ದಿಲ್ಲಿ ಹೋರಾಟ ಗೆದ್ದರೆ ಮಾತ್ರ ದೇಶದಲ್ಲಿ ರೈತ ಉಳಿಯುತ್ತಾನೆ: ಚಿಂತಕ ಶಿವಸುಂದರ್

Update: 2021-01-09 16:15 GMT

ಮೈಸೂರು,ಜ.9: ದಿಲ್ಲಿ ಹೋರಾಟ ಗೆದ್ದರೆ ದೇಶದಲ್ಲಿ ರೈತ ಉಳಿಯುತ್ತಾನೆ, ಒಂದು ವೇಳೆ ಸೋತರೆ ರೈತ ನಾಶವಾಗಲಿದ್ದಾನೆ ಎಂದು ಚಿಂತಕ ಶಿವಸುಂದರ್ ಅಭಿಪ್ರಾಯಿಸಿದರು.

ದೇಶಪ್ರೇಮಿ ಯುವಾಂದೋಲನ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ನೆಲೆಹಿನ್ನೆಲೆ ಸಂಯುಕ್ತಾಶ್ರಯದಲ್ಲಿ ರೈತ ಹೋರಾಟವನ್ನು ಬೆಂಬಲಿಸಿ ನಗರದ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ “ರೈತ ಆಂದೋಲನದ ಹಿನ್ನೆಲೆ ಮತ್ತು ಸತ್ಯಗಳು- ಕೃಷಿ ಕಾಯಿದೆಯ ಮಿಥ್ಯೆಗಳು” ವಿಷಯ ಕುರಿತ ವಿಚಾರ ಗೋಷ್ಠಿಯಲ್ಲಿ “ಕೃಷಿ ಕಾಯ್ದೆ ವಿರೋಧ ಯಾಕೆ” ಎಂಬ ವಿಷಯ ಕುರಿತು ಅವರು ಮಾತನಾಡಿದರು.

ದೇಶದ ಪ್ರತಿಯೊಬ್ಬ ರೈತನ ಪರವಾಗಿ ದಿಲ್ಲಿಯಲ್ಲಿ ರೈತರು ಹೋರಾಟ ನಡೆಸುತ್ತಿದ್ದಾರೆ. ಅಲ್ಲಿ ಅವರು ಗೆದ್ದರೆ ದೇಶದಲ್ಲೇ ರೈತರೊಬ್ಬರ ಗೆಲುವಾಗಲಿದೆ. ಇಲ್ಲವಾದರೆ ದೇಶದಲ್ಲಿ ರೈತ ಕಾರ್ಪೋರೆಟ್ ಕಂಪನಿಗಳ ಕಪಿಮುಷ್ಠಿಗೆ ಸಿಲುಕಿ ನಾಶವಾಗಲಿದ್ದಾನೆ. ಹೀಗಾಗಿ ಅವರ ಹೋರಾಟಕ್ಕೆ ನಾವು ಬೆಂಬಲ ಸೂಚಿಸಬೇಕಿದೆ. ಈ ನಿಟ್ಟಿನಲ್ಲಿ ಜ.26 ರಂದು ನಡೆಯುವ ಹೋರಾಟಕ್ಕೆ ನಾವೆಲ್ಲರೂ ಬೆಂಬಲಿಸಬೇಕಿದೆ ಎಂದರು. 

