ಓ ಮೆಣಸೇ...

Update: 2021-01-24 19:30 GMT

ಭಾರತದ ಕೊರೋನ ಲಸಿಕೆಯ ಬಗ್ಗೆ ಜಗತ್ತಿನಾದ್ಯಂತ ಭಾರೀ ವಿಶ್ವಾಸ ವ್ಯಕ್ತವಾಗಿದೆ - ನರೇಂದ್ರ ಮೋದಿ, ಪ್ರಧಾನಿ
ಆದರೆ ಜನರಿಗೆ ನಿಮ್ಮ ಮಾತಿನಲ್ಲಿ ವಿಶ್ವಾಸ ಇಲ್ಲವಾಗಿದೆ.


ರಾಜ್ಯ ಬಿಜೆಪಿ ಸರಕಾರ ಅನೈತಿಕವಲ್ಲ - ಶ್ರೀರಾಮುಲು, ಸಚಿವ
ಸಿಡಿಯೊಳಗೆ ಇದ್ದದ್ದು ಮಾತ್ರ ಅನೈತಿಕವೇ?


ಸತ್ಯವನ್ನು ಹೇಳುವ ಧೈರ್ಯ ಮಾಡುವ ಏಕೈಕ ರಾಜಕಾರಣಿ ರಾಹುಲ್‌ಗಾಂಧಿಯನ್ನು ಇತಿಹಾಸ ನೆನಪಿಸಿಕೊಳ್ಳಲಿದೆ-ಮೆಹಬೂಬಾ ಮುಫ್ತ್ತಿ, ಪಿಡಿಪಿ ಅಧ್ಯಕ್ಷೆ
ವರ್ತಮಾನದಲ್ಲಿ ಅವರಿಗೆ ಸ್ಥಾನವಿಲ್ಲ ಎಂದರ್ಥವೇ?


 ಬಿಜೆಪಿ ಒಂದೇ ಇರುವುದು. ಮೂಲ ಬಿಜೆಪಿ, ಸ್ವಾಭಿಮಾನಿ ಬಿಜೆಪಿ ಎಂದು ಒಡೆಯಬೇಡಿ - ಎಸ್.ಅಂಗಾರ, ಸಚಿವ
ಸಿಡಿ ಬಿಜೆಪಿ ಎಂದು ಒಟ್ಟಾಗಿ ಕರೆಯಲು ಕರೆ.


ಕೋವಿಡ್ ಲಸಿಕೆ ಪಡೆಯಲು ನಾನು ಸಿದ್ಧ - ಯಡಿಯೂರಪ್ಪ, ಮುಖ್ಯಮಂತ್ರಿ
ಮತ್ತೇಕೆ, ತಡ ಪಡೆದುಕೊಳ್ಳಿ ಎಂದು ಆರೆಸ್ಸೆಸ್ ಒತ್ತಾಯಿಸುತ್ತಿದೆಯಂತೆ.


ಕೊರೋನಕ್ಕಿಂತ ಅಪಾಯಕಾರಿಯಾದುದು ಯಾವುದು ಗೊತ್ತೇ, ಅದು ಬಿಜೆಪಿ - ನುಸ್ರತ್ ಜಹಾನ್, ನಟಿ ಮತ್ತು ಸಂಸದೆ
ಸಂಘಪರಿವಾರ ಹರಡುತ್ತಿರುವ ಕೋಮು ವೈರಸ್‌ಗೆ ಲಸಿಕೆ ಇನ್ನೂ ಕಂಡು ಹಿಡಿದಿಲ್ಲ.


ತನ್ನ ಆಂತರಿಕ ವಿಷಯಗಳಲ್ಲಿ ಅನ್ಯರ ಹಸ್ತಕ್ಷೇಪವನ್ನು ನೇಪಾಳವು ಎಂದಿಗೂ ಸಹಿಸುವುದಿಲ್ಲ - ಪ್ರದೀಪ್ ಕುಮಾರ್ ಜ್ಞವಾಲಿ, ನೇಪಾಳ ವಿದೇಶಾಂಗ ಸಚಿವ
ಆ ಹಕ್ಕಿರುವುದು ಚೀನಾಕ್ಕೆ ಮಾತ್ರ ಇರಬೇಕು.


ಸ್ವಾತಂತ್ರ ಪೂರ್ವದಲ್ಲಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಜೋಡಿ ಇದ್ದಿದ್ದರೆ ಪಾಕಿಸ್ತಾನ ಹುಟ್ಟುತ್ತಿರಲಿಲ್ಲ- ಸಿ.ಟಿ.ರವಿ, ಮಾಜಿ ಸಚಿವ
ಭಾರತಕ್ಕೆ ಸ್ವಾತಂತ್ರ ಸಿಗುವುದಕ್ಕೆ ಇವರಿಬ್ಬರು ಬಿಡುತ್ತಿರಲಿಲ್ಲ.


