ಜನರ ದಿಕ್ಕು ತಪ್ಪಿಸಲು ಸೌಮ್ಯಾರೆಡ್ಡಿ ವಿರುದ್ಧ ಅಪಪ್ರಚಾರ: ಡಾ.ಬಿ.ಪುಷ್ಪಾ ಅಮರನಾಥ್ ಆರೋಪ

Update: 2021-01-24 16:19 GMT

ಬೆಂಗಳೂರು, ಜ.24: ರೈತ ಧ್ವನಿ ಬೃಹತ್ ಪ್ರತಿಭಟನೆಯಿಂದ ಕಂಗಾಲಾಗಿರುವ ರಾಜ್ಯ ಸರಕಾರ, ಜನರ ಆಕ್ರೋಶದ ದಿಕ್ಕು ತಪ್ಪಿಸಲು ಶಾಸಕಿ ಸೌಮ್ಯಾ ರೆಡ್ಡಿ ವಿರುದ್ಧ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಬಿ.ಪುಷ್ಪಾ ಅಮರನಾಥ್ ಕಿಡಿಗಾರಿದ್ದಾರೆ.

ದೇಶದ ಮತ್ತು ರಾಜ್ಯದ ರೈತರು ಮೂರು ಕೃಷಿ ಕಾಯ್ದೆಗಳ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಅಭೂತಪೂರ್ವ ಹೋರಾಟದಿಂದ ಗೊಂದಲಕ್ಕೆ ಸಿಲುಕಿ, ವಿಚಲಿತರಾಗಿರುವ ಮುಖ್ಯಮಂತ್ರಿ ತಮ್ಮ ಕೈ ಗೊಂಬೆಗಳಾಗಿರುವ ಪೊಲೀಸ್ ಅಧಿಕಾರಿಗಳನ್ನು ಬಳಸಿಕೊಂಡು ಪ್ರತಿಭಟನೆಯ ಯಶಸ್ಸನ್ನು ದಿಕ್ಕು ತಪ್ಪಿಸಲು ಈ ರೀತಿಯ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

ಪ್ರತಿಭಟನೆಗಳಲ್ಲಿ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯುವುದು ಕಾನೂನಾತ್ಮಕವಾದ ಸಾಮಾನ್ಯ ಪ್ರಕ್ರಿಯೆ. ಬಿಜೆಪಿ ಸರಕಾರದ ಅನೇಕ ಜನ ಶಾಸಕರು, ಮಂತ್ರಿಗಳು ಇದೇ ರೀತಿ ಪ್ರತಿಭಟನೆಗಳನ್ನು ಮಾಡಿ ಅಭ್ಯಾಸ ಇರುವವರೇ. ಬಿಜೆಪಿ ಪಕ್ಷದ ಸಂಸದ ಪ್ರತಾಪ್ ಸಿಂಹ ಪೊಲೀಸ್ ನಾಕಾ ಬಂಧಿಯನ್ನು ಕಾಲಿನಲ್ಲಿ ಒದ್ದು ಪೊಲೀಸರ ಮೇಲೆ ವಾಹನವನ್ನು ಹತ್ತಿಸಿಕೊಂಡು ಹೋದ ಪ್ರಕರಣ ನಮ್ಮ ಕಣ್ಣ ಮುಂದಿದೆ ಎಂದು ಪುಷ್ಪಾ ಅಮರನಾಥ್ ನೆನಪಿಸಿದ್ದಾರೆ.

ಸಚಿವ ಜೆ.ಸಿ.ಮಾಧುಸ್ವಾಮಿ ಸರಕಾರಿ ಅಧಿಕಾರಿಗಳಿಗೆ ಕಪಾಳಕ್ಕೆ ಬಾರಿಸುವುದಾಗಿ ಹೇಳಿರುವುದು ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಬಿಜೆಪಿಯ ಮಂತ್ರಿಗಳು, ಶಾಸಕರು ಸ್ವತಃ ತಾವೇ ಕಾನೂನು ಉಲ್ಲಂಘನೆ ಮಾಡುವುದರಲ್ಲಿ ನಿಸ್ಸೀಮರಾಗಿದ್ದು, ತಮ್ಮ ಅನುಭವವವನ್ನು ಕಾಂಗ್ರೆಸ್ ಪಕ್ಷದ ನಾಯಕರ ಮೇಲೆ ಆರೋಪಿಸುವ ನೀಜ ರಾಜಕಾರಣವನ್ನು ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.

ಸಾಹಿತಿ ಹಂಪ ನಾಗರಾಜ್ ಅವರ ಮೇಲೆ ಯಾರೋ ಒಬ್ಬ ಮೂರನೇ ದರ್ಜೆ ವ್ಯಕ್ತಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಗೆ ಕರೆಸಿಕೊಂಡಿರುವುದು ನಾಡಿನ ಸಾರಸ್ವತ ಲೋಕಕ್ಕೆ ಮಾಡಿರುವ ಅವಮಾನ. ಯಡಿಯೂರಪ್ಪ ಸರಕಾರ ಅಧಿಕಾರಿಗಳ ಮೇಲೆ, ಆಡಳಿತ ಯಂತ್ರದ ಮೇಲೆ ನಿಯಂತ್ರಣ ಹೊಂದಿಲ್ಲದೆ, ಜನರ ಧ್ವನಿಯನ್ನು ಹತ್ತಿಕ್ಕಲು ಪೊಲೀಸರನ್ನು ಬಳಸಿಕೊಳ್ಳುತ್ತಿದೆ ಎಂದು ಪುಷ್ಪಾ ಅಮರನಾಥ್ ಆರೋಪಿಸಿದ್ದಾರೆ.

ಯಡಿಯೂರಪ್ಪ ಸರಕಾರ ರಾಜ್ಯವನ್ನು ಗೂಂಡಾಗಿರಿ ಮತ್ತು ಪೊಲೀಸ್ ಅಧಿಕಾರಿಗಳ ಮೂಲಕ ಹಿಡಿತದಲ್ಲಿಟ್ಟುಕೊಳ್ಳುವ ದುಸ್ಸಾಹಸಕ್ಕೆ ಕೈ ಹಾಕಿರುವುದನ್ನು ಮಹಿಳಾ ಕಾಂಗ್ರೆಸ್ ಖಂಡಿಸುತ್ತದೆ. ಶಾಸಕಿ ಸೌಮ್ಯಾ ರೆಡ್ಡಿ ವಿರುದ್ಧ ದಾಖಲಾಗಿರುವ ಪ್ರಕರಣ ಕಾನೂನಿನ ಮುಂದೆ ನ್ಯಾಯಾಲಯದಲ್ಲಿ ನಿಸ್ಸಂಶಯವಾಗಿ, ನಿರಪರಾಧಿಯಾಗಿ ಹೊರ ಬರುತ್ತಾರೆ. ಯಡಿಯೂರಪ್ಪ ಮತ್ತು ಬಿಜೆಪಿ ಪಕ್ಷದ ದುರಾಡಳಿತಕ್ಕೆ ರಾಜ್ಯದ ಜನತೆ, ರೈತರು, ಕಾರ್ಮಿಕರು, ಮಹಿಳೆಯರು ತಕ್ಕ ಪಾಠ ಕಲಿಸುತ್ತಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News