ತಂದೆಯ ಹತ್ಯೆ ಪ್ರಕರಣದಲ್ಲಿ ಕೈ ಚೆಲ್ಲಿದ್ದ ಪೊಲೀಸರು: ಆರೋಪಿಯನ್ನು ಪತ್ತೆ ಹಚ್ಚಿದ ಮಕ್ಕಳು

Update: 2021-01-12 14:20 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ, ಜ.12: ಒಂಬತ್ತು ವರ್ಷಗಳ ಹಿಂದೆ ತಮ್ಮ ತಂದೆಯನ್ನು ಕೊಲೆಗೈದು ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಹತ್ಯೆಯಾದ ವ್ಯಕ್ತಿಯ ಮಕ್ಕಳೇ ಪತ್ತೆಹಚ್ಚಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ  ನಡೆದಿದೆ.

ಕೊಲೆಗಾರನ ಪತ್ತೆಹಚ್ಚಲು ಪೊಲೀಸರು ಕೈಚೆಲ್ಲಿದಾಗ ಮಕ್ಕಳೇ ಕೇರಳಕ್ಕೆ ತೆರಳಿ ಆತನನ್ನು ಹುಡುಕಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಶೇಷವೆಂದರೆ ಆರೋಪಿಯನ್ನು ನಿರ್ದೋಷಿಯೆಂದು ಜಿಲ್ಲಾ ನ್ಯಾಯಾಲಯ ತೀರ್ಪಿತ್ತ ಬಳಿಕ, ಹತ್ಯೆಯಾದವನ ಮಕ್ಕಳು ಧೃತಿಗೆಡದೆ ಹೈಕೋರ್ಟ್ ‌ನಲ್ಲಿ ಆತನಿಗೆ ಜೀವಾವಧಿ ಶಿಕ್ಷೆಯಾಗುವಂತೆ ಹೋರಾಟ ನಡೆಸಿದ್ದರು.

ಏನಿದು ಘಟನೆ?
ಸಾಗರ ತಾಲೂಕಿನ ಪಡವಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆರೋಡಿ ಗ್ರಾಮದ ಜೋಸ್ ಸಿ.ಕಪ್ಪನ್ 9 ವರ್ಷದ ಹಿಂದೆ ಕೊಲೆಯಾಗಿದ್ದು, ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಸಿಜು ಕುರಿಯನ್ ನನ್ನು ಕೇರಳದ ಪಾಲಕ್ಕಾಡ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಕುಟುಂಬದವರು ಮತ್ತು ಮಕ್ಕಳು ವಿದೇಶದಲ್ಲಿದ್ದ ಹಿನ್ನೆಲೆಯಲ್ಲಿ ಕೆರೋಡಿ ಗ್ರಾಮದ ತೋಟದ ಮಾಲಕ ಜೋಸ್ ಸಿ.ಕಪ್ಪನ್ ಒಬ್ಬರೇ ವಾಸವಾಗಿದ್ದರು. ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಿಜು ಕುರಿಯನ್, 2012ರಲ್ಲಿ ಮಾಲಕನನ್ನು ಕೊಲೆ ಮಾಡಿ ಕೊಟ್ಟಿಗೆ ಹಿಂಭಾಗದಲ್ಲಿದ್ದ ಗೊಬ್ಬರದ ಗುಂಡಿಯಲ್ಲಿ ಹೂತುಹಾಕಿದ್ದ ಎನ್ನಲಾಗಿದೆ.

ಜೋಸ್ ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಹಬ್ಬಿದ ಕೆಲವೇ ದಿನಗಳಲ್ಲಿ ನೌಕರ ಸಿಜು, ಆಸ್ತಿ ಮಾರಾಟ ಮಾಡಲು ಹಲವರ ಬಳಿ ವಿಚಾರಣೆ ಮಾಡುತ್ತಿದ್ದ. ಸ್ಥಳೀಯರು ಅನುಮಾನಗೊಂಡು ಪೊಲೀಸರಿಗೆ ತಿಳಿಸಿದ್ದರು. ಅಂದಿನ ಡಿವೈಎಸ್‌ಪಿ ಡಾ. ಶರಣಪ್ಪ ನೇತೃತ್ವದ ತಂಡ ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ಆದರೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸರಿಯಾದ ಸಾಕ್ಷ್ಯಾಧಾರಗಳು ದೊರಕದ ಕಾರಣ ಆರೋಪಿ 2013ರಲ್ಲಿ ಬಿಡುಗಡೆಯಾಗಿದ್ದ.

ಸರಕಾರದ ಪರವಾಗಿ ವಾದ ಮಂಡಿಸಿದ್ದ ಸರಕಾರಿ ಅಭಿಯೋಜಕ ವಿ.ಜಿ.ಯಳಗೇರಿ ಅವರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಶಿಫಾರಸು ಮಾಡಿದ್ದರು. ಅಲ್ಲಿ 2020ರ ಮಾರ್ಚ್ 20ರಂದು ತೀರ್ಪು ಪ್ರಕಟಗೊಂಡಿದ್ದು, ಕೊಲೆ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿ ಶಿಜು ಕುರಿಯನ್‌ಗೆ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಲಾಗಿತ್ತು.

ಕೈಚೆಲ್ಲಿದ್ದ ಪೊಲೀಸರು!
ಹೈಕೋರ್ಟ್ ‌ನಲ್ಲಿ ತೀರ್ಪು ಪ್ರಕಟಗೊಳ್ಳುವ ಮೊದಲೇ ಆರೋಪಿ ಸಿಜು ಕೇರಳಕ್ಕೆ ಪರಾರಿಯಾಗಿದ್ದ. ಆದರೆ ಪೊಲೀಸರು ಕೋವಿಡ್ ಹಿನ್ನೆಲೆಯಲ್ಲಿ ಆತನ ಪತ್ತೆ ಕಷ್ಟಕರ ಎಂದು ಕೈಚೆಲ್ಲಿದ್ದರು ಎನ್ನಲಾಗಿದೆ.

ರಾಜ್ಯದ ಗಡಿ ತೆರವುಗೊಂಡ ಬೆನ್ನಲ್ಲೆ ಜೋಸ್‌ನ ಇಬ್ಬರು ಮಕ್ಕಳಾದ ಸಾಜಿತ್ ಮತ್ತು ರಣಜಿ ಸ್ವತಃ ಕೇರಳಕ್ಕೆ ಹೋಗಿ ಆತನ ಇರುವಿಕೆಯನ್ನು ಪತ್ತೆ ಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಳೆದ ಶುಕ್ರವಾರ ಜೋಸ್ ಮಕ್ಕಳೊಂದಿಗೆ ಕೇರಳಕ್ಕೆ ತಲುಪಿದ ಸಾಗರ ಪೊಲೀಸರು, ಕೊಲೆಗಾರನನ್ನು ಬಂಧಿಸಿ ಸಾಗರಕ್ಕೆ ಕರೆತಂದಿದ್ದು, ಉಪವಿಭಾಗೀಯ ಆಸ್ಪತ್ರೆಯಲ್ಲಿ ರವಿವಾರ ಕೋವಿಡ್, ಇನ್ನಿತರೆ ಪರೀಕ್ಷೆ ನಡೆಸಿ ನ್ಯಾಯಾಧೀಶರ ಎದುರು ಹಾಜರು ಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News