ಸರಕಾರದ ಜನ ವಿರೋಧಿ ನೀತಿ ಖಂಡಿಸಿ ಜ.20ರಂದು 'ರಾಜಭವನ ಚಲೋ': ಡಿ.ಕೆ.ಶಿವಕುಮಾರ್

Update: 2021-01-14 14:25 GMT

ಬೆಂಗಳೂರು, ಜ. 14: ‘ರೈತರಿಗೆ ಮಾರಕವಾಗಿರುವ ಕೃಷಿ ಕರಾಳ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ, ವಿದ್ಯುತ್, ಆಸ್ತಿ ತೆರಿಗೆ, ಇಂಧನ ಬೆಲೆ ಏರಿಕೆಯಂತಹ ಸರಕಾರದ ಜನ ವಿರೋಧಿ ನಿರ್ಧಾರ ಖಂಡಿಸಿ ಇದೇ 20ರಂದು ರಾಜಭವನ ಚಲೋ ಹಮ್ಮಿಕೊಳ್ಳಲಾಗಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಗುರುವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಸರಕಾರದ ಕೃಷಿ ಕರಾಳ ಕಾಯ್ದೆ ವಿರುದ್ಧ ಇಡೀ ದೇಶದ ರೈತರು ವಿಶ್ವವೇ ಗಮನಿಸುವಂತಹ ದೊಡ್ಡಮಟ್ಟದ ಹೋರಾಟ ನಡೆಸುತ್ತಿದ್ದಾರೆ. ಸುಪ್ರೀಂಕೋರ್ಟ್ ರೈತರ ನೋವು ಅರಿತು ಈ ಕಾಯ್ದೆಗೆ ತಾತ್ಕಾಲಿಕ ತಡೆ ನೀಡಿದೆ. ಸುಪ್ರೀಂಕೋರ್ಟ್ ರಚಿಸಿರುವ ಸಮಿತಿ ಬಗ್ಗೆ ನಮ್ಮ ಪಕ್ಷ ಈಗಾಗಲೇ ತನ್ನ ಅಭಿಪ್ರಾಯ ತಿಳಿಸಿದೆ. ತಡೆಯಾಜ್ಞೆ ರೈತರಿಗೆ ಸಮಾಧಾನ ತಂದಿಲ್ಲ. ಹೀಗಾಗಿ ಮುಂದೆಯೂ ರೈತರ ಪರವಾಗಿ ಕಾಂಗ್ರೆಸ್ ನಿಲ್ಲಲಿದೆ ಎಂದರು.

ಜ.15ಕ್ಕೆ ರಾಷ್ಟ್ರಾದ್ಯಂತ ರೈತರಿಗೆ ಬೆಂಬಲವಾಗಿ ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಆಂದೋಲನ ಮಾಡುತ್ತಿದೆ. ಎಲ್ಲ ರಾಜ್ಯಗಳಲ್ಲಿ ರಾಜಭವನ ಮುತ್ತಿಗೆ ನಡೆಯಲಿದೆ. ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ಈ ಕರಾಳ ಕಾಯ್ದೆ ಹಿಂಪಡೆಯಲು ಆಗ್ರಹಿಸಲಾಗುವುದು. ರಾಜ್ಯದಲ್ಲಿ ದಿಲ್ಲಿ ನಾಯಕರೊಂದಿಗೆ ಚರ್ಚಿಸಿ ರೈತರಿಗೆ ಶಕ್ತಿ ತುಂಬಲು ಇದೇ 20ರಂದು ಬೃಹತ್ ಚಳುವಳಿ ಹಮ್ಮಿಕೊಂಡಿದ್ದು, ಫ್ರೀಡಂ ಪಾರ್ಕ್‍ನಿಂದ ರಾಜಭವನದವರೆಗೆ ಮೆರವಣಿಗೆ ನಡೆಯಲಿದೆ. ಜತೆಗೆ ರಾಜಭವನ ಮುತ್ತಿಗೆ ಹಾಕುತ್ತೇವೆ. ರಾಜ್ಯದ ಎಲ್ಲ ರೈತರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಜತೆಗೆ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ವಿರುದ್ಧವೂ ಹೋರಾಟ ಮಾಡುತ್ತಿದ್ದೇವೆ. ಕೊರೋನದಿಂದಾಗಿ ರಾಜ್ಯದಲ್ಲಿ ವ್ಯಾಪಾರ ವಹಿವಾಟು ನಿಂತು ಹೋಗಿದ್ದು ಜನ ನರಳಾಡಿದ್ದಾರೆ. ಸರಕಾರ ಯಾರ ಪರವಾಗಿಯೂ ನಿಂತಿಲ್ಲ. ಈಗ ಚೇತರಿಸಿಕೊಳ್ಳುವ ಹಂತದಲ್ಲಿ ಮೂರು ಭಾರಿ ವಿದ್ಯುತ್ ಬೆಲೆ ಏರಿಕೆ ಮಾಡ್ತಿದ್ದಾರೆ. ಗ್ಯಾಸ್ ಬೆಲೆಯೂ ಏರಿಕೆಯಾಗಿದೆ. ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚುತ್ತಲೇ ಇದೆ ಎಂದು ಟೀಕಿಸಿದರು.

