ಜಾಡಿಸಿ ಒದ್ದರೆ ಎಲ್ಲಿಗೆ ಹೋಗಿ ಬೀಳ್ತಿಯಾ ಗೊತ್ತಾ: ಅಧಿಕಾರಿಗಳಿಗೆ ಸಚಿವ ಮಾಧುಸ್ವಾಮಿ ತರಾಟೆ

Update: 2021-01-07 17:21 GMT

ತುಮಕೂರು, ಜ.7: ಜಾಡಿಸಿ ಒದ್ದರೆ ಎಲ್ಲಿಗೆ ಹೋಗಿ ಬೀಳ್ತಿಯಾ ಗೊತ್ತಾ. ಕೆಲಸ ಮಾಡದೆ ಹೆಂಡತಿಯ ಸೀರೆ ತೆಗೆದುಕೊಳ್ಳೋಕೆ ಹೋಗಿದ್ಯಾ. ಮೊದಲು ಇವನನ್ನು ಕೆಲಸದಿಂದ ವಜಾ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಅವರು ಗುಬ್ಬಿ ಎಇಇ ಅವರನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ 2020-21ನೇ ಸಾಲಿನ ಮೂರನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶಿತರಾದ ಸಚಿವರು, ಕೆಲಸ ಮಾಡದೆ ಅಧಿಕಾರಿಗಳು ಜಿಲ್ಲೆಯನ್ನೆ ಸಾಯಿಸುತ್ತಿದ್ದಾರೆ. ಕೊರೋನ, ನೀತಿ ಸಂಹಿತೆ ಹೆಸರಲ್ಲಿ ಜಡಗಟ್ಟಿದ್ದಾರೆ. ಸಭೆ ನಡೆಯುವುದಿಲ್ಲ ಎಂಬ ಉದಾಸೀನತೆ ತಾಳಿರುವ ಅಧಿಕಾರಿಗಳು ಜಿಲ್ಲೆಯಲ್ಲಿ ಒಂದೇ ಒಂದು ಕಾಮಗಾರಿ ಸಮರ್ಪಕವಾಗಿ ಮಾಡಿಲ್ಲ. ಜಿಲ್ಲೆಗೆ ಹಿಡಿದಿರುವ ಗ್ರಹಣ ಯಾವಾಗ ಮುಗಿಯುತ್ತದೆ. ನೀವು ಯಾವಾಗ ಕೆಲಸ ಖಾಲಿ ಮಾಡುತ್ತೀರಾ ಎಂದು ತುಮಕೂರು ವಿಭಾಗದ ಎಇಇ ಹರೀಶ್ ಬಾಬು ವಿರುದ್ಧ ಹರಿಹಾಯ್ದ ಸಚಿವರು, ಕೆಲಸ ಮಾಡದಿದ್ದರೆ ಪರ್ಮನೆಂಟ್ ರಜೆ ಕೊಡಿಸುತ್ತೇನೆ ಎಂದು ಎಚ್ಚರಿಕೆ ಕೊಟ್ಟರು.

ಜಿಲ್ಲೆಯ ಪಿಆರ್‍ಐಡಿ ವಿಭಾಗದ ಅಧಿಕಾರಿಗಳು ಕೆಲಸ ಮಾಡುವ ಮನೋಭಾವವನ್ನೇ ಮರೆತಿದ್ದಾರೆ. ಯಾರು ಕೆಲಸ ಮಾಡುವುದಿಲ್ಲವೋ ಅಂತಹ ಅಧಿಕಾರಿಗಳ ಸಂಬಳ ನಿಲ್ಲಿಸಿ, ನಾನು ಹೇಳೋವರೆಗೂ ಸಂಬಳ ಕೊಡಬೇಡಿ. ಯಾರಿಗೂ ಇಡೀ ಜೀವಮಾನ ಪ್ರಮೋಷನ್ ಸಿಗದಂತೆ ಮಾಡಿ ಎಂದು ಸಿಇಒ ಶುಭಕಲ್ಯಾಣ್ ಅವರಿಗೆ ಸೂಚಿಸಿದರು. 

