ಖಾಸಗಿ ವಿಚಾರ ಮುಂದಿಟ್ಟು ರಾಜಕೀಯ ಮಾಡುವವರ ವಿರುದ್ಧ ಹೈಕಮಾಂಡ್ ಕ್ರಮವಹಿಸಬೇಕು: ಶಾಸಕ ಎಂ.ಪಿ. ಕುಮಾರಸ್ವಾಮಿ

Update: 2021-01-17 14:02 GMT

ಚಿಕ್ಕಮಗಳೂರು. ಜ.17: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಿರಿಯರು, ಹೋರಾಟಗಾರರು, ಅವರ ಹುದ್ದೆಗೆ ಗೌರವ ನೀಡಬೇಕು. ಪಕ್ಷದ ಹಿರಿಯ ನಾಯಕರು ಸಿಡಿ ವಿಚಾರ ಮಾತನಾಡುವುದನ್ನು ನಿಲ್ಲಿಸಬೇಕೆಂದು ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಮನವಿ ಮಾಡಿದರು.

ರವಿವಾರ ಮೂಡಿಗೆರೆ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಹಿರಿಯ ನಾಯಕರ ಬಗ್ಗೆ ಮಾತನಾಡಿದರೆ ಪಕ್ಷದ ಬಗ್ಗೆ ಮಾತನಾಡಿದಂತೆ. ಹಿರಿಯ ಶಾಸಕರು ಸಿಡಿಯ ಬಗ್ಗೆ ಮಾತನಾಡುತ್ತಿದ್ದಾರೆ. ಇಂತಹ ಹೇಳಿಕೆಯಿಂದ ಇಡೀ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಬಿಎಸ್‍ವೈ ಅವರ ವಯಸ್ಸು, ಅವರ ಹೋರಾಟ ಮತ್ತು ಹುದ್ದೆಗೆ ಗೌರವ ನೀಡಿ ಇಂತಹ ಹೇಳಿಕೆ ನೀಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದರು.

ಪಕ್ಷದ ಹಿರಿಯರಲ್ಲಿ ಸಿಎಂ ಬಗ್ಗೆ ಅಸಮಧಾನ ಉಂಟಾಗಲು ಅವರು ಮಂತ್ರಿಯಾಗಿಲ್ಲ ಎಂಬ ನೋವು ಇರಬಹುದು. ಆ ನೋವು ಎಲ್ಲರಿಗೂ ಇದೆ. ಖಾಸಗಿ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಬಾರದು. ಹೈಕಮಾಂಡ್ ಇಂತಹ ಹೇಳಿಕೆ ನೀಡುವುದರ ವಿರುದ್ಧ ನಿರ್ಬಂಧ ವಿಧಿಸಬೇಕು, ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪಕ್ಷದಲ್ಲಿ ಸಾಮಾಜಿಕ ನ್ಯಾಯ ಕಡಿಮೆಯಾಗಿರುವ ಬಗ್ಗೆ ನನಗೆ ಬೇಸರವಿದೆ. ನಾನೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೆ. ಆದರೆ ತನಗೆ ಸಮಾಜಿಕ ನ್ಯಾಯದಡಿಯಲ್ಲಿ ನ್ಯಾಯ ಸಿಕ್ಕಿಲ್ಲ. ಇದಕ್ಕೆ ನನಗೆ ಬೇಸರವೂ ಆಗಿದೆ. ಇದನ್ನು ಸಿಎಂ ಯಡಿಯೂರಪ್ಪ ಮುಂದೆ ಸರಿಪಡಿಸುವ ವಿಶ್ವಾಸವೂ ಇದೆ ಎಂದು ಇದೇ ವೇಳೆ ಎಂ.ಪಿ.ಕುಮಾರಸ್ವಾಮಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News