ಈದ್ಗಾ ಮೈದಾನದ ಆವರಣದಲ್ಲಿ ಬಿಜೆಪಿ ಬಾವುಟ ಕಟ್ಟಲು ಯತ್ನ: ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿಗೆ ಹಲ್ಲೆ

Update: 2021-01-12 16:40 GMT

ಚಿಕ್ಕಮಗಳೂರು, ಜ.12: ನಗರದ ವಿಜಯಪುರ ಬಡಾವಣೆಯಲ್ಲಿರುವ ಈದ್ಗಾ ಮೈದಾನದ ಆವರಣದಲ್ಲಿ ಬಿಜೆಪಿಯ ಜನಸೇವಕ ಕಾರ್ಯಕ್ರಮದ ಬಾವುಟ ಕಟ್ಟುವ ವಿಚಾರದಲ್ಲಿ ಬಿಜೆಪಿ ಯುವ ಮೋರ್ಚಾದ ಕಾರ್ಯದರ್ಶಿ ಹಾಗೂ ಯುವಕರ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಹಲ್ಲೆ ಮಾಡಿಕೊಂಡಿರುವ ಘಟನೆ ಮಂಗಳವಾರ ಸಂಜೆ ನಡೆದಿದ್ದು, ಘಟನೆಯಲ್ಲಿ ಬಿಜೆಪಿ ಮುಖಂಡ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬುಧವಾರ ನಗರದ ವಿಜಯಪುರ ಬಡಾವಣೆಯ ಒಕ್ಕಲಿಗರ ಸಮುದಾಯ ಭವನದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಗ್ರಾಪಂ ಸದಸ್ಯರಿಗೆ ಜನಸೇವಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದ ಅಂಗವಾಗಿ ನಗರದ ಮಂಗಳವಾರ ಸಂಜೆ ವೇಳೆ ಬಿಜೆಪಿ ಯುವ ಮೋರ್ಚಾದ ಕಾರ್ಯದರ್ಶಿ ಕೌಶಿಕ್ ಎಂಬವರು ವಿಜಯಪುರ ಬಡಾವಣೆಯಲ್ಲಿರುವ ಈದ್ಗಾ ಮೈದಾನದ ಆವರಣದಲ್ಲಿ ಬಾವುಟ ಕಟ್ಟಿದ್ದಾರೆ ಎನ್ನಲಾಗಿದೆ. ಇದನ್ನು ಯುವಕರ ತಂಡ ಪ್ರಶ್ನಿಸಿ ಬಾವುಟ ಕಟ್ಟದಂತೆ ತಿಳಿಸಿದ್ದಾರೆ. ಆದರೆ ಬಿಜೆಪಿ ಕಾರ್ಯಕರ್ತ ಈದ್ಗಾ ಮೈದಾನದ ಬೇಲಿಯ ಕಂಬವೊಂದಕ್ಕೆ ಬಾವುಟ ಕಟ್ಟಿದ್ದು, ಇದಕ್ಕೆ ಯುವಕರ ಗುಂಪು ಕಾರ್ಯಕರ್ತನೊಂದಿಗೆ ಜಗಳ ಮಾಡಿದ್ದಾರೆ. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ ಸ್ಥಳಕ್ಕೆ ಆಗಮಿಸಿ ಬಾವುಟ ತೆರವು ಮಾಡಿ ಹೋಗಿದ್ದಾರೆ. ಆದರೆ ಯುವಕರ ತಂಡ ಕೌಶಿಕ್‍ನೊಂದಿಗೆ ಜಗಳವಾಡಿ ಪರಸ್ಪರ ಹೊಡೆದಾಡಿದ್ದು, ಕೌಶಿಕ್ ಗಾಯಗೊಂಡಿದ್ದಾನೆಂದು ಹೇಳಲಾಗುತ್ತಿದೆ.

ಗಾಯಗೊಂಡ ಬಿಜೆಪಿ ಕಾರ್ಯಕರ್ತ ಕೌಶಿಕ್ ಆಸ್ಪತ್ರೆಗೆ ದಾಖಲಾಗಿದ್ದು, ಹಲ್ಲೆ ಮಾಡಿದ ಯುವಕರ ವಿರುದ್ಧ ನಗರದ ಬಸವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆದರೆ ದೂರು ನೀಡಿದ್ದರೂ ಹಲ್ಲೆ ಮಾಡಿದ ಯುವಕರನ್ನು ಪೊಲೀಸರು ಬಂಧಿಸಿಲ್ಲ ಎಂದು ಆರೋಪಿಸಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ವಿಜಯಪುರ ಬಡಾವಣೆಯ ಜೆವಿಎಸ್ ಶಾಲೆ ಎದುರು ಧರಣಿ ನಡೆಸಿದ್ದಾರೆ. ಈ ವೇಳೆ ವ್ಯಕ್ತಿಯೋರ್ವ ಧರಣಿಯ ವಿಡಿಯೋ ಮಾಡುತ್ತಿದ್ದಾನೆಂದು ಆರೋಪಿಸಿ ಆತನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆಂದು ಹೇಳಲಾಗುತ್ತಿದೆ.

ಬಳಿಕ ಸ್ಥಳಕ್ಕೆ ಆಗಮಿಸಿದ ಎಸ್ಪಿ ಹಲ್ಲೆ ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವ ಭರವಸೆ ನೀಡಿದ್ದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಸ್ಥಳದಲ್ಲಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಘಟನೆ ಸಂಬಂಧ ಬವಸವಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ನಾಲ್ವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ.

ಈದ್ಗಾ ಮೈದಾನದ ಆವರಣದಲ್ಲಿ ಬಿಜೆಪಿ ಪಕ್ಷದ ಬಾವುಟ ಕಟ್ಟುವ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತ ಹಾಗೂ ಕೆಲ ಯುವಕರ ನಡುವೆ ಜಗಳವಾಗಿದೆ. ಘಟನೆಯಲ್ಲಿ ಬಿಜೆಪಿ ಕಾರ್ಯಕರ್ತನೋರ್ವ ಗಾಯಗೊಂಡಿದ್ದಾನೆ. ಹಲ್ಲೆ ಮಾಡಿದ ಯುವಕರನ್ನು ಬಂಧಿಸಿದ್ದೇವೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. 

- ಅಕ್ಷಯ್ ಮಚೀಂದ್ರ, ಎಸ್ಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News