'ಅನ್ಯ ರಾಜ್ಯದ ನ್ಯಾಯಮೂರ್ತಿ ವಿಚಾರಣೆ ನಡೆಸಲಿ' ಎಂದ ಅರ್ಜಿದಾರನಿಗೆ 1 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್

Update: 2021-01-12 16:35 GMT

ಬೆಂಗಳೂರು, ಜ.12: ಅನ್ಯ ರಾಜ್ಯದ ನ್ಯಾಯಮೂರ್ತಿಗಳು ತನ್ನ ಪ್ರಕರಣವನ್ನು ವಿಚಾರಣೆ ನಡೆಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಗೆ ಹೈಕೋರ್ಟ್ 1 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.

ಮೈಸೂರಿನ ಸೋಸಲೆ ವ್ಯಾಸರಾಜ ಮಠದ ವಿರುದ್ಧ ಕೆಲ ಆರೋಪಗಳನ್ನು ಮಾಡಿ ಅರ್ಜಿ ಸಲ್ಲಿಸಿದ್ದ ವಿ.ಗುರುರಾಜ್ ಎಂಬವರು ತಮ್ಮ ಅರ್ಜಿಯನ್ನು ರಾಜ್ಯದ ನ್ಯಾಯಮೂರ್ತಿಗಳು ನಡೆಸಬಾರದು, ಅನ್ಯ ರಾಜ್ಯದಿಂದ ಬಂದಿರುವ ನ್ಯಾಯಮೂರ್ತಿಗಳು ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದ್ದರು. ಈ ಅರ್ಜಿಯನ್ನು ಮಂಗಳವಾರ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ನ್ಯಾಯಮೂರ್ತಿಗಳ ವಿರುದ್ಧ ಇಂಥ ಅನುಮಾನ ವ್ಯಕ್ತಪಡಿಸುವುದು ಹಾಗೂ ನಂಬಿಕೆ ಇಲ್ಲದಂತೆ ವರ್ತಿಸುವುದು ಸರಿಯಲ್ಲ. ಜತೆಗೆ, ಇದೊಂದು ಆಕ್ಷೇಪಾರ್ಹ ನಡವಳಿಕೆ. ಹೊರ ರಾಜ್ಯದಿಂದ ಬಂದ ನ್ಯಾಯಮೂರ್ತಿಗಳೂ ಕೂಡ ಇಲ್ಲಿಗೆ ಬಂದು, ವಾಸವಿದ್ದು ಕೆಲಸ ಪ್ರಾರಂಭಿಸಿದ ಮೇಲೆ ಇಲ್ಲಿನವರೇ ಆಗುತ್ತಾರೆ. ಹೀಗಾಗಿ, ಅನಗತ್ಯವಾಗಿ ನ್ಯಾಯಮೂರ್ತಿಗಳ ಮೇಲೆ ಅನುಮಾನ ವ್ಯಕ್ತಪಡಿಸುವುದು ನ್ಯಾಯಾಂಗ ನಿಂದನೆಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಪೀಠ, ಅರ್ಜಿದಾರರಿಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿತು.

ದಂಡದ ಹಣವನ್ನು ಬೀದಿ ಬದಿ ಆಟಿಕೆ ವಸ್ತುಗಳನ್ನು ಮಾರಾಟ ಮಾಡುವ ಮಕ್ಕಳ ಕಲ್ಯಾಣಕ್ಕೆ ಬಳಸಿಕೊಳ್ಳುವಂತೆ ನಿರ್ದೇಶಿಸಿದ ಪೀಠ, ಅರ್ಜಿದಾರರ ಪರ ವಕಾಲತ್ತು ಹಾಕಿದ್ದ ವಕೀಲರಿಗೂ ತರಾಟೆಗೆ ತೆಗೆದುಕೊಂಡಿತು. ವಕೀಲರಾಗಿ ನ್ಯಾಯಾಲಯವನ್ನು ಗೌರವಿಸಬೇಕು. ಹಾಗೂ ಗೌರವ ಮೂಡುವಂತೆ ಕಕ್ಷೀದಾರರ ಜೊತೆ ನಡೆದುಕೊಳ್ಳಬೇಕು. 9 ವರ್ಷ ಅನುಭವವಿದ್ದೂ ಹೀಗೆ ಅರ್ಜಿದಾರರ ತಾಳಕ್ಕೆ ತಕ್ಕಂತೆ ವರ್ತಿಸಿ, ಅವರ ಕೋರಿಕೆ ಒಳಗೊಂಡ ಅರ್ಜಿಗೆ ಸಹಿ ಮಾಡಿರುವುದು ಸೂಕ್ತವಲ್ಲ ಎಂದು ಎಚ್ಚರಿಕೆ ನೀಡಿತು. ಜತೆಗೆ ಮುಂದೆ ಇಂತಹ ಮಾದರಿಯ ಪ್ರಕರಣಗಳು ಬಂದಾಗ ಎಚ್ಚರಿಕೆಯಿಂದ ಹೆಜ್ಜೆ ಇಡುವುಂತೆ ತಿಳಿ ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News