ರೈತರ ಹೋರಾಟದ ಬಗ್ಗೆ ರಾಹುಲ್ ಗಾಂಧಿಯನ್ನು ಟೀಕಿಸಿ ಅಂಕಣ: ಪ್ರಧಾನಿ ಅವರಲ್ಲ ಎಂದು ನೆನಪಿಸಿದ ನೆಟ್ಟಿಗರು

Update: 2021-01-08 19:04 GMT

ಬೆಂಗಳೂರು: ಹಿರಿಯ ಪತ್ರಕರ್ತ, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ ಪ್ರಶಾಂತ್ ನಾತು ಅವರು, ತಾನು ರಾಹುಲ್ ಗಾಂಧಿ ಬಗ್ಗೆ ಬರೆದ ಅಂಕಣವೊಂದನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ಆದರೆ ರೈತರ ವಿಷಯದಲ್ಲಿ ಪ್ರಧಾನಿ ಮೋದಿಯನ್ನು ಪ್ರಶ್ನಿಸದೆ ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿಯನ್ನು ಟೀಕಿಸಿದ್ದಕ್ಕೆ ನೆಟ್ಟಿಗರು ಲೇಖಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ದೈನಿಕದ 'ಇಂಡಿಯಾ ಗೇಟ್' ಅಂಕಣದಲ್ಲಿ 'ರಸ್ತೆಯಲ್ಲಿ ರೈತ, ಇಟಲಿಯಲ್ಲಿ ರಾಹುಲ್' ಎಂಬ ಟೈಟಲ್ ನೊಂದಿಗೆ ಪ್ರಶಾಂತ್ ನಾತು ಅವರು ಅಂಕಣ ಬರೆದಿದ್ದಾರೆ. ಇದನ್ನು ಅವರು ಫೇಸ್ ಬುಕ್ ನಲ್ಲೂ ಪೋಸ್ಟ್ ಮಾಡಿದ್ದರು. ಆದರೆ ಅವರ ಈ ಅಂಕಣಕ್ಕೆ ನೆಟ್ಟಿಗರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಅವರ ಅಂಕಣವನ್ನು ಬೆಂಬಲಿಸಿ ಕಮೆಂಟ್ ಮಾಡಿದ್ದರೆ, ಹಲವರು ಇದರ ವಿರುದ್ಧ ಕಮೆಂಟ್ ಮಾಡಿ ಪ್ರಧಾನಿಯನ್ನು ಪ್ರಶ್ನಿಸದೆ ಸಂಸದನ್ನು ಪ್ರಶ್ನಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂಕಣದಲ್ಲೇನಿದೆ ?

ಕಳೆದ 7 ವರ್ಷಗಳಲ್ಲಿ ಮೋದಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿರುವುದು ರೈತರ ವಿಷಯದಲ್ಲೇ. ಹೀಗಾಗಿ ಮೋದಿ ಅವರನ್ನು ವಿರೋಧಿಸುವ ಬಹುತೇಕ ರಾಜಕೀಯ ಮತ್ತು ಇತರ ವಿಚಾರದ ಪರಿವಾರಗಳು ರಸ್ತೆಗೆ ಇಳಿದಿವೆ. ಆದರೆ ವಿಪರ್ಯಾಸ ನೋಡಿ, ಚಳಿಗೆ ರೈತ ನಡುಗುತ್ತಿದ್ದರೆ ರಾಹುಲ್ ಗಾಂಧಿ ಮಾತ್ರ ಹೊಸ ವರ್ಷ ಆಚರಿಸಲು ಇಟಲಿಯ ಮಿಲಾನ್‌ಗೆ ಹಾರಿದ್ದಾರೆ. ಯಾರು ಎಲ್ಲಿ ರಜೆ ಕಳೆಯಬೇಕು ಎನ್ನುವುದು ಅವರವರ ಇಷ್ಟ ಹೌದು. ಆದರೆ ಬೆಳಗಾದರೆ ಮೋದಿ ಅವರನ್ನು ಟೀಕಿಸುವ ರಾಹುಲ್‌, ರೈತರು ರಸ್ತೆಯಲ್ಲಿ ಕುಳಿತಾಗ ಹೊರಗೆ ಹೋಗಿರುವುದು ರಾಜಕೀಯ ಜಾಣತನವೇನೂ ಅಲ್ಲ. ಮೋದಿ ಅವರ ಅರ್ಧ ಸಾಮರ್ಥ್ಯವೇ ರಾಹುಲ್‌ರಂಥ ಒಲ್ಲದ ಮನಸ್ಸಿನ, ಅಪರಿಪಕ್ವ, ಅಪ್ರಬುದ್ಧ, ಅರೆ ಮನಸ್ಸಿನ ರಾಜಕಾರಣಿ. ಅದಕ್ಕೇ ಹೇಳುವುದು ಕೊಟ್ಟಕುದುರೆ ಏರದವ ವೀರನೂ ಅಲ್ಲ, ಶೂರನೂ ಅಲ್ಲ'' ಎಂದು ನಾತು ಅವರು ಬರೆದಿದ್ದಾರೆ.

