ಬಳ್ಳಾರಿ: ಕೋವಿಡ್ ಲಸಿಕೆ ಪಡೆದಿದ್ದ ನೌಕರ ಹೃದಯಾಘಾತದಿಂದ ಮೃತ್ಯು
ಬಳ್ಳಾರಿ, ಜ.18: ಕೋವಿಡ್-19 ಸಂಬಂಧ ಇತ್ತೀಚಿಗಷ್ಟೇ ಲಸಿಕೆ ಪಡೆದಿದ್ದ ಆರೋಗ್ಯ ಇಲಾಖೆಯ ಡಿ ದರ್ಜೆ ನೌಕರ ಹೃದಯಾಘಾದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಪವನ್ ಕುಮಾರ್ ಮಲಿಪಾಟಿ, ಜ.16ರಂದು ಕೊರೋನ ಲಸಿಕೆಯನ್ನು ಪಡೆದಿದ್ದ ಸಂಡೂರಿನ ಆರೋಗ್ಯ ಇಲಾಖೆ ಡಿ ದರ್ಜೆ ನೌಕರ ನಾಗರಾಜ್(43) ಅವರು ಸಾವನ್ನಪ್ಪಿದ್ದಾರೆ. ಆದರೆ, ನಾಗರಾಜ್ ಅವರಿಗೆ ಬಿಪಿ, ಮಧುಮೇಹ ಕಾಯಿಲೆ ಇತ್ತು. ಹಾಗಾಗಿ, ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಆರೋಗ್ಯ ಇಲಾಖೆಯ ಉದ್ಯೋಗಿಯಾಗಿರುವ ನಾಗರಾಜು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ಜ.16 ರಂದು ಲಸಿಕೆ ನೀಡಲಾಗಿತ್ತು. ಅವರು ಇಂದು ಬೆಳಗ್ಗೆ ತನಕ ಸಾಮಾನ್ಯವಾಗಿದ್ದರು. (ವ್ಯಾಕ್ಸಿನೇಷನ್ ಮಾಡಿದ 24 ಗಂಟೆಗಳಲ್ಲಿ ಯಾವುದೇ ಘಟನೆಗಳು ಸಂಭವಿಸಿಲ್ಲ). ಇಂದು ಬೆಳಗ್ಗೆ ಅವರು ಕರ್ತವ್ಯಕ್ಕೆ ಬಂದಾಗ ಎದೆ ನೋವಿನಿಂದ ಕುಸಿದುಬಿದ್ದರು. ತಕ್ಷಣ ಚಿಕಿತ್ಸೆ ನೀಡಲಾಗಿದ್ದು, ಆದರೆ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ಅದೇ ಬಾಟಲಿಯಿಂದ ಲಸಿಕೆ ತೆಗೆದುಕೊಂಡ ಇತರ ಆರೋಗ್ಯ ಕಾರ್ಯಕರ್ತರಲ್ಲಿ ಯಾರಿಗೂ ಯಾವುದೇ ಪ್ರತಿಕೂಲ ಘಟನೆಗಳು ನಡೆದಿಲ್ಲ. ನಾಗರಾಜು ಅವರು ಹೃದಯ ಮತ್ತು ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಬುಲೆಟಿನ್ ನಲ್ಲಿ ತಿಳಿಸಿದೆ.