ಜ.11ರಿಂದ ಆಕಾಶವಾಣಿಯಲ್ಲಿ ‘ಕಲಿಯುತ್ತಾ ನಲಿಯೋಣ’ ಕಾರ್ಯಕ್ರಮ: ಸಚಿವ ಸುರೇಶ್ ಕುಮಾರ್

Update: 2021-01-09 14:45 GMT

ಬೆಂಗಳೂರು, ಜ.9: ಶಿಕ್ಷಣ ಇಲಾಖೆ, ಆಕಾಶವಾಣಿ ಮೂಲಕ ಜ.11ರಿಂದ ‘ಕಲಿಯುತ್ತಾ-ನಲಿಯೋಣ’ ಎಂಬ ಹೊಸ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.

ಒಂದನೆ ತರಗತಿಯಿಂದ ನಾಲ್ಕನೇ ತರಗತಿಯವರೆಗೆ ಇರುವ(ಆದರೆ ಶಾಲೆಗೆ ಹೋಗಲಾರದ) ಮಕ್ಕಳಿಗಾಗಿ ಇರುವ ನಲಿಕಲಿ ಮತ್ತು ಕಲಿನಲಿ ಕಾರ್ಯಕ್ರಮಗಳನ್ನು ಜ.11 ರಿಂದ ಎ.5ರ ವರೆಗೆ  ಆಕಾಶವಾಣಿ ಪ್ರಸಾರ ಮಾಡಲಿದೆ ಎಂದು ಅವರು ಹೇಳಿದ್ದಾರೆ.

ಪ್ರತಿವಾರ ಸೋಮವಾರದಿಂದ ಶುಕ್ರವಾರದವರೆಗೂ ಪ್ರತಿನಿತ್ಯ ಬೆಳಗ್ಗೆ 10 ಗಂಟೆಯಿಂದ 10.15ರವರೆಗೆ ಒಂದು ಮತ್ತು ಎರಡನೆ ತರಗತಿಗಳಿಗಾಗಿ ಹಾಗೂ 10.15 ರಿಂದ 10.30 ಗಂಟೆಯವರೆಗೂ 3 ಮತ್ತು 4ನೆ ತರಗತಿಗಳಿಗಾಗಿ ಹಾಡು, ಕಥೆ, ನಾಟಕ, ಸಂಭಾಷಣೆ, ಒಗಟು ಮತ್ತು ವಿವಿಧ ಆಸಕ್ತಿಕರ ಕಾರ್ಯಕ್ರಮಗಳ ಮೂಲಕ ಆಯಾ ತರಗತಿಗಳ ಮಕ್ಕಳ ಕಲಿಕೆ ಮುಂದುವರಿಯುವಂತೆ ಮಾಡಲು ಶಿಕ್ಷಣ ಇಲಾಖೆ ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಸುರೇಶ್ ಕುಮಾರ್ ವಿವರಿಸಿದ್ದಾರೆ.

ಈ ಕಾರ್ಯಕ್ರಮಗಳ ಮೂಲಕ ನಲಿ-ಕಲಿಯ ಆಶಯಗಳಾದ ಆಲಿಸುವಿಕೆ, ವಸ್ತು ಗುರುತಿಸುವಿಕೆ, ಸ್ವ ಕಲಿಕೆ, ಸಂತಸದಾಯಕ ಕಲಿಕೆ, ಶಬ್ದ ಪರಿಚಯ ಹೀಗೆ ಶಬ್ದಗಳ ಏರಿಳಿತದ ಮೂಲಕ ವಿಷಯಗಳನ್ನು ವಿನೂತನ ಮಾದರಿಯಲ್ಲಿ ತಿಳಿಸಲಾಗುತ್ತದೆ. ಒಂದರಿಂದ ನಾಲ್ಕನೆ ತರಗತಿಯವರೆಗೆ ಓದುತ್ತಿರುವ ಮಕ್ಕಳ ಎಲ್ಲ ಪೋಷಕರಿಗೆ ಈ ಕಾರ್ಯಕ್ರಮವನ್ನು ಮಕ್ಕಳೊಂದಿಗೆ ಆಲಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಅಲ್ಲಿ ಪ್ರಸಾರಗೊಳ್ಳುವ ಹಾಡು, ಕಥೆ ಇತ್ಯಾದಿಗಳನ್ನು ನಿಮ್ಮ ಮಕ್ಕಳಿಗೆ ಮತ್ತೊಮ್ಮೆ ಹೇಳುವುದರ ಮೂಲಕ ಹೇಳಿಸುವ ಮೂಲಕ ಮಕ್ಕಳಿಗೆ ನಲಿಯುವುದರ ಜೊತೆಗೆ ಕಲಿಯುವುದನ್ನು ಅಭ್ಯಾಸ ಮಾಡಿಸಿ ಎಂದು ಅವರು ಕೋರಿದ್ದಾರೆ.

ಮಕ್ಕಳು ಹೇಳಿದ ಕಥೆಗಳೂ ಪ್ರಸಾರ: ತಮ್ಮ ಮಕ್ಕಳಿಂದ ಯಾವುದಾದರೂ ಕಥೆ ಹಾಡು ಒಗಟು ಹೇಳಬಹುದಾದರೆ ವಾಟ್ಸಪ್ ನಂಬರ್ 9449417612ಗೆ ಕಳಿಸಿದರೆ ಅದನ್ನು ಪ್ರಸಾರ ಮಾಡಲಾಗುವುದು. ಈ ಕಾರ್ಯಕ್ರಮ ರಾಜ್ಯದ 13 ಆಕಾಶವಾಣಿ ಕೇಂದ್ರಗಳಿಂದ ಪ್ರಸಾರವಾಗುತ್ತದೆ. ಮತ್ತು ನಂತರ ಈ ಕಾರ್ಯಕ್ರಮಗಳು ಯೂಟ್ಯೂಬ್‍ನಲ್ಲಿ ಲಭ್ಯವಿರುತ್ತವೆ. ಈ ಎಳೆ ಕಂದಗಳ ಮನಸ್ಸುಗಳನ್ನು ವಿಕಸನಗೊಳಿಸುವ ಉದ್ದೇಶದಿಂದ ಪ್ರಾರಂಭಿಸಲಾಗುತ್ತಿರುವ ಈ ಕಾರ್ಯಕ್ರಮಕ್ಕೆ ತಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ಪೋಷಕರಲ್ಲಿ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News