ಆದರೆ ರೈತರ ಭಾರೀ ಪ್ರತಿಭಟನೆಯ ಬಗ್ಗೆ ಪ್ರಧಾನಿ ಮೋದಿಯನ್ನು ಪ್ರಶ್ನಿಸದೆ ಇಟಲಿಗೆ ತೆರಳಿದ ರಾಹುಲ್ ಗಾಂಧಿಯನ್ನು ಟೀಕಿಸಿದ ಬಗ್ಗೆ ನೆಟ್ಟಿಗರು ಲೇಖಕರ ವಿರುದ್ಧ ಕಿಡಿಕಾರಿದ್ದು, ದೇಶದ ಪ್ರಧಾನಿ ರಾಹುಲ್ ಅಲ್ಲ ಎಂದು ನೆನಪಿಸಿದ್ದಾರೆ.

''ನೀವೆಲ್ಲ ಪತ್ರಕರ್ತರು! ಎಲ್ಲಾ ದೇಶದಲ್ಲಿ‌ ಪ್ರಧಾನಿಗೆ ಪ್ರಶ್ನೆ ಕೆಳುತ್ತಾರೆ. ನಮ್ಮಲ್ಲಿ ವಿರೋಧ ಪಕ್ಷಕ್ಕೆ ! ನಿಮಗೆ ಏನಾದರೂ ಜವಾಬ್ದಾರಿ ಇದೆಯೇ? ರಾಹುಲ್‌ ಗಾಂಧಿ ಪ್ರದಾನಿಯೇ? ಅಥವಾ, ನಿಮ್ಮ ಪ್ರಕಾರ ಆ 56 ಇಂಚಿನ ಎದೆಯ ಜೋಕರ್ ನಾಲಾಯಕ್ ಇರಬಹುದೆ?'' ಎಂದು ರಾಹುಲ್ ಧರ್ಮಸೇನಾ ಎಂಬವರು ಪ್ರಶ್ನಿಸಿದ್ದಾರೆ.

''ರಾಹುಲ್ ಹತ್ರಾಸ್ ಸಂತ್ರಸ್ತೆಯ ಮನೆಗೆ ಹೋದರೂ ತಪ್ಪು. ಸಾವಿರಾರು ಕಿಲೋಮೀಟರ್ ಬರಿಗಾಲಲ್ಲಿ ನಡೆದು ಸಾಗುವ ಕಾರ್ಮಿಕರನ್ನು ಮಾತನಾಡಿಸಿದರೂ ತಪ್ಪು. ಈಗ ಇಟಲಿಗೆ ಹೋದರೂ ತಪ್ಪು'' ಎಂದು ಹೇಮಾವತಿ ವೆಂಕಟೇಶ್ ಎಂಬವರು ಕಮೆಂಟ್ ಮಾಡಿದ್ದಾರೆ. 

ಪ್ರಶಾಂತ್ ಅಂಕಣ ಇಂಡಿಯಾ ಗೇಟ್ ಅನ್ನೋ ಬದಲು ಬಿಜೆಪಿ ಬಕೆಟ್ ಅಂತ ಇಟ್ಕೋ. ಯಾಕೆ ಸುಮ್ಮನೇ ಪತ್ರಕರ್ತ ಅಂತ ಸುಳ್ಳು ಹೇಳಿಕೊಂಡು ತಿರುಗಾಡುತ್ತಿರಿ ? ರಾಹುಲ್ ಗಾಂಧಿ ಅಲ್ಲಿಗೆ ಹೋಗಿದ್ದರೆ ರೈತರ ಹೆಸರಲ್ಲಿ ರಾಹುಲ್ ರಾಜಕೀಯ ಎಂದು ನೀನೇ ಬರೆಯುತ್ತಿದ್ದೆ. ರಾಹುಲ್ ಒಬ್ಬ ಸಾಮಾನ್ಯ ಸಂಸದ ಅಷ್ಟೇ. ಅಲ್ಲೇ ದಿಲ್ಲಿಯಲ್ಲಿ ಇರುವ ಮೋದಿ ರೈತರನ್ನ ಕರೆದು ಮಾತಾಡಬೇಕಾ ಇಲ್ಲ ರಾಹುಲ್ ಮಾತಾಡಬೇಕಾ ? ಏನು ಅನಿಸೋದೇ ಇಲ್ವಾ ?'' ಎಂದು ರಘು ನಂದನ್ ಎಂಬವರು ಪ್ರಶ್ನಿಸಿದ್ದಾರೆ. 

