ಮನೆಬಾಗಿಲಿಗೆ ಸರಕಾರದ ಸೇವೆ ತಲುಪಿಸುವ 'ಜನಸೇವಕ ಯೋಜನೆ' ಜ.15ಕ್ಕೆ ಪುನಾರಂಭ: ಸುರೇಶ್ ಕುಮಾರ್

Update: 2021-01-07 16:31 GMT

ಬೆಂಗಳೂರು, ಜ.7: ನಾಗರಿಕರ ಮನೆಬಾಗಿಲಿಗೆ ಸರಕಾರದ ಸೇವೆಗಳನ್ನು ತಲುಪಿಸುವ ಜನಸೇವಕ ಯೋಜನೆಯನ್ನು ಜ.15ಕ್ಕೆ ಬೆಂಗಳೂರಿನ 5 ವಿಧಾನಸಭಾ ಕ್ಷೇತ್ರಗಳಲ್ಲಿ ಮರು ಪ್ರಾರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಇಲಾಖೆಯ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.

ಗುರುವಾರ ಬೆಂಗಳೂರು ನಗರದ ಸಂಬಂಧಿತ ಕ್ಷೇತ್ರಗಳ ಶಾಸಕರ ಸಭೆ ನಡೆಸಿ ಸಹಕಾರ ಕೋರಿದ ಅವರು, ಸರಕಾರದ ಈ ಮಹತ್ವದ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಬದ್ಧತೆಯಿಂದ ಕಾರ್ಯ ನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಯಶವಂತಪುರ ಕ್ಷೇತ್ರದಲ್ಲಿ ಜನಸೇವಕ: ಈ ಬಾರಿ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೂ ಜನಸೇವಕ ಯೋಜನೆಯನ್ನು ವಿಸ್ತರಿಸಲಾಗುತ್ತಿದ್ದು, ಬಿಬಿಎಂಪಿಯ ಖಾತಾ ವರ್ಗಾವಣೆ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕದ ಸೇವೆಗಳು, ಆಧಾರ್ ಕಾರ್ಡಿನಲ್ಲಿನ ದೋಷಗಳ ತಿದ್ದುಪಡಿ, ಕಂದಾಯ ಇಲಾಖೆ, ಪೊಲಿಸ್ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಒಟ್ಟು 55 ಸೇವೆಗಳನ್ನು ಈ ಯೋಜನೆಯಡಿ  ಒದಗಿಸಲಾಗುತ್ತದೆ ಎಂದು ಅವರು ಹೇಳಿದರು.

ಇ-ಸ್ಟ್ಯಾಂಪ್ ಸೇವೆ: ಅತಿ ಶೀಘ್ರದಲ್ಲಿಯೆ ಮುದ್ರಾಂಕ ಇಲಾಖೆಯ ಇ-ಸ್ಟಾಂಪ್ ಮತ್ತು ಸಾರಿಗೆ ಇಲಾಖೆಯ ಸೇವೆಗಳನ್ನು ಜನಸೇವಕ ಯೋಜನೆಯಡಿಯಲ್ಲಿ ತರಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಲು ಆಲೋಚಿಸಲಾಗುತ್ತಿದೆ ಎಂದು ಸುರೇಶ್ ಕುಮಾರ್ ಹೇಳಿದರು.

ಜನಸೇವಕ ಯೋಜನೆಯ ಬಗ್ಗೆ ಸ್ಥಳೀಯ ವಾಟ್ಸಾಪ್, ಫೇಸ್‍ಬುಕ್, ಟ್ವಿಟರ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸುವುದು, ಕ್ಷೇತ್ರ ವ್ಯಾಪ್ತಿಯಲ್ಲಿ ಸ್ತ್ರೀಶಕ್ತಿ ಗುಂಪುಗಳು, ಸರಕಾರೇತರ ಸಂಸ್ಥೆಗಳು, ವಿವಿಧ ಸಮುದಾಯ ಆಧಾರಿತ ಸಂಸ್ಥೆಗಳೊಂದಿಗೆ ಸಭೆ ನಡೆಸಿ ಪ್ರಚಾರಕ್ಕೆ ಅನುವು ಮಾಡುವುದು ಸೇರಿದಂತೆ ಈ ಮಹತ್ವದ ನಾಗರಿಕ ಸೇವಾ ಯೋಜನೆಯ ಸಮರ್ಪಕ ಹಾಗೂ ಯಶಸ್ವಿ ಅನುಷ್ಠಾನಕ್ಕೆ ಸಹಕರಿಸಬೇಕೆಂದು ಬೆಂಗಳೂರು ನಗರದ ಶಾಸಕರಲ್ಲಿ ಅವರು ಮನವಿ ಮಾಡಿದರು.

ಸಭೆಯಲ್ಲಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಸತೀಶ್ ರೆಡ್ಡಿ, ಇ-ಆಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ, ಬೆಂಗಳೂರು ನಗರದ ಅಪರ ಜಿಲ್ಲಾಧಿಕಾರಿ, ಬಿಬಿಎಂಪಿ ವಿಶೇಷ ಆಯುಕ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News