ಕೆಎಸ್‌ಆರ್‌ಟಿಸಿ ಬಸ್- ಕಾರು ಮುಖಾಮುಖಿ ಢಿಕ್ಕಿ: ಮಹಿಳಾ ಪಿಎಸ್ಸೈ ಸಹಿತ ನಾಲ್ವರು ಮೃತ್ಯು

Update: 2021-01-24 14:46 GMT

ಬೆಳಗಾವಿ, ಜ. 24: ಕಾರು ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವೆ ಮುಖಾಮುಖಿ ಸಂಭವಿಸಿದ ಪರಿಣಾಮ ಮಹಿಳಾ ಪಿಎಸ್ಸೈ ಸೇರಿದಂತೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಚಚಡಿ ಕ್ರಾಸ್ ಬಳಿ ನಡೆದಿದೆ.

ಮೃತರನ್ನು ಪಿಎಸ್ಸೈ ಲಕ್ಷ್ಮೀ ಪವಾರ್(59), ಅವರ ಪುತ್ರ ಪ್ರಸಾದ್ ಪವಾರ್ ಹಾಗೂ ಅವರ ಸೊಸೆ ಅಂಕಿತಾ ಪವಾರ್ ಹಾಗೂ ದೀಪಾ ಶಹಾಪುರಕರ್ ಎಂದು ಗುರುತಿಸಲಾಗಿದೆ. ಬೆಳಗಾವಿ ನಗರದಿಂದ ಯರಗಟ್ಟಿಯತ್ತ ಹೊರಟಿದ್ದ ಕೆಎಸ್ಸಾರ್ಟಿಸಿ ಬಸ್‍ ಹಾಗೂ ಬೆಳಗಾವಿಗೆ ಬರುತ್ತಿದ್ದ ಕಾರಿನ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ ಎಂದು ಗೊತ್ತಾಗಿದೆ.

ಅಪಘಾತದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಮೃತಪಟ್ಟ ನಾಲ್ವರು ಬೆಳಗಾವಿಯ ಸಹ್ಯಾದ್ರಿ ನಗರ ನಿವಾಸಿಗಳಾಗಿದ್ದಾರೆ. ಇವರು ಸಂಬಂಧಿಕರ ಮನೆಗೆ ಹೋಗಿ ಬೆಳಗಾವಿಗೆ ಹಿಂದಿರುಗುವ ವೇಳೆ ಈ ಅವಘಡ ಸಂಭವಿಸಿದೆ.

ಕೆಎಸ್ಸಾರ್ಟಿಸಿ ಬಸ್ ಅಡಿಯಲ್ಲಿ ಸಿಲುಕಿರುವ ಕಾರನ್ನು ಕ್ರೇನ್ ಮೂಲಕ ಪೊಲೀಸರು ಹೊರ ತೆಗೆದಿದ್ದಾರೆ. ಸ್ಥಳಕ್ಕೆ ಮುರಗೋಡ ಪೊಲೀಸರು ಭೇಟಿ ನೀಡಿ ರಕ್ಷಣಾ ಕಾರ್ಯ ನಡೆಸಿದ್ದು, ಪ್ರಕರಣ ಸಂಬಂಧ ಮುರಗೋಡು ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News