ಯಡಿಯೂರಪ್ಪ ಮಂತ್ರಿ ಮಂಡಲ ಭ್ರಷ್ಟರ ಕೂಟ: ವಾಟಾಳ್ ನಾಗರಾಜ್ ವಾಗ್ದಾಳಿ

Update: 2021-01-12 18:04 GMT

ಮೈಸೂರು,ಜ.12: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂತ್ರಿಮಂಡಲ ಭ್ರಷ್ಟರ ಕೂಟ. ಶಾಸಕರನ್ನು ಖರೀದಿಸಿ ಅವರನ್ನು ಸಚಿವರನ್ನಾಗಿಸುವ ಮೂಲಕ ಕೆಟ್ಟ ಆಡಳಿತ ನಡೆಸುತ್ತಿದ್ದಾರೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದರು.

ನಗರದ ಆರ್ಡಿಂಜ್ ವೃತ್ತದಲ್ಲಿ ಮಂಗಳವಾರ ತಾಂತ್ರಿಕ ವಿದ್ಯಾರ್ಥಿಗಳಿಗೆ ಆನ್ಲೈನ್ ಪರೀಕ್ಷೆ ನಡೆಸುವಂತೆ ಒತ್ತಾಯಿಸಿ, ಪ್ರತಿಭಟನೆ ನಡೆಸಿದ ಅವರು, ರಾಜ್ಯ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಏಜೆಂಟರಂತೆ ವರ್ತಿಸುತ್ತಿದೆ. ಆನ್‍ಲೈನ್ ನಲ್ಲಿ ಪಾಠ ಮಾಡಿ, ಪರೀಕ್ಷೆ ನಡೆಸುವಂತೆ ಒತ್ತಾಯಿಸಿದರು.

ಯಡಿಯೂರಪ್ಪನವರಿಗೆ ವಿದ್ಯಾರ್ಥಿಗಳ ಕಷ್ಟದ ಅರಿವಿಲ್ಲ. ಮಂತ್ರಿಮಂಡಲದಲ್ಲಿ ಭ್ರಷ್ಟರ ಕೂಟ ರಚನೆ ಮಾಡಿಕೊಂಡು ಆಡಳಿತ ನಡೆಸುತ್ತಿದ್ದಾರೆ. ಯೋಗ್ಯತೆ ಇಲ್ಲದವರನ್ನು ಸಚಿವರನ್ನಾಗಿ ಮಾಡಿದ್ದಾರೆ. ಮಂತ್ರಿಮಂಡಲದ ಗೌರವ, ಗಾಂಭೀರ್ಯತೆ ಯಾರಲ್ಲಿಯೂ ಕಾಣುತ್ತಿಲ್ಲ. ಪ್ರಜಾಪ್ರಭುತ್ವದ ಬಗ್ಗೆ ಗೌರವ ಇಲ್ಲ, ಪಕ್ಷಾಂತರಿಗಳನ್ನು ಕಟ್ಟಿಕೊಂಡು ಆಡಳಿತ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯದ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರಿಗೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇಲ್ಲ, ಇನ್ನೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಕಾಶದಿಂದ ಕೆಳಗಿಳಿದು ಬಂದವರ ರೀತಿ ಮಾತನಾಡುತ್ತಾರೆ ಎಂದು ಹರಿಹಾಯ್ದರು.

ರಾಜ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ವಂತಿಗೆ ವಸೂಲಿಗೆ ನಿಂತಿವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಖಾಸಗಿ ಶಿಕ್ಷಣ ಸಂಸ್ಥೆಗಳ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಖಾಸಗಿ ಸಂಸ್ಥೆಗಳಿಗೆ ಇವರ ಬೆಂಬಲ ಇದೆ. ವಂತಿಗೆ ವಸೂಲಿಯನ್ನು ಖಾಸಗಿ ಸಂಸ್ಥೆಗಳು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಪಕ್ಷಾಂತರಿಗಳನ್ನು ಸೇರಿಸಿಕೊಂಡು ಮಂತ್ರಿಮಂಡಲವನ್ನು 3 ವರ್ಷದ ಬಳಿಕ ವಿಸ್ತರಣೆ ಮಾಡುತ್ತಿದ್ದಾರೆ. ದಿಕ್ಕೆಟ್ಟ ಆಡಳಿತ, ವ್ಯಾಪಾರಿ ಆಡಳಿತದ ಸರ್ಕಾರ ಇದು. ಪಕ್ಷಾಂತರದ ಮಹಾಪ್ರಭು ಎಂದು ಯಡಿಯೂರಪ್ಪ ವಿರುದ್ಧ ವಾಟಾಳ್ ನಾಗರಾಜ್ ಕಿಡಿಕಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News