ಸಂಪುಟದಿಂದ ನನ್ನನ್ನು ಕೈಬಿಡಲು ಸಾಧ್ಯವಿಲ್ಲ: ಅಬಕಾರಿ ಸಚಿವ ಎಚ್.ನಾಗೇಶ್

Update: 2021-01-11 12:21 GMT

ಬೆಂಗಳೂರು, ಜ. 11: ‘ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ನಾನೇ ಪ್ರಮುಖ ಕಾರಣ. ಕಷ್ಟ ಕಾಲದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕೈ ಹಿಡಿದಿದ್ದೇನೆ. ಹೀಗಾಗಿ ನನ್ನನ್ನು ಸಚಿವ ಸಂಪುಟದಿಂದ ಕೈಬಿಡುವುದಿಲ್ಲ' ಎಂಬ ವಿಶ್ವಾಸವಿದೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ಇಂದಿಲಿ ಭರವಸೆ ವ್ಯಕ್ತಪಡಿಸಿದ್ದಾರೆ.

ಸೋಮವಾರ ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ ನಾನು ಸಚಿವನಾಗಿದ್ದೆ. ಮೊದಲು ರಾಜೀನಾಮೆ ನೀಡಿ ಮೈತ್ರಿ ಸರಕಾರ ಪತನಕ್ಕೆ ಕಾರಣಕರ್ತ ನಾನೇ. ಸಂಪುಟದಿಂದ ನನ್ನನ್ನು ಕೈಬಿಡಲು ಸಾಧ್ಯವಿಲ್ಲ ಎಂದರು.

ನಾನು ರಾಜೀನಾಮೆ ನೀಡಿದ್ದರಿಂದಲೇ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ನಾನು ಬಿಎಸ್‍ವೈ ಅವರ ಸಂಪುಟದಲ್ಲಿ ಇನ್ನೂ ಎರಡೂವರೆ ವರ್ಷಗಳ ಕಾಲ ಮಂತ್ರಿಯಾಗಿರಲಿದ್ದೇನೆ. ನನ್ನನ್ನು ಸಂಪುಟದಿಂದ ಕೈಬಿಡುವ ಪ್ರಸಂಗ ಬಂದರೆ ಸಿಎಂ ಜತೆ ಸಮಾಲೋಚನೆ ನಡೆಸುತ್ತಿದೆ. ನನಗೆ ಯಡಿಯೂರಪ್ಪನವರ ಮೇಲೆ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ವರಿಷ್ಠರು ಏನು ಸೂಚನೆ ನೀಡಿದ್ದಾರೆಂಬುದು ನನಗೆ ಗೊತ್ತಿಲ್ಲ. ಈಗಲೂ ಮಂತ್ರಿಯಾಗಿಯೇ ಮುಂದುವರೆಯುತ್ತಿದ್ದೇನೆ. ಯಡಿಯೂರಪ್ಪನವರು ಮೂರೂವರೆ ವರ್ಷ ಮಂತ್ರಿಯಾಗಿರುವೆ ಎಂದು ಹೇಳಿದ್ದಾರೆ. ಕಷ್ಟದಲ್ಲಿ ನಾನು ಬಿಜೆಪಿಯನ್ನು ಕೈಹಿಡಿದಿದ್ದೇನೆ. ಆದರೆ, ನನಗೆ ಮಾಧ್ಯಮಗಳಲ್ಲಿ ಬಂದ ಸುದ್ದಿ ನೋಡಿ ಆಚ್ಚರಿಯಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News