ಆಸ್ತಿ ತೆರಿಗೆ ಮನ್ನಾಗೆ ನಾವು ಆಗ್ರಹಿಸುತ್ತಿರುವಾಗ, ವಿಶೇಷ ತೆರಿಗೆಯನ್ನು ಸರಕಾರ ವಿಧಿಸಿದೆ. ಖಾಲಿ ಜಾಗ ಇಟ್ಟುಕೊಂಡಿದ್ದರೂ ತೆರಿಗೆ ಬೀಳಲಿದೆ. ಈ ಮೂಲಕ ಹಣ ವಸೂಲಿಗೆ ಸರಕಾರ ಮುಂದಾಗಿದೆ. ಈ ಎಲ್ಲ ವಿಚಾರವಾಗಿ ನಮ್ಮ ಹೋರಾಟ ನಡೆಯಲಿದೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ನಿರ್ಮೂಲನೆ ಅಸಾಧ್ಯ: ಏಳು ಜನ್ಮ ಎತ್ತಿ ಬಂದರೂ ಕಾಂಗ್ರೆಸ್ ನಿರ್ಮೂಲನೆ ಅಸಾಧ್ಯ. ನಿನ್ನೆ ಸಿಎಂ ಕಾಂಗ್ರೆಸ್ ದೇಶಕ್ಕೆ ಮಾರಕ. ದೇಶವನ್ನು ಕಾಂಗ್ರೆಸ್ ಮುಕ್ತ ಮಾಡ್ತೇವೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ನಿಮ್ಮ ಪಾರ್ಟಿಯಲ್ಲಿರುವವರೆಲ್ಲ ಕಾಂಗ್ರೆಸ್ಸಿಗರೇ. ಅವರ ಇತಿಹಾಸ ಕಾಂಗ್ರೆಸ್ ಎಂದು ತಿರುಗೇಟು ನೀಡಿದರು.

‘ಯಡಿಯೂರಪ್ಪನವರೇ ನೀವು ಅಧಿಕಾರಕ್ಕೆ ಬಂದು ನಿಮಗೆ ಮಾತನಾಡುವ ಶಕ್ತಿ ಬಂದಿದ್ದೇ ಕಾಂಗ್ರೆಸ್ಸಿನಿಂದ. ನಾವು ತಯಾರು ಮಾಡಿದ ನಾಯಕರಿಂದ ಎಂಬುದನ್ನು ನೀವು ಮರೆಯಬೇಡಿ. ಈ ದೇಶಕ್ಕೆ ಸಂವಿಧಾನ ತಂದಿದ್ದು ಕಾಂಗ್ರೆಸ್ ಪಕ್ಷ. ಈ ದೇಶದ ಬುನಾದಿಯೇ ಕಾಂಗ್ರೆಸ್ ಬುನಾದಿ. ಕಾಂಗ್ರೆಸ್ ಪಕ್ಷ ನಿರ್ಮೂಲನೆ ಮಾಡುವ ಬಗ್ಗೆ ನಿಮ್ಮ ತಲೆಯಲ್ಲಿರುವ ಭ್ರಮೆಯನ್ನ ತೆಗೆದು ಹಾಕಿ.'

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News