ಖಾಸಗಿ ಮಾರುಕಟ್ಟೆಗಳು ಎಂದೆಂದಿಗೂ ರೈತ ಪರವಾಗಿ ಬರುವುದಿಲ್ಲ. ಅಂಬಾನಿ ಎದುರು ಬಡ ರೈತ ಬೋರೆಗೌಡನ ದನಿ ಎತ್ತುವ ಪ್ರಶ್ನೆಯೇ ಬರುವುದಿಲ್ಲ. ಎಲ್ಲರೂ ಅಂಬಾನಿ, ಅದಾನಿ, ಟಾಟಾದವರ ಮಂಡಿಗಳಲ್ಲಿ ರೈತರು ನೇರವಾಗಿ ಮಾರಾಟ ಮಾಡಬಹುದು ಎಂಬ ಸಮರ್ಥನೆ ಕೃಷಿ ಕಾಯಿದೆಯಲ್ಲಿ ಹೇಳುತ್ತಿದ್ದಾರೆ. ಆದರೆ, ಅವರ ಕಂಪನಿಗಳು ಇದುವರೆಗೂ ಯಾವುದೇ ರೈತರ ಬೆಳೆಗೆ ನಿರ್ದಿಷ್ಟ ಬೆಲೆ ನಿಗದಿ ಪಡಿಸಿಲ್ಲ. ಎಪಿಎಂಸಿಯಲ್ಲಿ ನರಿಗಳ ಮೋಸಕ್ಕೆ ಒಳಗಾಗಿದ್ದ ರೈತರನ್ನು ಹುಲಿಯ ಬಾಯಿಗೆ ತಳ್ಳಿದಂತೆ ಆಗಿದೆ  ಎಂದು ಹೇಳಿದರು.

ಸ್ವಾತಂತ್ರ್ಯ ನಂತರ ಬಂದ ಎಫ್ ಕೆಸಿಸಿ ಹಾಗೂ ಎಪಿಎಂಸಿ ಎಲ್ಲವೂ ರೈತರ ಸಬಲೀಕರಣ ದೃಷ್ಟಿಯಿಂದ ಬಂದುದಾಗಿದೆ. ಆದರೆ ಇವುಗಳಿಂದಲೂ ರೈತ ಮೋಸ ಹೋಗುವುದು ಇಂದಿಗೂ ತಪ್ಪಿಲ್ಲ. ಹೀಗಿರುವಾಗ ಎಪಿಎಂಸಿಯಿಂದ ಹೊರಬಂದು ನೇರವಾಗಿ ಖಾಸಗಿ ಮಂಡಿ ಮಾರಾಟ ಮಾಡಬಹುದು ಎನ್ನುತ್ತಿದ್ದು, ಇದರಲ್ಲಿ ಬೆಲೆ ನಿಗದಿ, ಮಾರಾಟದರ ಮೊದಲಾದವುದರ ಬಗ್ಗೆ ಯಾವುದೇ ನಿರ್ದಿಷ್ಟ ಮಾನದಂಡವಿಲ್ಲ. ಇವರಿಬ್ಬರ ಮಧ್ಯೆ ಸರ್ಕಾರವು ಮಧ್ಯ ಪ್ರವೇಶಿಸುವುದಿಲ್ಲ. ಹೀಗಾದರೆ ರೈತರು ಅನ್ಯಾಯ ಆದರೆ ಯಾರನ್ನು ಪ್ರಶ್ನಿಸಬೇಕು. 15 ದಿನದ ಬಳಿಕ ಜಿಲ್ಲಾಧಿಕಾರಿ ಸಂಪರ್ಕಿಸಬೇಕೆಂಬ ನಿಯಮವಿದೆ. ಅಲ್ಲಿಯವರೆಗೂ ರೈತರ ಬೆಳೆಯ ಕಥೆ ಏನು? ಇವುಗಳೆಲ್ಲವೂ ರೈತರಿಗೆ ಮಾರಕವಾಗಿದ್ದು, ಇವುಗಳನ್ನು ಜನರು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

