ಸಿಎಂ ಬ್ಲ್ಯಾಕ್‌ಮೇಲ್ ಗೆ ಒಳಗಾಗಿದ್ದಾರೋ, ಒತ್ತಡಕ್ಕೆ ಒಳಗಾಗಿದ್ದಾರೋ ಗೊತ್ತಿಲ್ಲ: ಸಿದ್ದರಾಮಯ್ಯ

Update: 2021-01-14 16:17 GMT

ಮೈಸೂರು,ಜ.14: ಎಲ್ಲರಿಗೂ ಹಾಗೆ ಬ್ಲ್ಯಾಕ್‌ಮೇಲ್ ಮಾಡೋಕೆ ಆಗಲ್ಲ. ವೀಕ್ ಚೀಫ್ ಮಿನಿಸ್ಟರ್ ಗೆ ಮಾತ್ರ ಬ್ಲ್ಯಾಕ್‌ಮೇಲ್ ಮಾಡುತ್ತಾರೆ. ಅದರ ಬಗ್ಗೆ ಕ್ರಿಮಿನಲ್ ಕೇಸ್ ಹಾಕಲಿ. ಆ ಪಕ್ಷದವರೇ ಆರೋಪ ಮಾಡಿರೋದು, ನಾವೇನು ಆರೋಪ ಮಾಡುತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದ ತಮ್ಮ ನಿವಾಸದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿ, ಮೊದಲಿಗೆ ರಾಜ್ಯದ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದರು. ನಂತರ ಮಾತನಾಡಿದ ಅವರು, ಅವರ ಪಕ್ಷದವರೇ ಆರೋಪ ಮಾಡುತ್ತಿದ್ದಾರೆ ಅಂದರೆ ಅದರಲ್ಲಿ ಸತ್ಯ ಇದೆ ಅಲ್ವಾ? ನಾವು ಮಾಡಿದರೆ ವಿರೋಧ ಪಕ್ಷದವರು ಅಂತಾರೆ. ಸಿಎಂ ಬ್ಲ್ಯಾಕ್‌ಮೇಲ್ ಗೆ ಒಳಗಾಗಿದ್ದಾರೋ ಅಥವಾ ಒತ್ತಡಕ್ಕೆ ಒಳಗಾಗಿದ್ದಾರೋ ಅನ್ನೋದು ನನಗೆ ಗೊತ್ತಿಲ್ಲ. ಅದಕ್ಕೆಲ್ಲ ತನಿಖೆ ಮಾಡಿ ಅಂತ ಹೇಳಲ್ಲ. ಕ್ರಿಮಿನಲ್ ಕೇಸ್ ಕೊಡಲಿ ಎಂದು ಹೇಳುತ್ತೇನೆ ಎಂದಿದ್ದಾರೆ.

ಬಿಜೆಪಿನಲ್ಲಿ ಕುಟುಂಬ ರಾಜಕಾರಣ ಬಗ್ಗೆ ಹಿಂದೆಯೂ ನಾನು ಹೇಳಿದ್ದೆ. ಬಿಡಿಎ ಹಗರಣದಲ್ಲಿ 7 ಕೋಟಿ 40 ಲಕ್ಷ ರೂ. ಅವರ ಕುಟುಂಬದವರ ಅಕೌಂಟ್ ಗೆ ಹೋಗಿತ್ತು. ಅದರ ಅರ್ಥ ಕುಟುಂಬ ರಾಜಕಾರಣ ಇದೆ ಅಂತ ಅಲ್ವಾ. ಈ ಸರ್ಕಾರದ ಬಗ್ಗೆ ಜನ ಬೇಸತ್ತಿದ್ದಾರೆ. ಜನರೇ ಉತ್ತರ ಕೊಡುತ್ತಾರೆ. ನನ್ನ ಕಾಲದಲ್ಲಿ ಜಾರಿಗೊಳಿಸಿದ್ದ ಎಲ್ಲ ಜನಪರ ಕೆಲಸಗಳನ್ನು ನಿಲ್ಲಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನಾಯಕತ್ವ ಬದಲಾವಣೆಗೆ ಸಿದ್ದರಾಮಯ್ಯ ದಿನಾಂಕ ನಿಗದಿ ಮಾಡಲಿ ಎಂಬ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಇಷ್ಟು ದಿನಗಳ ಕಾಲ ಮಂತ್ರಿ ಮಂಡಲ ವಿಸ್ತರಣೆ ಯಾಕೆ ಮಾಡಿರಲಿಲ್ಲ. ಮಂತ್ರಿಮಂಡಲ ವಿಸ್ತರಣೆಗೆ ಯಾಕೆ ಲೇಟ್ ಆಯ್ತು. ಗೋಗರೆದು, ಕೈಕಾಲು ಕಟ್ಟಿ ಮಂತ್ರಿ ಮಂಡಲ ವಿಸ್ತರಣೆ ಮಾಡಿಸಿಕೊಂಡಿರೋದು ಎಂದು ಟೀಕಿಸಿದರು.

ಒಬ್ಬ ಸಚಿವನನ್ನು ಸಂಪುಟದಿಂದ ಬಿಟ್ಟಿದ್ದಾರೆ. ಯಾವ ಕಾರಣಕ್ಕೆ ಬಿಟ್ಟಿದ್ದಾರೆ ಎಂದು ಕಾರಣ ಕೊಟ್ಟಿಲ್ಲ. ಪಕ್ಷೇತರನಾಗಿ ಕಾಂಗ್ರೆಸ್ ಪಕ್ಷದ ಸಹಾಯದೊಂದಿಗೆ ಗೆದ್ದಿದ್ದ ಪಕ್ಷೇತರ ಶಾಸಕ ನಾಗೇಶ್ ರನ್ನ ಕೈಬಿಟ್ಟಿದ್ದಾರೆ. ಅವರನ್ನ ಯಾವ ಕಾರಣಕ್ಕೆ ಡ್ರಾಪ್ ಮಾಡಿದ್ದಾರೆ ಎಂದು ಹೇಳಿಲ್ಲ. ಅವರು ಕೂಡ ಆಪರೇಷನ್ ಕಮಲಕ್ಕೆ ಒಳಪಟ್ಟವರು ಎಂದು ಕಿಡಿಕಾರಿದರು. 

ಈಗ ಮುನಿರತ್ನನನ್ನು ಕೈ ಬಿಟ್ಟಿದ್ದಾರೆ. ಕಾನೂನು ತೊಡಕಿದೆ ಎಂದು ಗೊತ್ತಿದ್ದರೂ ಯಾಕೆ  ಕರೆದುಕೊಂಡರು. ಮಿನಿಸ್ಟರ್ ಮಾಡಲು ಆಗಲಿಲ್ಲ ಎಂದ ಮೇಲೆ ಯಾಕೆ ತೆಗೆದುಕೊಂಡ್ರು ಅವನನ್ನು? ವಿಶ್ವನಾಥ್ ಪಾಪ ಬಾಯಿ ಬಡ್ಕೊತ್ತಿದ್ದಾನೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News