ರಾಜಕೀಯದಲ್ಲಿ ಅತ್ಯಂತ ವಿವಾದಕ್ಕೀಡಾಗುತ್ತಿರುವ ವ್ಯಕ್ತಿ ನಾನೊಬ್ಬನೇ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಆದರೆ ಅತಿ ಹೆಚ್ಚು ಬೈಗುಳ ತಿಂದವರು ಮೋದಿಯಂತೆ, ಸಚಿವ ಸಿ.ಟಿ. ರವಿಯವರ ಪ್ರಕಾರ.


ನಾನು ಮನಃಪೂರ್ವಕವಾಗಿ ಬಿಜೆಪಿಗೆ ಸೇರಿದ್ದಲ್ಲ - ಎ.ಮಂಜು, ಮಾಜಿ ಸಚಿವ
ಹಣಃಪೂರ್ವಕವಾಗಿ ಸೇರಿರಬೇಕು.


ಬಿಜೆಪಿ ನನಗೆ ತಾಯಿ ಇದ್ದಂತೆ. ಯಡಿಯೂರಪ್ಪ ತಂದೆ ಇದ್ದಂತೆ - ರೇಣುಕಾಚಾರ್ಯ, ಮಾಜಿ ಸಚಿವ
ಹಾಗಾದರೆ ಗೋಮಾತೆ ನಿಮ್ಮ ಅಜ್ಜಿ ಇರಬಹುದೇ?


ಯಡಿಯೂರಪ್ಪ ಹಿರಿಯರು, ಹೋರಾಟಗಾರರು. ಪಕ್ಷದ ಹಿರಿಯ ನಾಯಕರು ಸಿಡಿ ವಿಚಾರದಲ್ಲಿ ಮಾತನಾಡುವುದನ್ನು ನಿಲ್ಲಿಸಬೇಕು - ಎಂ.ಪಿ.ಕುಮಾರಸ್ವಾಮಿ, ಶಾಸಕ
ಮಾತನಾಡುವುದನ್ನು ನಿಲ್ಲಿಸಿ ಸಿಡಿಯನ್ನು ವೌನವಾಗಿ ವೀಕ್ಷಿಸಿ ಎಂದೇ?


ಕಾಂಗ್ರೆಸ್ ಸರಕಾರಕ್ಕೆ ನಿಯತ್ತು ಇರಲಿಲ್ಲವಾದ್ದರಿಂದ ರೈತಪರ ನೀತಿ ಜಾರಿಗೊಳಿಸಲೇ ಇಲ್ಲ - ಅಮಿತ್ ಶಾ, ಕೇಂದ್ರ ಸಚಿವ
ಆಗ ಅಂಬಾನಿ, ಅದಾನಿಗಳು ಕೃಷಿ ಕೆಲಸ ಮಾಡುತ್ತಿರಲಿಲ್ಲ.


ನಾನು ಸುಮ್ಮನೆ ಇದ್ದಿದ್ದರೆ ಇಷ್ಟು ಹೊತ್ತಿಗೆ ಮುಖ್ಯಮಂತ್ರಿಯಾಗುತ್ತಿದ್ದೆ - ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ಮುಖ್ಯಮಂತ್ರಿಯಾಗುವುದು ಇಷ್ಟವಿಲ್ಲ ಎನ್ನುವ ಕಾರಣಕ್ಕಾಗಿ ಮಾತನಾಡುತ್ತಿದ್ದೀರಿ ಎಂದು ಕಾಣುತ್ತದೆ.


ಭೋಗಿಗಳು, ಲೋಬಿಗಳು ಪಕ್ಷ ತೊರೆಯುತ್ತಾರೆ. ತ್ಯಾಗಿಗಳು ಪಕ್ಷದಲ್ಲೇ ಉಳಿಯುತ್ತಾರೆ - ಮಮತಾ ಬ್ಯಾನರ್ಜಿ, ಪ.ಬಂ.ಮುಖ್ಯಮಂತ್ರಿ
ನೀವು ಕಾಂಗ್ರೆಸ್ ತೊರೆದದ್ದು ಏನನ್ನು ಹೇಳುತ್ತದೆ?


ರಜನೀ ಮಕ್ಕಳ್ ಮನ್ರಮ್ ಕಾರ್ಯಕರ್ತರು ಯಾವುದೇ ಪಕ್ಷ ಸೇರಲು ಸ್ವತಂತ್ರರು - ರಜನಿಕಾಂತ್, ನಟ
ನಿಮ್ಮ ಮಕ್ಕಳು ಸದ್ಯಕ್ಕೆ ಯಾವ ಪಕ್ಷದಲ್ಲಿದ್ದಾರೆ?


ಕೊರೋನ ಲಸಿಕೆಯಂತೆ ಭ್ರಷ್ಟಚಾರ ತಡೆಗೂ ಲಸಿಕೆ ಕಂಡುಹಿಡಿಯ ಬೇಕಾಗುತ್ತದೆ -ಅಬ್ದುಲ್ ಅಝೀಮ್, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ
ಲೋಕಾಯುಕ್ತವನ್ನು ಆರೋಗ್ಯಪೂರ್ಣಗೊಳಿಸಲು ಲಸಿಕೆ ತಯಾರಿಸಿದರೆ ಭ್ರಷ್ಟಾಚಾರ ವೈರಸ್ ಇಲ್ಲವಾಗುತ್ತದೆ.