''ನಿಮ್ಮ ಮೇಲೆ ಅಲ್ಪಸ್ವಲ್ಪ ಗೌರವ ಇತ್ತು, ಅದೂ ಹೋಯ್ತು. ನೀವೆಲ್ಲಾ ಗುಣಪಡಿಸಲಾಗದ ಮಾರಕ ರೋಗಗಳಿದ್ದಂತೆ ಈ ದೇಶಕ್ಕೆ'' ಎಂದು ಪ್ರಭು ಕಲಾಲ್ ಎಂಬವರು ಕಮೆಂಟ್ ಮಾಡಿದ್ದಾರೆ. 

''ರೀ ಪ್ರಶಾಂತ್ ನಾತು.. ನಾಚಿಕೆ ಆಗಲ್ವಾ ನಿಮಗೆ. ಅಷ್ಟಕ್ಕೂ ರಾಹುಲ್ ಗಾಂಧಿ ರೈತರನ್ನು ಮಾತನಾಡಿಸಲು ಪ್ರಧಾನಿಯೋ ಅಥವಾ ಕೃಷಿ ಸಚಿವನೋ ಅಥವಾ ಒಕ್ಕೂಟ ರಾಷ್ಟ್ರದ ಸರ್ಕಾರದ ಪ್ರತಿನಿಧಿಯೋ? ಈ ಹಿಂದೆ ಕಾರ್ಮಿಕರ ಪ್ರತಿಭಟನೆ ಆದಾಗ ಇದೇ ರಾಹುಲ್ ಗಾಂಧಿ ಕಾರ್ಮಿಕರ ಪರವಾಗಿ ದನಿ ಎತ್ತಿದಾಗ ಅಮೇಧ್ಯ ತಿನ್ನುವ ನಿಮ್ಮ ಬಾಯಲ್ಲಿ ಬಂದ ಮಾತು ಏನು ಹೇಳಿ.!? ಅದು ನಾಟಕ ಎಂಬುದಾಗಿತ್ತು. ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಭೇಟಿ ಮಾಡಿ ಸಾಂತ್ವನ ಹೇಳಲು ಹೋದರೆ ಅದು ರಾಜಕೀಯ ಎಂಬುದು ನಿಮ್ಮಂತವರ ವಾದವಾಗಿತ್ತು'' ಎಂದು ಪ್ರಗತ್ ಕೆ.ಆರ್ ಎಂಬವರು ಬರೆದಿದ್ದಾರೆ.

''ಇದೇ ರೈತರು ಪ್ರತಿಭಟನೆಗೆ ಇಳಿದ ಸಂದರ್ಭದಲ್ಲೇ ನಿಮ್ಮ ಬೇಜವಾಬ್ದಾರಿಯುತ ಮೋದಿ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಯಾವ ಕಾಳಜಿಯ ಕೆಳಗೆ ಬರುತ್ತದೆ ಸ್ವಲ್ಪ ವಿವರಿಸಬಹುದೇ? ಕೊರೆಯುವ ಚಳಿಯಲ್ಲಿ 2 ತಿಂಗಳಿನಿಂದ ನಡೆಯುತ್ತಿರುವ ಪ್ರತಿಭಟನೆಯ ಬಗ್ಗೆ ಒಂದೇ ಒಂದು ಮಾತನಾಡಲಿಲ್ಲ. ಪ್ರತಿಭಟನೆ ನಿರತ ಜಾಗದಲ್ಲಿ ಪ್ರತೀ 16 ಗಂಟೆಗೊಬ್ಬ ರೈತರು ಸತ್ತು ಹೋದರೂ ಮಾತನಾಡಲಿಲ್ಲ, ಅದೇ ರೈತರು ಜಿಯೋ ಮೊಬೈಲ್ ಟವರ್ ಗೆ ಹಾನಿ ಮಾಡಿದ್ದಾರೆ ಎಂದಾಗ "ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡದಿರಿ" ಎಂಬ ಕರೆ ಕೊಟ್ಟ ನಿಮ್ಮ ಚೌಕೀದಾರ‌. ಅಷ್ಟಕ್ಕೂ ಈತ ಯಾರ ಚೌಕೀದಾರ ಎಂಬುದು ಇಲ್ಲೇ ಸ್ಪಷ್ಟವಾಯ್ತಲ್ಲ. ಈ ರೀತಿ ಬರೆಯುವ ಬದಲು ನೇರವಾಗಿ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ. ನಿಮಗೊಂದು ಮಾಧ್ಯಮ, ನೀವೊಬ್ಬ ವರದಿಗಾರ'' ಎಂದು ಪ್ರಗತ್ ಕಮೆಂಟ್ ಮಾಡಿದ್ದಾರೆ. 