ತುಮಕೂರು ವಿಭಾಗದ ಪಿಆರ್‍ಇಡಿಯ ಎಇಇ ಹರೀಶ್ ಬಾಬು ಅವರಿಗೆ ತರಾಟೆ ತೆಗೆದುಕೊಂಡ ಅವರು, ನೀನು ಕೆಲಸ ಮಾಡದಿದ್ದರು ನಿನ್ನ ರಕ್ಷಣೆಗೆ ಸೀರೆ ಸುತ್ತುವ ಆ ಕೃಷ್ಣ ಯಾರು ಎಂದು ಪ್ರಶ್ನಿಸಿದ ಸಚಿವರು, ಜಿಲ್ಲೆಯಲ್ಲಿ ಯಾವುದೇ ಇಲಾಖೆಯ ಕೆಲಸ-ಕಾಮಗಾರಿಗಳು ಸಮರ್ಪಕವಾಗಿ ಆಗಿಲ್ಲ. ಬಹುತೇಕ ಎಲ್ಲಾ ಇಲಾಖೆಗಳ ಬಹಳಷ್ಟು ಅನುದಾನ ಖರ್ಚೇ ಆಗಿಲ್ಲ. ನೀತಿ ಸಂಹಿತೆಯಲ್ಲಿ ಯಾವುದೇ ಅಡಚಣೆ ಉಂಟಾಗಿಲ್ಲ. ಆದರೂ, ಎಸ್‍ಇಪಿ, ಟಿಎಸ್‍ಪಿ, ಲಿಂಕ್ ಡಾಕ್ಯುಮೆಂಟ್ ಅನುದಾನ ಖರ್ಚಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತುಮಕೂರು ತಾಲೂಕಿನಲ್ಲಿ 55 ಕಾಮಗಾರಿ ಎಸ್ಟಿಮೆಂಟ್ ಆಗಿದೆ. ಅದರಲ್ಲಿ 4 ವರ್ಕ್ ಆರ್ಡರ್ ಅಗಿದೆ ಎಂದು ಇಇ ಹರೀಶ್ ಬಾಬು ಸಭೆಗೆ ತಿಳಿಸಿದರು. ತುಮಕೂರು ಡಿವಿಜನ್‍ನಲ್ಲಿ 296 ಕೋಟಿ ರೂ. ಖರ್ಚು ಮಾಡುವ ಬದಲು ಕೇವಲ 86 ಲಕ್ಷ ರೂ. ಖರ್ಚು ಮಾಡಲಾಗಿದೆ. ಉಳಿದ 228ಕೋಟಿ ಖರ್ಚು ಮಾಡಿಲ್ಲ. ಇದು ಜಿಲ್ಲೆಗೆ ಹಿನ್ನಡೆಗೆ ಕಾರಣ ಎಂದು ಜೆ.ಸಿ ಮಾಧುಸ್ವಾಮಿ ತಿಳಿಸಿದರು.

ಜಿಲ್ಲೆಯಲ್ಲಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅಧಿಕಾರಿಗಳಿಗೆ, ಇಂಜಿನಿಯರಿಂಗ್‍ಗಳಿಗೆ ಕೆರೆಗಳ ಹೆಸರೇ ಗೊತ್ತಿಲ್ಲ. ಇಡೀ ಜಿಲ್ಲೆಯಲ್ಲಿ ಈವರೆಗೆ ಒಂದೇ ಒಂದು ಕಾಮಗಾರಿಯೂ ನಡೆದಿಲ್ಲ. ಪಶು ಇಲಾಖೆ, ಮೀನುಗಾರಿಕೆ, ತೋಟಗಾರಿಕೆ, ಬಿಸಿಎಂ, ಆರೋಗ್ಯ, ಆಯುಷ್ ಇಲಾಖೆಯಿಂದ ಯಾವುದೆ ಕೆಲಸಗಳು ನಡೆಯುತ್ತಿಲ್ಲ. ನೀವು ಸಾಯುವುದಲ್ಲದೆ, ಜನ ಮತ್ತು ಜಿಲ್ಲೆಯನ್ನು ಸಾಯಿಸುತ್ತಿದ್ದೀರಾ ಎಂದು ಆಕ್ರೋಶಿತರಾದರು.

ಎಂಎಲ್‍ಸಿ ನಾರಾಯಣ ಸ್ವಾಮಿ ಹಾಗೂ ಶಾಸಕ ಬಿ.ಸಿ.ನಾಗೇಶ್ ಮಾತನಾಡಿ, ಜಿಲ್ಲೆಯಲ್ಲಿನ ಬಹುತೇಕ ಇಲಾಖೆಗಳ ಕಾಮಗಾರಿಗಳು ಆರಂಭವೇ ಆಗಿಲ್ಲ. ಸಿಇಒ ಮಾತಿಗೆ ಅಧಿಕಾರಿಗಳು ಬೆಲೆಯನ್ನೇ ಕೊಡುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯತನ ಎದ್ದು ಕಾಣುತ್ತಿದೆ ಎಂದು ಕಿಡಿಕಾರಿದರು.

ಸಭೆಯಲ್ಲಿ ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಬಿ.ಸಿ.ನಾಗೇಶ್, ಮಸಾಲೆಜಯರಾಂ, ರಾಜೇಶ್‍ಗೌಡ, ಜಿ.ಪಂ.ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿಲ್ಲಾಧಿಕಾರಿ ರಾಕೇಶ್‍ಕುಮಾರ್, ಸಿಇಒ ಶುಭಾಕಲ್ಯಾಣ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News