ಪೊಲೀಸ್ ಭದ್ರತೆ ಕೊಟ್ಟರೆ ಸಾಲದು. ನಾವು ಎಲ್ಲಾ ಕಡೆ, ಎಲ್ಲಾ ಟೈಂನಲ್ಲೂ ಪೊಲೀಸರನ್ನ ಜೊತೆಗಿಟ್ಟುಕೊಂಡು ಹೋಗೋಕೆ ಆಗಲ್ಲ. ರಾಜಕಾರಣಿಗಳ ಮೇಲೆ ನಡೆಯುವ ಹಲ್ಲೆಯನ್ನ ತಡೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಗಣ್ಯರ ಮೇಲಿನ ಹಲ್ಲೆ, ಹತ್ಯೆ ತಡೆಯುವ ಸಂಬಂಧ ಎಸ್‍ಐಟಿ ರಚಿಸಬೇಕು. ಈ ಸಂಬಂಧ ಗೃಹ ಸಚಿವರೊಂದಿಗೂ ಚರ್ಚೆ ನಡೆಸಿದ್ದೇನೆ ಎಂದರು.

ಕೇವಲ ನಮ್ಮ ಮುಸ್ಲಿಂ ನಾಯಕರಿಗೆ ಅಷ್ಟೇ ಅಲ್ಲ, ತೇಜಸ್ವಿ ಸೂರ್ಯಗೆ ಬೆದರಿಕೆ ಕರೆ ಬಂದಿತ್ತು. ರಾಜಕಾರಣ ಹೊಲಸಾಗಿದೆ, ಇಂತಹ ಸಂದರ್ಭದಲ್ಲಿ ಯುವಕರು ರಾಜಕಾರಣಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಯುವಕರು ರಾಜಕಾರಣಕ್ಕೆ ಬರುವ ವಾತಾವರಣ ನಿರ್ಮಿಸಬೇಕು ಎಂದರು.

ಮೈಸೂರು ಪಾಲಿಕೆಯಲ್ಲಿ ಮೇಯರ್ ಗದ್ದುಗೆ ವಿಚಾರವಾಗಿ ಮಾತನಾಡಿದ ಅವರು, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮುಂದುವರಿಯಲಿದೆ. ನಾನು ಜೆಡಿಎಸ್ ನಾಯಕ ಕುಮಾರಣ್ಣ ಜೊತೆ ಮಾತನಾಡಿದ್ದೇನೆ. ಶಾಸಕ ಸಾ.ರಾ.ಮಹೇಶ್ ಜವಾಬ್ದಾರಿ ಹೊತ್ತಿದ್ದಾರೆ. ಅವರಿಗೆ ಆರೋಗ್ಯ ಸರಿ ಇಲ್ಲದ ಕಾರಣ ಮಾತನಾಡಿಲ್ಲ. ಇನ್ನೆರಡು ಮೂರು ದಿನದಲ್ಲಿ ಕುಳಿತು ಚರ್ಚೆ ಮಾಡುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News