ಇದರ ಜೊತೆಗೆ, ಪ್ರಶಾಂತ್ ನಾತು ಅವರ ಅಂಕಣವನ್ನು ಹಲವರು ಬೆಂಬಲಿಸಿ ಕಮೆಂಟ್ ಮಾಡಿದ್ದು, ''ಕಳೆದ ಬಾರಿ ನೀವು ರೈತರ ವಿಚಾರವಾಗಿ ಅಲ್ಲಲ್ಲಿ ಕೇಂದ್ರದ ತಪ್ಪುಗಳನ್ನು ವಿವರಿಸಿ ವಾಸ್ತವಕತೆ ಬಿಚ್ಚಿಟ್ಟಿದ್ದೀರಿ. ನಿಮ್ಮ ವೈಯುಕ್ತಿಕ ಅಭಿಪ್ರಾಯ ಹೇರದೆ ದೆಹಲಿಯ ಬೆಳವಣಿಗಳನ್ನು ಇಲ್ಲಿ ನೀಡುತ್ತಿದ್ದೀರಿ. ಯಾರೋ ಕೆಲವರು ತಮ್ಮ ಮೂಗಿನ‌ ನೇರಕ್ಕೆ ಅದು ಇಲ್ಲ ಎಂದು ಸಹಿಸದೆ ವೈಯಕ್ತಿಕ ನಿಂದನೆ ಮಾಡಿದರೆ ತಲೆ ಕೆಡಿಸಿಕೊಳ್ಳಬೇಡಿ'' ಎಂದು ಅಭಯ್ ಮನಗೋಳಿ ಎಂಬವರು ಬರೆದಿದ್ದಾರೆ.

ಭಾರತದಲ್ಲಿ ರೈತರನ್ನ ದಂಗೆ ಎಬ್ಬಿಸಿ ತಾನು ವಿದೇಶಕ್ಕೆ ಹಾರಿದ್ದಾನೆ ರಾಹುಲ್ ಗಾಂಧಿ ಎಂದು ನಾಗೇಂದ್ರ ಗೌಡ ಎಂಬವರು ತಿಳಿಸಿದ್ದಾರೆ.

''ಕೊಟ್ಟ ಕುದುರೆ ಏರವದವ ವೀರನೂ ಅಲ್ಲ, ಶೂರನೂ ಅಲ್ಲ. ತುಂಬಾ ಚೆನ್ನಾಗಿ ಮೂಡಿಬಂದಿದೆ ನಿಮ್ಮ ಅಂಕಣ. ದೇಶದಲ್ಲಿ ನಿಜವಾದ ಸಮಸ್ಯೆ ಇದ್ದಿದ್ದರೆ ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ದೇಶದಲ್ಲಿದ್ದು ವಿರೋಧಿಸುತ್ತಿದ್ದರು. ಯಾವುದೇ ಸಮಸ್ಯೆ ಇಲ್ಲದ ಕಾರಣಕ್ಕಾಗಿಯೇ ವಿದೇಶ ಪ್ರವಾಸ ಹೋಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಅರ್ಥವಾಗುತ್ತೆ'' ಎಂದು ಪ್ರದೀಪ್ ಮುಲ್ಲೂರು ಎಂಬವರು ಕಮೆಂಟ್ ಮಾಡಿದ್ದಾರೆ. 

ಇಂಡಿಯಾ ಗೇಟ್ ಅಂಕಣ ಕನ್ನಡ ಪ್ರಭ ದಲ್ಲಿ

Posted by Prashant Natu on Thursday, 7 January 2021

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News