ಜ್ಯೂಸ್ ಕುಡಿದು ಮಕ್ಕಳಿಬ್ಬರು ಮೃತಪಟ್ಟ ಬೆನ್ನಿಗೇ ಕೊನೆಯುಸಿರೆಳೆದ ತಾಯಿ

Update: 2021-01-09 12:47 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ: ಗಾಂಧಿ ಪಾರ್ಕ್ ನಲ್ಲಿ ಜ್ಯೂಸ್ ಕುಡಿದು ಇಬ್ಬರು ಮಕ್ಕಳು ಮೃತಪಟ್ಟ ಬೆನ್ನಿಗೆ, ತಾಯಿ ಕೂಡ ಕೊನೆಯುಸಿರೆಳೆದ ಘಟನೆ ಮೆಗ್ಗಾನ್ ಆಸ್ಪತ್ರೆಯ ಸಾಂತ್ವನ ಕೇಂದ್ರದಲ್ಲಿ ಶುಕ್ರವಾರ ನಡೆದಿದೆ.

ಗೀತಾ ಕೊನೆಯುಸಿರೆಳೆದ ಮಹಿಳೆ. ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿದ್ದ ಗೀತಾ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇವರಿಗೆ ಮೆಗ್ಗಾನ್ ಆಸ್ಪತ್ರೆಯ ಸಾಂತ್ವನ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಊಟ ತ್ಯಜಿಸಿದ್ದ ಗೀತಾ: ಮಕ್ಕಳು ಮೃತಪಟ್ಟ ಬೆನ್ನಲ್ಲೇ ಗೀತಾ ಅಸ್ವಸ್ಥರಾಗಿದ್ದರು. ಹಾಗಾಗಿ ಅವರನ್ನು ಮೆಗ್ಗಾನ್ ಆಸ್ಪತ್ರೆಯ ಸಾಂತ್ವಾನ ಕೇಂದ್ರಕ್ಕೆ ದಾಖಲು ಮಾಡಲಾಗಿತ್ತು. ಇಲ್ಲಿ ಗೀತಾ ಅವರು ಊಟ ತ್ಯಜಿಸಿದ್ದರು ಎಂದು ತಿಳಿದು ಬಂದಿದೆ. ವೈದ್ಯರು, ಸಾಂತ್ವನ ಕೇಂದ್ರದ ಸಿಬ್ಬಂದಿಗಳು ಎಷ್ಟೇ ಮನವೊಲಿಸಿದರೂ ಊಟ ಸೇವಿಸಿರಲಿಲ್ಲ ಎನ್ನಲಾಗಿದೆ.

ವಿಚಾರಣೆ ನಡೆದಿರಲಿಲ್ಲ: ಮಕ್ಕಳು ಮೃತಪಟ್ಟ ಬಗ್ಗೆ ಗೀತಾರನ್ನು ವಿಚಾರಣೆಗೆ ಪೊಲೀಸರು ಒಳಪಡಿಸಲು ಸಿದ್ಧರಿದ್ದರು. ಆದರೆ ಅವರ ಆರೋಗ್ಯ ಸ್ಥಿತಿ ಸರಿಯಿರಲಿಲ್ಲ. ಹೀಗಾಗಿ ಚಿಕಿತ್ಸೆ ಬಳಿಕ ತನಿಖೆ ನಡೆಸಲು ವೈದ್ಯರು ತಿಳಿಸಿದ್ದರು ಎನ್ನಲಾಗಿದೆ.

ವಿಷ ?: ಜನವರಿ 4 ರಂದು ತಾಯಿ ಗೀತಾಳೊಂದಿಗೆ ನಗರದ ಗಾಂಧಿ ಪಾರ್ಕ್ ಗೆ ಬಂದಿದ್ದ ಅಶ್ವಿನ್ (8),ಆಕಾಂಕ್ಷಾ(4) ಜ್ಯೂಸ್ ಸೇವಿಸಿದ್ದರು. ಕೆಲವೇ ಹೊತ್ತಿನಲ್ಲಿ ಮಕ್ಕಳಿಬ್ಬರು ಅಸ್ವಸ್ಥರಾಗಿ ಹಠಾತ್ ಕುಸಿದು ಬಿದ್ದಿದ್ದರು. ಕೂಡಲೇ ಮಕ್ಕಳಿಬ್ಬರನ್ನು ಚಿಕಿತ್ಸೆಗಾಗಿ ಖಾಸಗಿ ಕ್ಲಿನಿಕ್ ಗೆ ಕರೆತರಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಕ್ಕಳಿಬ್ಬರು ಮೃತಪಟ್ಟಿದ್ದರು.

ತಾಯಿಯೇ ಮಕ್ಕಳಿಬ್ಬರಿಗೆ ವಿಷ ಹಾಕಿದ್ದಾಳೆ ಎಂದು ಆರೋಪಿಸಲಾಗಿತ್ತು. ಮತ್ತೊಂದೆಡೆ ಜ್ಯೂಸ್ ಸೇವನೆಯಿಂದ ಫುಡ್ ಪಾಯ್ಸನ್ ಆಗಿದೆ ಎಂದು ಶಂಕಿಸಲಾಗಿತ್ತು. ಹಾಗಾಗಿ ಪೊಲೀಸರು ಸ್ಯಾಂಪಲ್ ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News