ಅಕ್ರಮ ಮರಳು ದಂಧೆಗೆ ಸಹಕಾರ ಆರೋಪ: ಎಸ್‍ಐ, ಪೇದೆ ಅಮಾನತು

Update: 2021-03-12 12:21 GMT

ಮೈಸೂರು,ಜ.4: ಸುತ್ತೂರು ಶ್ರೀ ಕ್ಷೇತ್ರದ ಕಪಿಲಾ ನದಿಯಲ್ಲೇ ಮರಳು ದಂಧೆ ನಡೆಸುವವರಿಗೆ ಸಹಕಾರ ನೀಡಿದ್ದ ಆರೋಪದಡಿ ಬಿಳಿಗೆರೆ ಠಾಣೆಯ ಸಬ್ ಇನ್ಸ್ ಪೆಕ್ಟರ್ ಹಾಗೂ ಪೇದೆ ಒಬ್ಬರನ್ನು ಅಮಾನತು ಮಾಡಲಾಗಿದೆ.

ಡಿ.31ರಂದು ಬೆಳಗಿನ ಜಾವ ಸುತ್ತೂರಿನ ಕಪಿಲಾ ನದಿಯಿಂದ ಮರಳು ಲೂಟಿ ಮಾಡುವ ಸಂದರ್ಭ ವಾಕಿಂಗ್ ಗೆ ತೆರಳಿದ್ದ ವ್ಯಕ್ತಿಯೊಬ್ಬರು ಇದನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ 'ನಾವು ಎಸ್ಐ ಆಕಾಶ್ ಕಡೆಯವರು, ಮಾಮೂಲಿ ಕೊಟ್ಟು ಮರಳು ತೆಗೆಯುತ್ತಿದ್ದೇವೆ. ಅದನ್ನ ಕೇಳೋಕೆ ನೀವ್ಯಾರು ಎಂದು ಅವರನ್ನೇ ತಿರುಗಿ ಪ್ರಶ್ನಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಆ ವ್ಯಕ್ತಿ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಗಮನಕ್ಕೆ ತಂದರು. ತಕ್ಷಣವೇ ಸ್ಥಳಕ್ಕೆ ತೆರಳಿದ ರಿಷ್ಯಂತ್ ಮರಳು ದಂಧೆಕೋರರ ವಿಚಾರಣೆ ನಡೆಸಿದರು.

ಈ ವೇಳೆ ಎಸ್‍ಐ ಅಕಾಶ್ ಗೆ ಮಾಮೂಲಿ ಕೊಡುತ್ತಿರುವುದಾಗಿ ದಂಧೆಕೋರರು ಬಾಯಿಬಿಟ್ಟಿದ್ದಾರೆ. ದಂಧೆಕೋರರು ಹಾಗೂ ಎಸ್‍ಐ ನಡುವೆ ಕಾಲ್ ರೆಕಾರ್ಡ್ ಪರಿಶೀಲಿಸಿ ಬಿಳಿಗೆರೆ ಎಸ್‍ಐ ಆಕಾಶ್ ಹಾಗೂ ಪೇದೆ ರಾಮಕೃಷ್ಣ ಅವರನ್ನು ಸಸ್ಪೆಂಡ್ ಮಾಡಿ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಆದೇಶ ಹೊರಡಿಸಿದ್ದು, ಮರಳು ದಂಧೆಯಲ್ಲಿ ಭಾಗಿಯಾಗಿದ್ದ ಮೂವರನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News