ಕುವೆಂಪು ತವರೂರಲ್ಲೇ ಕನ್ನಡ ಕಡೆಗಣನೆ ಸರಿಯಲ್ಲ: ಸಿಎಂಗೆ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಪತ್ರ

Update: 2021-01-18 14:15 GMT

ಬೆಂಗಳೂರು, ಜ.18: ದಕ್ಷಿಣ ರಾಜ್ಯಗಳಲ್ಲಿ ಹಿಂದಿ ಹೇರಿಕೆ ವಿಕೋಪಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ಜ.16ರಂದು ನಡೆದ ಸರಕಾರಿ ಕಾರ್ಯಕ್ರಮವಾದ ಕ್ಷಿಪ್ರ ಕಾರ್ಯಪಡೆ ಘಟಕ ಶಿಲಾನ್ಯಾಸದ ಸಂದರ್ಭದಲ್ಲಿ ಕನ್ನಡ ಸಾಹಿತ್ಯಕ್ಕೆ ಪ್ರಥಮ ಜ್ಞಾನಪೀಠ ಪ್ರಶಸ್ತಿ ದೊರಕಿಸಿಕೊಟ್ಟ ಕುವೆಂಪುರವರ ತವರೂರಲ್ಲೆ ಕನ್ನಡ ಕಡೆಗಣಿಸಿರುವುದು ಸರಿಯಲ್ಲ ಎಂದು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿರುವ ಅವರು, ಜ.16ರಂದು ಕೇಂದ್ರ ಗೃಹ ಮಂತ್ರಿಗಳು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಹೊರವಲಯದಲ್ಲಿರುವ ಮಿಲಿಟರಿ ಕ್ಯಾಂಪ್‍ನಲ್ಲಿ ಕ್ಷಿಪ್ರ ಕಾರ್ಯಪಡೆ ಘಟಕಕ್ಕೆ ಅಡಿಪಾಯ ಹಾಕಿ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿದರು. ಈ ಹಿಂದೆ ಅವರು ತಮಿಳುನಾಡಿಗೆ ಭೇಟಿ ಕೊಟ್ಟಿದ್ದಾಗ ತಮಿಳು ಭಾಷೆಯ ಫಲಕಗಳು, ಫ್ಲೆಕ್ಸ್ ಬೋರ್ಡ್‍ಗಳು ಹಾಗೆ ಮಧ್ಯಪ್ರದೇಶದ ಭೇಟಿಯ ಸಮಯದಲ್ಲಿ ಹಿಂದಿ ಭಾಷೆಯ ಫಲಕಗಳು, ಫ್ಲೆಕ್ಸ್ ಬೋರ್ಡ್ ಗಳನ್ನು ರಾರಾಜಿಸಿ ಅವರ ಮಾತೃಭಾಷೆಯ ಮಹತ್ವವನ್ನು ಮೆರೆದರು ಎಂದು ತಿಳಿಸಿದ್ದಾರೆ.

ಆದರೆ, ಕನ್ನಡದ ಮುಕುಟಮಣಿಗೆ ಮೊದಲ ಜ್ಞಾನಪೀಠ ಪ್ರಶಸ್ತಿ ದೊರಕಿಸಿಕೊಟ್ಟ ಕುವೆಂಪುರವರ ತವರು ಜಿಲ್ಲೆಯಾದ ಶಿವಮೊಗ್ಗಕ್ಕೆ ಭೇಟಿ ಕೊಟ್ಟಾಗ ಭಾಷೆ ಸೂಕ್ಷ್ಮ ವಿಚಾರವಾಗಿದ್ದರು ಈಗಾಗಲೆ ರಾಜ್ಯ ಪಾಲಿಸುತ್ತಿರುವ ತ್ರಿಭಾಷಾ ಸೂತ್ರವನ್ನೇ ಮರೆತು ಕೇಂದ್ರಗಳ ವಲಯಗಳಲ್ಲಿ ರಾಜ್ಯ ಮೂರನೆ ಸಾಲಿನಲ್ಲಿ ಸೇರುತ್ತವೆ ಎಂಬುದನ್ನು ಮರೆತು ಒಂದು ರಾಜಕೀಯ ಪಕ್ಷದ ಖಾಸಗಿ ಕಾರ್ಯಕ್ರಮದಂತೆ ಕೇಂದ್ರ ನಾಯಕರನ್ನು ಮೆಚ್ಚಿಸಲು ಕನ್ನಡವನ್ನು ಕಡೆಗಣಿಸಿ ಕೇವಲ ಹಿಂದಿ ಭಾಷೆಯ ಫಲಕಗಳನ್ನು ಮೆರೆಸಿ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದ್ದೀರಿ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದಾರೆ.

ಈಗಾಗಲೇ ಎಷ್ಟೋ ವಿಚಾರಗಳಾದ ನಾಡು, ನುಡಿ, ಗಡಿ ವಿಚಾರಗಳಿಗೆ ಸಂಬಂಧಿಸಿದಂತೆ ಕನ್ನಡ ಹೋರಾಟಗಾರರ ಪರ ಸರಕಾರ ನಿಲ್ಲದೆ ಇರುವುದು ದುರ್ದೈವದ ಸಂಗತಿ. ಇದೆ ರೀತಿಯ ಆನೆ ನಡೆದದ್ದೆ ದಾರಿ ಎಂಬ ಧೋರಣೆ ಪ್ರಜಾಪ್ರಭುತ್ವದಲ್ಲಿ ಸಲ್ಲದು, ಇದಕ್ಕೆ ಕಾರಣಕರ್ತರಾದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಚಂದ್ರಶೇಖರ್ ಆಗ್ರಹಿಸಿದ್ದಾರೆ.

ಹಾಗು ತಮ್ಮ ಸರಕಾರ ಅಧಿಕಾರ ನಡೆಸುತ್ತಿರುವುದು ಪ್ರಜ್ಞಾವಂತ, ಸ್ವಾಭಿಮಾನಿ ಕನ್ನಡ ಮತಬಾಂಧವರಿಂದಲೇ ಎಂಬುದನ್ನು ಮರೆಯಬಾರದು. ಈಗಾಗಲೇ ದಕ್ಷಿಣ ರಾಜ್ಯಗಳಲ್ಲಿ ಹಿಂದಿ ಹೇರಿಕೆಯ ವಿಚಾರ ವಿಕೋಪಕ್ಕೆ ಹೋಗುತ್ತಿದ್ದು ಇದು ಗಾಯದ ಮೇಲೆ ಬರೆ ಎಳೆದಂತೆ ಆಗುವುದಿಲ್ಲವೇ, ಇದು 7.5 ಕೋಟಿ ಕನ್ನಡಿಗರ ಸರಕಾರವೇ ಹೊರತು ಹಿಂದಿ ಭಾಷಿಗರ ಸರಕಾರವಲ್ಲ. ಆದುದರಿಂದ ನಾಡು, ನುಡಿ, ಗಡಿಯನ್ನು ಕಾಪಾಡಬೇಕಾದ ಸರಕಾರಗಳೇ ಈ ರೀತಿ ವರ್ತಿಸುವುದನ್ನು ಬಿಟ್ಟು ಮುಂದಿನ ದಿನಗಳಲ್ಲಿ ಈ ರೀತಿಯ ಅಚಾತುರ್ಯ ನಡೆಯದಂತೆ ಕನ್ನಡಿಗರ ಹಿತ ಕಾಯಬೇಕೆಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News