ಲಾಕ್ ಡೌನ್ ನಿಂದಾಗಿ ದೊಡ್ಡ ಸಾಧನೆಯ ಕೆಲಸ ಮಾಡಲು ಆಗಲಿಲ್ಲ: ಮೇಯರ್ ತಸ್ನೀಂ ವಿಷಾದ

Update: 2021-01-22 18:29 GMT

ಮೈಸೂರು,ಜ.22: ಮೈಸೂರು ಪಾಲಿಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಓರ್ವ ಮುಸ್ಲಿಂ ಮಹಿಳೆ ಮೇಯರ್ ಆಗಿದ್ದರು. ಆದರೆ ಕೊರೋನ ಹಿನ್ನೆಲೆ ಲಾಕ್ ಡೌನ್ ಕಾರಣ ಮೇಯರ್ ಆಗಿ ದೊಡ್ಡ ಸಾಧನೆಯ ಕೆಲಸ ಏನು ಮಾಡಲಾಗಲಿಲ್ಲ ಎಂದು ಮೇಯರ್ ತಸ್ನೀಂ ವಿಷಾದ ವ್ಯಕ್ತಪಡಿಸಿದರು.

ಮೇಯರ್ ಅವಧಿ ಮುಕ್ತಾಯ ಕುರಿತು ಮಾಧ್ಯಮದವರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಸರ್ಕಾರದಿಂದ ಸೂಕ್ತ ಅನುದಾನ ಸಿಗಲಿಲ್ಲ, ಕೇವಲ ಮೂರ್ನಾಲ್ಕು ತಿಂಗಳುಗಳಷ್ಟೇ ಅಧಿಕಾರ ನಡೆಸಿದೆ. ನನಗೆ ಸಿಕ್ಕ ಕೇವಲ 4 ತಿಂಗಳ ಅವಧಿಯಲ್ಲಿ ತೃಪ್ತಿದಾಯಕ ಆಡಳಿತ ಮಾಡಿದ್ದೇನೆ ಎಂದರು.

ಯಾವುದೇ ಅಭಿವೃದ್ಧಿ ಕೆಲಸಕ್ಕೆ ಅನುದಾನ ಮುಖ್ಯ. ಆದರೆ, ನನಗೆ ಸರ್ಕಾರದಿಂದ ಯಾವುದೇ ಅನುದಾನ ಸಿಗಲಿಲ್ಲ. ಸಿಕ್ಕಿರುವ ಈ ಮೂರ್ನಾಲ್ಕು ತಿಂಗಳ ಅವಧಿಯ ಅವಕಾಶದಲ್ಲಿ ಸಾಧ್ಯವಾದಷ್ಟು ಉತ್ತಮ ಕೆಲಸ ಮಾಡಿದ್ದೇನೆ ತಿಳಿಸಿದರು.

ಪಾಲಿಕೆ ಮೈತ್ರಿ ಕುರಿತು ಉಪಮೇಯರ್ ಶ್ರೀಧರ್ ಮಾತನಾಡಿ, ಜೆಡಿಎಸ್ ಗೆ ಉತ್ತಮ ಬೆಂಬಲ ನೀಡಿದ್ದೇವೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮುರಿಯೋದಿಲ್ಲ ಎಂದು ಸ್ಪಷ್ಟಪಡಿಸಿದರು. ನಮ್ಮ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳು ನಡೆಯಲಿಲ್ಲ. ಬದಲಾಗಿ ಮೇಯರ್ ಹಾಗೂ ನನ್ನಿಂದ ಜನರ ಸೇವೆ ಚೆನ್ನಾಗಿ ಆಗಿದೆ. ಕೊರೋನ ಸಂದರ್ಭದಲ್ಲಿ ಜನ ಸೇವೆ ಅಗತ್ಯವಾಗಿತ್ತು. ಅದನ್ನು ಮಾಡಿದ್ದೇವೆ ಎಂದರು.

ಈ ಅವಧಿಯಲ್ಲಿ ಜೆಡಿಎಸ್ ಗೆ ಉತ್ತಮವಾಗಿ ಬೆಂಬಲ ನೀಡಿದ್ದೇವೆ. ಈ ಬಾರಿಯೂ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಇರಲಿದೆ. ಜೆಡಿಎಸ್ ನಲ್ಲಿ 5 ಮಂದಿ ಮುಸ್ಲಿಂ ಸದಸ್ಯರಿದ್ದಾರೆ. ಅವರು ಬಿಜೆಪಿ ಜೊತೆ ಕೈಜೋಡಿಸಲು ಒಪ್ಪುವುದಿಲ್ಲ. ಹೀಗಾಗಿ, ಜೆಡಿಎಸ್ ಮುಂದಿನ ಅವಧಿಗೂ ನಮಗೆ ಬೆಂಬಲ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News