ದೇಶದಲ್ಲಿ ಜಿಯೋ, ಎರ್ಟೆಲ್ ಎದುರು ಬಿಎಸ್‍ಎನ್‍ಎಲ್ ನಾಶವಾಗುತ್ತಿದೆ. ದೇಶದ 50ಕ್ಕೂ ಹೆಚ್ಚು ರೈಲ್ವೆ ನಿಲ್ದಾಣ, ವಿಮಾನಗಳು ಅಂಬಾನಿ ಒಡೆತನದಲ್ಲಿವೆ. ಇದರ ಹಿಂದಿನ ಮರ್ಮವೇನು? ವಿದೇಶಗಳೊಂದಿಗಿನ ವಹಿವಾಟವನ್ನು ಸಂಪೂರ್ಣ ಹಿಡಿತದಲ್ಲಿ ಇಟ್ಟುಕೊಂಡು ಸಾರ್ವಭೌಮತ್ವ ಸಾಧಿಸಲು ಇಂತಹ ವಾಮಮಾರ್ಗ ಅನುಸರಿಸಲಾಗುತ್ತಿದೆ. ಇದರ ಭಾಗವಾಗಿ ಕೃಷಿ, ಎಪಿಎಂಸಿ ಕಾಯ್ದೆಯೂ ಇದ್ದು ಇದು ಜಾರಿಯಾದರೆ ರೈತರ ನಾಶ ಖಚಿತವಾಗಲಿದೆ. ಅಗತ್ಯ ವಸ್ತುಗಳ ಬೆಲೆಯೂ ಆಕಾಶಕ್ಕೇರಲಿದೆ ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿ ನಾಯಕ ಗುರುಪ್ರಸಾದ್ ಕೆರೆಗೋಡು, ನೆಲೆ ಹಿನ್ನೆಲೆ ಕಲಾಬಳಗದ ರಂಗಕರ್ಮಿ ಗೋಪಾಲಕೃಷ್ಣ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಅಧ್ಯಕ್ಷ ಬಡಗಲಪುರ ನಾಗೇಂದ್ರ, ನೆಲೆ ಹಿನ್ನಲೆ ಕಲಾ ಬಳಗದ ಶ್ರೀಧರ್, ದೇಶಪ್ರೇಮಿ ಯುವಾಂದೋಲನ ತಂಡದ ಸರೋವರ್, ಪುಷ್ಪ, ಮಮತಾ, ಮನೋಜ್, ತಾಲೂಕು ರೈತ ಸಂಘದ ಅಧ್ಯಕ್ಷ ಪಿ.ಮರಂಕಯ್ಯ, ಸ್ವರಾಜ್ ಇಂಡಿಯಾದ ಪುನೀತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮೂವರು ವ್ಯಕ್ತಿಗಳಿಂದ ದೇಶ ನಾಶ
ಅಂಬಾನಿಯಿಂದ ದೇಶದ ಆರ್ಥಿಕತೆ ನಾಶವಾದರೆ, ಮೋದಿಯಿಂದ ದೇಶದ ರಾಜಕೀಯ ವ್ಯವಸ್ಥೆ ಕೊಲೆಯಾಗಿದೆ. ಇನ್ನೂ ಇವೆಲ್ಲವನ್ನೂ ಸಮರ್ಥಿಸಿಕೊಳ್ಳುವ ಅರ್ನಬ್ ಗೋಸಾಮಿಯಿಂದ ಪ್ರಜಾಪ್ರಭುತ್ವದ ಪತ್ರಿಕಾರಂಗ ನಾಶಗೊಳಿಸುವ ಮೂಲಕ ದೇಶದ ಕೊಲೆಯನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ವ್ಯಕ್ತಿಗತ ಭಕ್ತಿಯ ಪರಕಾಷ್ಠೆ ಕೊರೋನ ಕಾಲದಲ್ಲಿಯೂ ಗಂಟೆ ಬಾರಿಸಿ, ಜಾಗಟೆ ಹೊಡೆದವರನ್ನು ಸಮರ್ಥಿಸಿಕೊಳ್ಳುವ ದುಸ್ಥಿತಿಗೆ ದೇಶ ಹೋಗಿದೆ.  
-ಶಿವಸುಂದರ್, ಚಿಂತಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News