ರಾಮರಾಜ್ಯದ ಕನಸು ಕಂಡ ಮಹಾತ್ಮಾಗಾಂಧಿ ಮತ್ತು ಪೇಜಾವರ ಮಠ ವಿಶ್ವೇಶತೀರ್ಥ ಸ್ವಾಮೀಜಿಯ ಕನಸು ನನಸಾಗುತ್ತಿದೆ - ಯಡಿಯೂರಪ್ಪ, ಮುಖ್ಯಮಂತ್ರಿ
ರಾಮರಾಜ್ಯದ ಕನಸು ಕಂಡದ್ದಕ್ಕೆ ಗಾಂಧಿಯನ್ನು ಗುಂಡಿಟ್ಟು ಕೊಲ್ಲಲಾಯಿತೇ?


ಸಚಿವನಾಗಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಹಾಗಂತ ಹಾದಿ-ಬೀದಿಯಲ್ಲಿ ಮಾತನಾಡಬಾರದು - ಬೈರತಿ ಬಸವರಾಜ್, ಸಚಿವ
ಹಾದಿ ಬೀದಿಯಲ್ಲೆಲ್ಲ ಸಿಡಿಯನ್ನು ಮಾರಬಾರದು ಎಂದು ಹೇಳುತ್ತಿದ್ದಾರೆ.


ಬಿಜೆಪಿ ಪ್ರೈವೇಟ್ ಲಿಮಿಟೆಡ್ ಕಂಪೆನಿ ಅಲ್ಲ - ಸುವೇಂದು ಅಧಿಕಾರಿ, ಪ.ಬಂ. ಬಿಜೆಪಿ ನಾಯಕ
ಅದೀಗ ರಿಲಯನ್ಸ್ ಕಂಪೆನಿಯ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದೆ.


2019ರ ಬಾಲಾಕೋಟ್ ಮೇಲಿನ ದಾಳಿಯನ್ನು ಬಿಜೆಪಿ ಚುನಾವಣಾ ಲಾಭಕ್ಕಾಗಿ ಬಳಸಿತ್ತು- ಇಮ್ರಾನ್‌ಖಾನ್, ಪಾಕ್ ಪ್ರಧಾನಿ
ಅದನ್ನು ನೀವು ಯಾವುದಕ್ಕೆ ಬಳಸಿಕೊಂಡಿರಿ?


ಜನರ ಭಾವನೆಗಳಿಗೆ ಧಕ್ಕೆಯಾಗಬಹುದಾದಂತಹ ಪುಸ್ತಕಗಳನ್ನು ಗ್ರಂಥಾಲಯ ಇಲಾಖೆ ಖರೀದಿಸುವುದಿಲ್ಲ -ಸುರೇಶ್‌ಕುಮಾರ್, ಸಚಿವ
ಇನ್ನು ಗ್ರಂಥಾಲಯ ಭಜನೆ, ವಾಸ್ತು, ಭವಿಷ್ಯ ಪುಸ್ತಕಗಳಿಗಷ್ಟೇ ಸೀಮಿತವಂತೆ.


ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಒಬ್ಬ ಹಾಸ್ಯಗಾರನಂತೆ ಮಾತನಾಡುತ್ತಿದ್ದಾರೆ - ಹರೀಶ್‌ಕುಮಾರ್, ವಿ.ಪ.ಸದಸ್ಯ
ಬಿಜೆಪಿಯನ್ನು ನಗಿಸುವುದಕ್ಕಾಗಿಯೇ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಆದರೆ ಯಡಿಯೂರಪ್ಪರ ಮುಖದಲ್ಲಿ ನಗು ತರಿಸಲು ಅವರು ವಿಫಲರಾಗಿದ್ದಾರಂತೆ.


ನಾನು ಮಂತ್ರಿಯಾಗುವ ಏಕೈಕ ಉದ್ದೇಶದಿಂದ ಬಿಜೆಪಿಗೆ ಬಂದಿಲ್ಲ - ಎಚ್.ವಿಶ್ವನಾಥ್, ವಿ.ಪ.ಸದಸ್ಯ
ಬಿಜೆಪಿಯಲ್ಲಿ ಭಿನ್ನಮತ ಸೃಷ್ಟಿಸುವುದಕ್ಕಾಗಿ ಸೇರಿರಬಹುದೇ?


ದಿಲ್ಲಿ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ರೈತರ ಪ್ರತಿಭಟನೆ ಎಂದು ಕರೆಯುವುದು ಸೂಕ್ತವಲ್ಲ - ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ
ದೇಶದ ಎರಡನೇ ಸ್ವಾತಂತ್ರ ಹೋರಾಟ ಎಂದು ಕರೆಯೋಣವೇ?

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...