ನಾನು ಮುಖ್ಯಮಂತ್ರಿ ಸ್ಥಾನದಿಂದ ಯಾವಾಗ ಇಳಿಯುತ್ತೇನೆ ಎಂದು ಸಿದ್ದರಾಮಯ್ಯ ಹೇಳಲಿ : ಯಡಿಯೂರಪ್ಪ
Update: 2021-01-11 07:05 GMT
ಮೈಸೂರು : ನಾನು ಮುಖ್ಯಮಂತ್ರಿ ಸ್ಥಾನದಿಂದ ಯಾವಾಗ ಇಳಿಯುತ್ತೇನೆ ಎಂದು ಸಿದ್ದರಾಮಯ್ಯ ಹೇಳಲಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದರು.
ನಂಜನಗೂಡು ತಾಲ್ಲೂಕು ಸುತ್ತೂರಿನಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಪದೇ ಪದೇ ಸಿಎಂ ಬದಲಾಗುತ್ತಾರೆ ಎಂದು ಹೇಳುತ್ತಿದ್ದಾರೆ, ನಾನು ಯಾವಾಗ ಬದಲಾಗುತ್ತೇನೆ ಎಂದು ನೀವು ಮತ್ತು ಸಿದ್ದರಾಮಯ್ಯನವರು ದಿನಾಂಕ ನಿಗದಿಪಡಿಸಿ ಎಂದು ಹರಿಹಾಯ್ದರು.
ಇದೇ ತಿಂಗಳ 13 ಅಥವಾ 14 ರಂದು ಸಂಪುಟ ವಿಸ್ತರಣೆ ನಿಶ್ಚಿತ. ಅದು ಪುನರ್ ರಚನೆಯೋ ಅಥವಾ ವಿಸ್ತರಣೆಯೋ ಎಂದು ಆ ದಿನ ಗೊತ್ತಾಗಲಿದೆ. 13ರ ಮಧ್ಯಾಹ್ನ ಅಮಾವಾಸ್ಯೆ ಕಳೆಯುತ್ತದೆ. ನಂತರ ಒಳ್ಳೆಯ ಸಮಯ ಇದೆ ಎಂದು ಹೇಳಿದ್ದಾರೆ. ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಂದ ಸಮಯ ಕೇಳಿಕೊಂಡು ನಿಮಗೂ ಸಮಯ ತಿಳಿಸುತ್ತೇವೆ ಎಂದು ಹೇಳಿದರು.
ನಂತರ ಮೈಸೂರುಗೆ ಆಗಮಿಸಿ ಚಾಮುಂಡಿ ಬೆಟ್ಟಕ್ಕೆ ತೆರಳಿ ಶ್ರೀಚಾಮುಂಡೇಶ್ವರಿಯ ದರ್ಶನ ಪಡೆದರು.